ಬಾಂಗ್ಲಾ ಬೆಳವಣಿಗೆ ಸ್ವಾತಂತ್ರ್ಯದ ಮೌಲ್ಯ ನೆನಪಿಸುತ್ತಿದೆ: ಡಿ.ವೈ. ಚಂದ್ರಚೂಡ್‌ ನವದೆಹಲಿ: ‘ಬಾಂಗ್ಲಾ‌ದೇಶದ ಇತ್ತೀಚಿನ ಬೆಳವಣಿಗೆಗಳು ನಮ್ಮ ಸ್ವಾತಂತ್ರ್ಯ ಮತ್ತು ಅದರ ಮೌಲ್ಯಗಳನ್ನು ನಮಗೆ ನೆನಪು ಮಾಡಿಕೊಡುತ್ತವೆ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಗುರುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ಸ್ವಾತಂತ್ರ್ಯ ದಿನಾಚರಣೆಯು ರಾಷ್ಟ್ರದ ಜನತೆಗೆ ತಮ್ಮ ಕರ್ತವ್ಯಗಳನ್ನು ನೆನಪಿಸುವ ಜತೆಗೆ, ಪ್ರತಿಯೊಬ್ಬರಿಗೂ ಸಂವಿಧಾನದ ಮೌಲ್ಯಗಳನ್ನು ಅರಿಕೆ ಮಾಡಿಸುತ್ತದೆ' ಎಂದು ಹೇಳಿದರು. ‘ಬಾಂಗ್ಲಾದೇಶದಲ್ಲಿ ಇಂದು ಏನಾಗುತ್ತಿದೆ. ಸ್ವಾತಂತ್ರ್ಯವು ನಮಗೆ ಎಷ್ಟು ಅಮೂಲ್ಯವಾದುದು ಎಂಬುದನ್ನು ಸ್ಪಷ್ಟವಾಗಿ ನೆನಪಿಸುತ್ತಿದೆ. ಸ್ವಾತಂತ್ರ್ಯವನ್ನು ಲಘುವಾಗಿ ತೆಗೆದುಕೊಳ್ಳುವುದು ತುಂಬಾ ಸುಲಭ. ಆದರೆ, ಈ ವಿಷಯಗಳು ಎಷ್ಟು ಮುಖ್ಯವೆಂದು ತಿಳಿಯಬೇಕಾದರೆ ದೇಶ ಸಾಗಿ ಬಂದ ಹಿಂದಿನ ಕಥೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ’ ಎಂದು ಅವರು ಹೇಳಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ಸಂವಿಧಾನವು ಎಲ್ಲಕ್ಕಿಂತ ಶ್ರೇಷ್ಠವಾದುದು ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.