ಉಪ ಚುನಾವಣೆ ನಡೆಯುವ ಜಿಲ್ಲೆಗಳ ಯಾದವ, ಮುಸ್ಲಿಂ ಅಧಿಕಾರಿಗಳ ವರ್ಗಾವಣೆ: ಅಖಿಲೇಶ್ ಲಖನೌ: ಉಪಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಯಾದವ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಲಾಗಿದೆ ಎಂದು ಸಮಾಜವಾದಿ (ಎಸ್‌.ಪಿ.) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದರ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ಈಗಾಗಲೇ ಬಿಜೆಪಿಯನ್ನು ಮಣಿಸಲು ರಾಜ್ಯದ ಜನ ನಿರ್ಧರಿಸಿದ್ದು, ಉಪಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಬಾಹ್ಯ ಕೆಲಸದಿಂದ (ಕಚೇರಿ ಹೊರಗಿನ ಕೆಲಸ) ಯಾದವ ಹಾಗೂ ಮುಸ್ಲಿಂ ಅಧಿಕಾರಿಗಳನ್ನು ತೆಗೆದು ಹಾಕಿರುವುದನ್ನು ಚುನಾವಣಾ ಆಯೋಗ ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಆರೋಪವನ್ನು ಬಿಜೆಪಿ ನಾಯಕರು ನಿರಾಕರಿಸಿದ್ದು, ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಮೆರಿಟ್ ಆಧಾರದಲ್ಲಿ ವರ್ಗಾವಣೆ ನಡೆದಿದೆ ಎಂದು ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಹಾಗೂ ಯಾದವ ಸಮುದಾಯದ ಅಧಿಕಾರಿಗಳು ತಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ್ದರಿಂದ ಕೇವಲ 33 ಕ್ಷೇತ್ರಗಳಲ್ಲಿ ಗೆಲ್ಲುವಂತಾಯಿತು ಎಂದು ಬಿಜೆಪಿಯ ಹಿರಿಯ ನಾಯಕರಲ್ಲಿ ಹಲವರು ಆರೋಪಿಸಿದ್ದರು. ಪಕ್ಷದ ಹಿರಿಯ ನಾಯಕರು ಹಾಗೂ ಅಭ್ಯರ್ಥಿಗಳ ಸೋಲಿಗೆ ಇದೂ ಇಂದು ಕಾರಣ ಎಂದು ಹೈ ಕಮಾಂಡ್‌ಗೆ ಸಲ್ಲಿಸಲಾದ ವರದಿಯಲ್ಲೂ ಹೇಳಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.