ಕಾಂಗ್ರೆಸ್'ನಲ್ಲಿ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ: ಡಿಕೆಶಿಗೆ ಅಶೋಕ್ ಟಾಂಗ್ ಹೈಕಮಾಂಡ್ ಏಜೆಂಟ್ ಗಳಾದ ರಂದೀಪ್ ಸಿಂಗ್ ಸುರ್ಜೇವಲಾ ಹಾಗು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಸಿಎಂ ಶಿವಕುಮಾರ್ ಅವರ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಜೀವನವೆಲ್ಲಾ ಕಾಂಗ್ರೆಸ್ ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಕಾಲೆಳೆದಿದ್ದಾರೆ.ರಾಜ್ಯ ಕಾಂಗ್ರೆಸ್‌ನಲ್ಲಿ ನಾನೂ ಸಿಎಂ ಆಕಾಂಕ್ಷಿ ಎಂಬ ಕೂಗು ಜೋರಾಗಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಮುಡಾ ಸಂಕಷ್ಟದಲ್ಲಿ ಸಿಲುಕಿದ್ದರೆ. ಮತ್ತೊಂದೆಡೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು, ದೆಹಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ.ಈ ನಡುವೆ ಡಿಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರ ಕುರಿತು ಕಾಂಗ್ರೆಸ್ ಹೈಕಮಾಡ್ ಡಿಕೆ.ಶಿವಕುಮಾರ್ ಅವರ ಮೇಲೆ ಗರಂ ಆಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ.ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಡಿಕೆ.ಶಿವಕುಮಾರ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ದಿನ ಬೆಳಗಾದರೆ ಒಬ್ಬರಲ್ಲ ಒಬ್ಬ ನಾಯಕರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕುತ್ತಿದ್ದು, ಈ ರಾಜಕೀಯ ಮೇಲಾಟಕ್ಕೆ ಹಬ್ಬದ ದಿವಸವೂ ವಿರಾಮವಿಲ್ಲದಂತಾಗಿದೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನವರ ಕುರ್ಚಿಗೆ ಬಂದಿರುವ ಕಂಟಕವನ್ನ ಸ್ವತಃ ಆ ವಿಘ್ನ ವಿನಾಯಕನೂ ತಪ್ಪಿಸಲಾರ ಅನ್ನಿಸುತ್ತಿದೆ.ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸ್ವಪಕ್ಷದ ನಾಯಕರೇ ಬಕ ಪಕ್ಷಿಗಳಂತೆ ಕಾಯುತ್ತಿದ್ದು, ಸಿಎಂ ಕುರ್ಚಿ ಖಾಲಿ ಆಗುವ ಮುನ್ನವೇ ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ. ಈ ಬೆಳವಣಿಗೆಗಳನ್ನೆಲ್ಲ ಗಮನಿಸುತ್ತಿದ್ದರೆ ಮೂಡಾ ಹಣಗರಣವನ್ನ ಬಯಲು ಮಾಡಿರುವ ಹಿಂದೆಯೂ ಕಾಂಗ್ರೆಸ್ ನಾಯಕರ 'ಕೈ'ವಾಡವಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.ಮತ್ತೊಂದು ಪೋಸ್ಟ್ ನಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗುತ್ತಿರುವ ನಡುವೆಯೇ, ಹೈಕಮಾಂಡ್ ಏಜೆಂಟ್ ಗಳಾದ ರಂದೀಪ್ ಸಿಂಗ್ ಸುರ್ಜೇವಲಾ ಹಾಗು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಸಿಎಂ ಶಿವಕುಮಾರ್ ಅವರ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಡಿಕೆ ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಜೀವನವೆಲ್ಲಾ ಕಾಂಗ್ರೆಸ್ ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ.ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಪಕ್ಕದ ಆಂಧ್ರ ಪ್ರದೇಶದ ಜಗನ್ ರೆಡ್ಡಿ ಅವರವರೆಗೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದ ಮೇಲೆಯೇ ಮುಖ್ಯಮಂತ್ರಿ ಆಗಲಿಕ್ಕೆ ಸಾಧ್ಯವಾಗಿದ್ದು. ಇತಿಹಾಸದ ಅರಿವಿದ್ದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕಾಂಗ್ರೆಸ್ ಪಕ್ಷದ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸಿದ್ದೇನೆಂದು ವ್ಯಂಗ್ಯವಾಡಿದ್ದಾರೆ.