: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಶಾಸಕ ಹಕ್ಕು ಚ್ಯುತಿ ಮಂಡನೆ ಜುಲೈ 19ರಂದು ನಾನು ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ನನ್ನನ್ನು ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ ಮತ್ತು ನಾನು ಮಾತನಾಡದಂತೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ನೀಡಬೇಕು ಎಂದು ಪ್ರದೀಪ್‌ ಈಶ್ವರ್‌ ಮನವಿ ಮಾಡಿದ್ದಾರೆ. ಬೆಂಗಳೂರು: ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಸದನದಲ್ಲಿ ( ) ಸೋಮವಾರ ಹಕ್ಕು ಚ್ಯುತಿ ಮಂಡನೆ ಮಾಡಿದ್ದಾರೆ.ಸದನದಲ್ಲಿ ಚರ್ಚೆ ವೇಳೆ ನಡೆದ ಗದ್ದಲದ ನಡುವೆ ಆರ್ ಅಶೋಕ್ ಅವರು ತಮ್ಮ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್ ಅಶೋಕ್ ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ ಸ್ಪೀಕರ್ ಯುಟಿ ಖಾದರ್ ಅವರನ್ನು ಒತ್ತಾಯಿಸಿದ್ದಾರೆ.16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಜುಲೈ 19ರಂದು ನಾನು ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ನನ್ನನ್ನು ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ ಮತ್ತು ನಾನು ಮಾತನಾಡದಂತೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ನೀಡಬೇಕು ಎಂದು ಪ್ರದೀಪ್‌ ಈಶ್ವರ್‌ ಮನವಿ ಮಾಡಿದ್ದರು. ಹೀಗಾಗಿ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ ಯು.ಟಿ. ಖಾದರ್‌ ಅನುಮತಿ ನೀಡಿದರು.ಆರ್.ಆಶೋಕ್ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿ ಮಾತನಾಡಿದ ಪ್ರದೀಪ್ ಈಶ್ವರ್, 'ಮೊದಲ ಬಾರಿ ಶಾಸಕರಾದಾಗ ಖುಷಿ ಪಡಲು ಆರ್. ಆಶೋಕ್ ಅವರ ತಂದೆ-ತಾಯಿ ಇದ್ದರು. ಆದರೆ, ನಾನು ಶಾಸಕನಾದಾಗ ಖುಷಿ ಪಡಲು ನನ್ನ ತಂದೆ-ತಾಯಿ ಇರಲಿಲ್ಲ. ನಾನು ತಂದೆ-ತಾಯಿ ಕಳೆದುಕೊಂಡು ಪೇರೆಸಂದ್ರ ಗ್ರಾಮದಲ್ಲಿ ದಿನಗೂಲಿ ಮಾಡಿ ದ್ದೇನೆ, ತೋಟಕ್ಕೆ ನೀರು ಹರಿಸಿದ್ದೇನೆ. ಶಾಸಕನಾದ ಬಳಿಕ ಜನರಿಗೆ ಅನುಕೂಲವಾಗಲು 10 ಉಚಿತ ಆಂಬ್ಯುಲೆನ್ಸ್ ನೀಡಿದ್ದೇನೆ.ಅನೇಕ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಆರ್. ಆಶೋಕ್ ಅಣ್ಣಾನ ಬಗ್ಗೆ ನನಗೆ ಗೌರವ ಇದೆ, ಅವರು ಮಾತುಗಳ ಬಗ್ಗೆ ನನಗೆ ಉತ್ತರ ಕೊಡಲಿ ಎಂದು ಹೇಳಿದರು.ಬಳಿಕ ಸ್ಪೀಕರ್ ಆರ್ ಅಶೋಕ್ ಅವರಿಗೆ ಸ್ಪಷ್ಟನೆ ನೀಡಲು ಅವಕಾಶ ನೀಡಿದ್ದು, ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, 'ನಾನು ಯಾವುದೇ ತಪ್ಪು ಪದ ಬಳಕೆ ಮಾಡಿಲ್ಲ. ದಾಖಲೆ ತೆಗೆದು ನೋಡಿದರೆ ಗೊತ್ತಾಗುತ್ತದೆ. ಒಂದು ವೇಳೆ ಅವರ ಪ್ರಕಾರ ತಪ್ಪು ಮಾಡಿದ್ದೇನೆಂದು ಎನಿಸಿದರೆ ಪರಿಶೀಲನೆ ಮಾಡಲಿ, ಅವರು ಕೂಡ ಮಾತನಾಡುವ ಭರದಲ್ಲಿ ಬೇರೆ ಬೇರೆ ಭಾಷೆ ಬಳಸಿದ್ದಾರೆ. ಅದರ ಬಗ್ಗೆ ನಾವು ಚಕಾರ ಎತ್ತಿಲ್ಲ. ಪರಿಶೀಲನೆ ಮಾಡಿ ದಾಖಲೆಯಲ್ಲಿ ಇದ್ದರೆ ತೆಗೆದು ಹಾಕಿ, ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು.ಇಬ್ಬರು ಸದಸ್ಯರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸ್ಪೀಕರ್‌ ಖಾದರ್‌ ಅವರು, ಪ್ರದೀಪ್‌ ಈಶ್ವರ್‌ ಅವರು ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಅಶೋಕ್‌ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನಾನು ಕಲಾಪದ ವಿಡಿಯೊ ತರಿಸಿಕೊಂಡು ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.25 ಕೋಟಿ ಅನುದಾನ ಬಗ್ಗೆ ಮಾಹಿತಿ ನೀಡಲಿ ಎಂದ ಸಿಮೆಂಟ್ ಮಂಜುಈ ವೇಳೆ ಸಿಮೆಂಟ್ ಮಂಜು ಮಾತನಾಡಿ, ಒಬ್ಬ ಶಾಸಕನಿಗೆ ಸಿಎಂ 25 ಕೋಟಿ ಅನುದಾನ ನೀಡಿದ್ದಾರೆ ಅಂತ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಯಾರಿಗೆ ಕೊಟ್ಟಿದ್ದಾರೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಪೀಕರ್‌ ಪ್ರತಿಕ್ರಿಯಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ವಿಚಾರ ಚರ್ಚೆ ಮಾಡಲು ಆಗಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.