ನಮಗೋಸ್ಕರ ನೀವು ಯಾಕೆ ಬಟ್ಟೆ ಹರಿದುಕೊಳ್ಳುತ್ತೀರಾ? ನಾವೆಲ್ಲಾ ಒಂದೇ; ರಾಜಿನಾಮೆ ಕೊಡಲ್ಲ- ಪ್ರದೀಪ್ ಈಶ್ವರ್ ನಾನು ರಾಜೀನಾಮೆ ಕೊಟ್ರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ ಆದರೆ ಅವರಿಗೆ ನಾನು ಆ ನೆಮ್ಮದಿ ಕೊಡಲ್ಲ ಎಂದು ಪ್ರದೀಪ್ ಈಶ್ವರ್ ತಿಳಿಸಿದರು. ಚಿಕ್ಕಬಳ್ಳಾಪುರ: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ. ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡಬೇಕೆಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆಗೆ ಆಗ್ರಹ ಮಾಡಿದ ವಿರೋಧ ಪಕ್ಷದವರಿಗೆ ಧನ್ಯವಾದ. ಸುಧಾಕರ್‌ ಅವರು ನನ್ನ ಸವಾಲು ಸ್ವೀಕಾರ ಮಾಡಿರಲಿಲ್ಲ. ನನ್ನ ಸವಾಲು ಸ್ವೀಕರಿಸುತ್ತಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ ಎಂದು ಹೇಳಿದರು.ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ. ಬಿಜೆಪಿಯವರು ನಾನು ರಾಜೀನಾಮೆ ಕೊಡಬಹುದು ಎಂದು ಕಾಯ್ತಿದ್ದಾರೆ. ನಾನು ರಾಜೀನಾಮೆ ಕೊಟ್ರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ ಆದರೆ ಅವರಿಗೆ ನಾನು ಆ ನೆಮ್ಮದಿ ಕೊಡಲ್ಲ ಎಂದು ಪ್ರದೀಪ್ ಈಶ್ವರ್ ತಿಳಿಸಿದರು. ಡಾ.ಕೆ.ಸುಧಾಕರ್ ಅವರಿಗೆ ಜನಾಭಿಪ್ರಾಯ ಸಿಕ್ಕಿದೆ. ಸಂಸದರಾಗಿರುವುದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗಲಿ.ರಾಜಕೀಯದಲ್ಲಿ ನಾವೆಲ್ಲ ಒಂದೇ ಎಂದು ಹೇಳುವ ಮೂಲಕ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದ್ದಾರೆ.ನಮಗೋಸ್ಕರ ನೀವು ಯಾಕೆ ಬಟ್ಟೆ ಹರಿದುಕೊಳ್ಳುತ್ತೀರಾ? ಸುಧಾಕರ್ ದೆಹಲಿಯಲ್ಲಿ ಇರ್ತಾರೆ ನಾನು ಬೆಂಗಳೂರಿನಲ್ಲಿ ಇರ್ತೀನಿ, ನಾವೆಲ್ಲ ಒಂದೇ. ನೀವ್ಯಾಕೆ ಗಲಾಟೆ ಮಾಡಿಕೊಂಡು ಸಮಸ್ಯೆ ಮಾಡಿಕೊಳ್ಳುತ್ತೀರಾ? ಎಂದು ಹೇಳಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತೆ ನಮಸ್ತೆ ಚಿಕ್ಕಬಳ್ಳಾಪುರ ಶುರು ಮಾಡಿದ್ದಾರೆ.