ಕಂಗನಾ ಸಿನಿಮಾ 'ಎಮರ್ಜೆನ್ಸಿ'ಗೆ ತಡೆ ಕೋರಿ ಶಿರೋಮಣಿ ಅಕಾಲಿ ದಳ ಲೀಗಲ್ ನೋಟಿಸ್! ಈ ಚಿತ್ರ 'ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ' ಮತ್ತು 'ತಪ್ಪು ಮಾಹಿತಿ ಹರಡಬಹುದು' ಎಂದು ಅಕಾಲಿ ದಳ ಆರೋಪಿಸಿದೆ. ನವದೆಹಲಿ: ದೆಹಲಿಯ ಶಿರೋಮಣಿ ಅಕಾಲಿದಳ(ಎಸ್‌ಎಡಿ) ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಕೋರಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ(ಸಿಬಿಎಫ್‌ಸಿ) ಲೀಗಲ್ ನೊಟೀಸ್ ನೀಡಿದೆ.ಈ ಚಿತ್ರ 'ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ' ಮತ್ತು 'ತಪ್ಪು ಮಾಹಿತಿ ಹರಡಬಹುದು' ಎಂದು ಅಕಾಲಿ ದಳ ಆರೋಪಿಸಿದೆ.ಚಿತ್ರದ ಟ್ರೇಲರ್ 'ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುವುದು ಮಾತ್ರವಲ್ಲದೆ ದ್ವೇಷ ಮತ್ತು ಸಾಮಾಜಿಕ ಅಪಶ್ರುತಿಯನ್ನು ಉತ್ತೇಜಿಸುವ ತಪ್ಪಾದ ಐತಿಹಾಸಿಕ ಸಂಗತಿಗಳನ್ನು ಚಿತ್ರಿಸಲಾಗಿದೆ'. 'ಇಂತಹ ಚಿತ್ರ ಜನರ ದಾರಿತಪ್ಪಿಸುವುದು ಮಾತ್ರವಲ್ಲದೆ ಪಂಜಾಬ್ ಮತ್ತು ಇಡೀ ರಾಷ್ಟ್ರದ ಸಾಮಾಜಿಕ ರಚನೆಗೆ ಹಾನಿಯುಂಟುಮಾಡುತ್ತದೆ ಎಂದು ಹೇಳಿದೆ.ಕಾಂಗ್ರೆಸ್ ವಿರೋಧಿಯಾಗಿ ಗುರುತಿಸಿಕೊಂಡಿರುವ ಕಂಗನಾ ರಣಾವತ್ ಅವರು ರಾಜಕೀಯ ಲಾಭಕ್ಕಾಗಿ ತುರ್ತು ಪರಿಸ್ಥಿತಿಯ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಲಾಗಿದೆ' ಎಂದು ಆಗಸ್ಟ್ 27 ರಂದು ಕಳುಹಿಸಲಾದ ನೋಟಿಸ್‌ನಲ್ಲಿ ಹೇಳಲಾಗಿದೆ.‘ಈ ಸಿನಿಮಾಗೆ ನೀಡಿರುವ ಪ್ರಮಾಣ ಪತ್ರವನ್ನು ಕೂಡಲೇ ಹಿಂಪಡೆದು, ಚಿತ್ರ ಬಿಡುಗಡೆಗೆ ತಡೆ ನೀಡಬೇಕು’ ಎಂದು ಲೀಗಲ್ ನೋಟಿಸ್‌ನಲ್ಲಿ ಕೋರಲಾಗಿದೆ.ಕಂಗನಾ ರಣಾವತ್ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 06 ರಂದು ಬಿಡುಗಡೆ ಆಗಲಿದೆ.