ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮುರಳಿಕೃಷ್ಣ ನಿಧನ ಹಿಂದಿಯ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ, ನಿರ್ಮಾಪಕ ಕೆ.ಆರ್. ಮುರಳಿ ಕೃಷ್ಣ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಬೆಂಗಳೂರು: ಹಿಂದಿಯ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ, ನಿರ್ಮಾಪಕ ಕೆ.ಆರ್. ಮುರಳಿ ಕೃಷ್ಣ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮುರಳಿಕೃಷ್ಣ ಅವರು ಬ್ರೈನ್ ಟೂಮರ್ ನಿಂದ ಬಳಲುತ್ತಿದ್ದರು. ಸಣ್ಣ ಸತ್ಯ, ಗರ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಗರ ಸಿನಿಮಾದ ಮೂಲಕ ಬಾಲಿವುಡ್ ನ ಖ್ಯಾತ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಈ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಬ್ರೈನ್ ಟೂಮರ್ ಇರುವುದು ಪತ್ತೆಯಾದ ನಂತರ ಶಸ್ತ್ರ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರ ಚಿಕಿತ್ಸೆ ಫಲಕಾರಿಯಾದರೂ, ನಿನ್ನೆ ತೀವ್ರ ಹೃದಯಾಘಾತದಿಂದ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಮುರಳಿಕೃಷ್ಣ ಪ್ರವೃತ್ತಿಯಲ್ಲಿ ಸಿನಿಮಾ ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಇಂದು ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇವರು ಇಬ್ಬರು ಹೆಣ್ಣು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.