ನಗುವಿನಲೆಗಳ 'ತುಂಟರಗಾಳಿ' ಹದಿಹರೆಯದ ಗೊಂದಲಗಳಲ್ಲಿ 'ಗೆಳತಿಯಾ ಸೇರಲು ವಯಸಿನಾ ಭಯವಿದೆ' ಎನ್ನುವ ಮೂವರು ಗೆಳೆಯರ ಕಥೆಯಿದು. ಹಾಗಾಗಿ ಇಲ್ಲಿ ರಸಿಕತೆ ಹೆಚ್ಚು. ಆದರೆ, 'ಆ ವಿಷಯ'ದಲ್ಲಿ ಹಾಲಿವುಡ್ನ ಇಂಥ ಚಿತ್ರಗಳ ಮಟ್ಟಕ್ಕೆ ಏರಲು ಸೆನ್ಸಾರ್ನ ಭಯವಿದೆ ಎಂಬುದನ್ನು ಅರಿತು ನಮ್ಮ ಇತಿ ಮಿತಿಯಲ್ಲೇ ಒಂದಿಷ್ಟು 'ರತಿಕತೆ' ತೋರಿಸಿದ್ದಾರೆ ನಿರ್ದೇಶಕ ಚೈತನ್ಯ. ಇಂಥ ಚಿತ್ರಗಳು ಯಾರನ್ನು ತಲುಪುತ್ತವೆ ಎಂಬುದು ಕುತೂಹಲದ ವಿಷಯವೇನಲ್ಲ. ಆದರೆ, ಇಲ್ಲಿ ತಮ್ಮದೇ ಆದ ವಿಶೇಷ ಸೆಲ್ಲಿಂಗ್ ಸ್ಕಿಲ್ಸ್ ಮೂಲಕ ಪ್ರೇಕ್ಷಕರಿಗೆ 'ಚೈತನ್ಯ ಹ್ಯಾಸ್ ಸೋಲ್ಡ್ ಹಿಸ್ ಪರಾರಿ' ಎನ್ನಬಹುದು. ಕನಿಷ್ಠ ಪಕ್ಷ ಬುಲೆಟ್ ಪ್ರಕಾಶ್, ರೋಪ್ ಇಲ್ಲದೆ ಜೀಪಿನ ಮೇಲಿಂದ ಹಾರಿ ವಿಲನ್ಗಳಿಗೆ ಹೇಗೆ ಹೊಡೆಯುತ್ತಾರೆ ಎಂಬ ಕುತೂಹಲಕ್ಕಾದರೂ 'ಪರಾರಿ' ನೋಡಬಹುದು. ಮೋಹನ್ ಅವರ ಚಿತ್ರಕಥೆ ಮತ್ತು ಸಂಭಾಷಣೆ 'ಪರಾರಿ'ಯ ಹೈಲೈಟ್. ಎಲ್ಲೂ ಅಡೆತಡೆಯಿಲ್ಲದೆ ಸಾಗುವ ಚಿತ್ರಕಥೆ ಮತ್ತು ಸಂಭಾಷಣೆಯಿಂದ ಮೋಹನ್ ಪರಾರಿಯನ್ನು ಗೆಲ್ಲಿಸಿದ್ದಾರೆ. ತಮ್ಮ ಹಿಂದಿನ ಕೆಲವು ಹಾಸ್ಯ ಚಿತ್ರಗಳು ಮತ್ತು ರವಿಚಂದ್ರನ್ರ ಸಿನಿಮಾಗಳಿಗಿಂತ ಮೋಹನ್ ಬೇರೆಯದ್ದೇ ಫ್ರೆಷ್ ಎನಿಸುವ ಬೆಳವಣಿಗೆ ತೋರಿಸಿದ್ದಾರೆ. ಗಂಡಸ್ತನ ಪರೀಕ್ಷಿಸಿಕೊಳ್ಳಲು ಹೋಗಿ ನೆಂಟಸ್ತನ ಬೆಳೆಸಿಕೊಳ್ಳುವ ಮಟ್ಟಕ್ಕೆ ಹೋಗುವ ಮೂವರು ಹುಡುಗರ ಕಥೆ ಇದು. ನಾವು ಹುಡುಗರಲ್ಲ, ಗಂಡಸರು ಎಂದು ಪ್ರೂವ್ ಮಾಡಲು ಹೋಗುವ ನಾಯಕರ ಕಥೆ ಆದ್ದರಿಂದ, ಇಲ್ಲಿ ದೊಡ್ಡ ಸ್ಟಾರ್ಗಳಿಲ್ಲದಿದ್ದರೂ ಇದನ್ನು 'ಹೀರೋಯಿಂಸಂ' ತೋರಿಸುವ ಸಿನಿಮಾ ಎನ್ನಬಹುದು. ಕತೆಯಲ್ಲಿ ಬುಲೆಟ್ ಪ್ರಕಾಶ್ರ ಅಂಡರ್ವೇರ್ಗೆ ಹೆಚ್ಚು ಪ್ರಾಮುಖ್ಯತೆ ಇದೆ. ಕೊನೆಗೆ ಒಂದು ಕೊಲೆಯ ರಹಸ್ಯ ಭೇದಿಸುವಲ್ಲಿ ಕೂಡಾ ಅವರ ಅಂಡರ್ವೇರ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಅಂಡರ್ವರ್ಲ್ಡ್ ಆಧಾರಿತ ಕತೆಗಳ ನಡುವೆ 'ಪರಾರಿ' ಒಂದು ಅಂಡರ್ವೇರ್ ಆಧರಿತ ಚಿತ್ರ. ಅಂದಿನ 'ಫ್ರೆಂಡ್ಸ್'ನಿಂದ ಇಂದಿನ 'ಸಿಂಪಲ್ಲಾಗೊಂದ್ ಲವ್ ಸ್ಟೋರಿ'ಗಳನ್ನು ನೋಡಿದ 'ಮಡಿವಂತರಿಗೆ' ಪರಾರಿ ಹೆಚ್ಚೇನೂ ಕಷ್ಟ ಕೊಡಲಾರದು. ಅಲ್ಲದೆ ಪರಾರಿಯ ಪೋಲಿ ವೇದಾಂತ ಕೇವಲ ಮೊದಲಾರ್ಧಕ್ಕೆ ಸೀಮಿತ. 'ಶ್... ಎಲ್ಲರೂ ಒಂದ್ ಸೆಕೆಂಡ್ ಕಿವಿಮುಚ್ಕೊಳಿ' ಎನ್ನುವಂಥ ಕೆಲವು ಸಂಭಾಷಣೆಗಳಿದ್ದರೂ, ಇದು ಸಿಂಪಲ್ಲಾಗೊಂದು ಲವ್ಸ್ಟೋರಿ ಅಲ್ಲ. ಎಷ್ಟೇ ಆದರೂ, ಈಗ ತಾನೇ ಪಿಂಪಲ್ ಬಂದ ಹುಡುಗರ ಹರೆಯದ ಸಾಹಸಗಳಿವು. ಹಾಗಾಗಿ, 'ನಾನು ಪಿಂಪ್ ಅಲ್ಲ, ಸಿಂಪಲ್ಲಾಗಿ ಫನ್ ಕೋ ಆರ್ಡಿನೇಟರ್ ಅಂತ ಕರಿ' ಎನ್ನುವ ಅರುಣ್ ಸಾಗರ್ ಪಾತ್ರಕ್ಕೆ ಸಂಭಾಷಣೆ ಬರೆದ ಮೋಹನ್ ಅವರನ್ನು 'ಪನ್ ಕೋ ಆರ್ಡಿನೇಟರ್' ಎಂದುಕೊಂಡು ಪೋಲಿತನಕ್ಕೆ ರಿಯಾಯಿತಿ ಕೊಡಬಹುದು. ಬುಲೆಟ್ ಪ್ರಕಾಶ್ ಅವರನ್ನು ಕಾಮಿಡಿಯೆನ್ ಎಂದುಕೊಂಡರೆ ಇನ್ನುಳಿದ ಇಬ್ಬರು ನಾಯಕರ ಎಂಟ್ರಿ ದೃಶ್ಯಗಳಲ್ಲೇ ಅವರೂ 'ಇಸಂ' ಇರುವ ನಾಯಕರಲ್ಲ ಎಂಬುದನ್ನು ಹೇಳಿಬಿಡುತ್ತಾರೆ ಚೈತನ್ಯ. ಹಾಗಾಗಿ ತ್ರಿಮೂರ್ತಿಗಳಿಗೂ ಇಲ್ಲಿ ಸಮಾನ ಅವಕಾಶ. ಅಭಿನಯದ ವಿಷಯದಲ್ಲಿ ಶೃಂಗ ಅವರಿಗೆ ಹೆಚ್ಚು ಪ್ರಶಂಸೆ ಸಂದರೂ, ಶ್ರವಂತ್ ತಮ್ಮ ಹಳೆಯ ಚಿತ್ರಗಳನ್ನು ಮರೆಸುವ ಲಕ್ಷಣ ತೋರಿಸಿದ್ದಾರೆ. ಆದರೆ ಇಬ್ಬರನ್ನೂ ಮೀರಿಸುವ ಬುಲೆಟ್ ಪ್ರಕಾಶ್ ಅವರ ಮೂರ್ತಿ, ಕೀರ್ತಿ ಎರಡೂ ದೊಡ್ಡದೇ. ಗಾಂಭೀರ್ಯಕ್ಕೆ ಹೆಸರಾದ ಶರತ್ ಲೋಹಿತಾಶ್ವ 'ಸೀರಿಯಸ್ ಆಗಿ' ನಗಿಸುತ್ತಾರೆ. ಸಾಧುಕೋಕಿಲಾ ಪಾತ್ರದಲ್ಲೇ ವಿಶೇಷತೆಯಿದೆ. ಆರಂಭದ ನಿರೂಪಣಾ ಗೀತೆಯಿಂದ ಹಿಡಿದು, ಕತೆಯಲ್ಲಿ ಆಗಾಗ ಬಂದು ಹೋಗುವ ಅತಿಥಿ ಅವರು. ಮುಖ್ಯ ವಿಲನ್ ಆಗಿರುವ ಅರುಣ್ ಸಾಗರ್ ಇಲ್ಲಿ 'ಬಿಗ್ಬಾಸ್' ಎನಿಸಿಕೊಂಡರೂ ಅವರ ಓವರ್ ಆ್ಯಕ್ಟಿಂಗೇ ಹೆಚ್ಚು ಗಮನಸೆಳೆಯುತ್ತದೆ. ಗ್ಲಾಮರ್ಗೇ ಹೆಚ್ಚು ಮಹತ್ವ ಇರುವ ಪಾತ್ರಗಳಲ್ಲಿ ಶುಭಾ ಪೂಂಜಾ, ಜಾಹ್ನವಿ ಅವರದ್ದು ಮೈಂಡ್ ಬ್ಲೋಯಿಂಗ್ ಅಲ್ಲದಿದ್ದರೂ, 'ಮೈ' ಗ್ಲೋಯಿಂಗ್ ಅಪಿಯರೆನ್ಸ್. ಒಂದೇ ರೀತಿಯ ಹಾಡುಗಳನ್ನು ಕೇಳಿ ಬೋರಾದವರಿಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಬ್ಬದೂಟ ಬಡಿಸಿದ್ದಾರೆ. ಅವರ ಒಂದೊಂದು ಹಾಡಲ್ಲೂ ಒಂದೊಂದು ರೀತಿಯ ಕಿಕ್. 'ಕೈಲಾಸ ಕೈಲುಂಟು' ಹಾಡಿನ 'ಅಹ್ಹಹಾ, ಒಹ್ಹೊಹೋ' ಬಿಟ್ ಮತ್ತು 'ಮುದ್ದು ಮುದ್ದಾಗಿ' ಹಾಡಿನ ವಿಷಲ್ ಸೌಂಡ್ ಬಿಟ್ಗಳ ಮೂಲಕ ಅಕ್ಷರಶಃ ಗುನುಗುವಂಥ ಹಾಡುಗಳನ್ನು ಕೊಟ್ಟಿದ್ದಾರೆ ಅನೂಪ್. ಆದರೆ, ವೇಣು ಛಾಯಾಗ್ರಹಣದಲ್ಲಿ ಅಷ್ಟೊಂದು ವೆರೈಟಿ ಇಲ್ಲ. - ಹರಿ