ಭಯವಾದ್ರೆ ಏದುಸಿರು ಬಿಡೋದ್ಯಾಕೆ? ರಾತ್ರಿ ಹೊತ್ತು ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿರುತ್ತೀರಿ. ನಿರ್ಜನ ಪ್ರದೇಶ. ನೀರವ ಮೌನ. 'ರಪ್‌' ಎಂದು ಶಬ್ದ ಮಾಡುತ್ತಾ ವಸ್ತುವೊಂದು .... ರಾತ್ರಿ ಹೊತ್ತು ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿರುತ್ತೀರಿ. ನಿರ್ಜನ ಪ್ರದೇಶ. ನೀರವ ಮೌನ. 'ರಪ್‌' ಎಂದು ಶಬ್ದ ಮಾಡುತ್ತಾ ವಸ್ತುವೊಂದು ಸರಕ್ಕನೆ ನಿಮ್ಮ ಕಾಲಬುಡದಲ್ಲಿ ಬೀಳುತ್ತದೆ. ತಕ್ಷಣ ನಿಮ್ಮ ಎರಡೂ ಕೈಗಳು ಬಾಯಿಯ ಬಳಿ ಹೋಗುತ್ತದೆ.. 'ಅಮ್ಮಾ...' ಎನ್ನುತ್ತಾ ನೀವು ಏದುಸಿರು ಬಿಡುತ್ತೀರಿ. ಅನಿರೀಕ್ಷಿತವಾಗಿ ಭಯವಾದಾಗ, ಆತಂಕ ಎದುರಾದಾಗ ಎಲ್ಲರೂ ಉಸಿರು ಒಳಗೆ ತೆಗೆದುಕೊಳ್ಳುತ್ತಾರೆ. ಎದೆಬಡಿತ ಜೋರಾಗುತ್ತದೆ. ಇದಕ್ಕೆ ಕಾರಣವೇನು? ಏದುಸಿರು ಬಿಟ್ಟಾಗ ಹೆಚ್ಚು ಆಮ್ಲಜನಕ ದೇಹವನ್ನು ಸೇರುತ್ತದೆ. ಭಯಭೀತ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಹೋರಾಡಲು ಮನಸ್ಸು ಸಿದ್ಧವಾಗಬೇಕು. ಏದುಸಿರು ಬಿಟ್ಟಾಗ ಅಡ್ರೆನಲಿನ್ ಮತ್ತು ಇತರೆ ಹಾರ್ಮೋನುಗಳು ಬಿಡುಗಡೆಯಾಗಿ ಪರಿಸ್ಥಿತಿ ಎದುರಿಸಲು ನಿಮ್ಮ ಮನಸ್ಸನ್ನು ಸಿದ್ಧಪಡಿಸುತ್ತದೆ. ಇವುಗಳು ಆ ಕ್ಷಣದಲ್ಲಿ ಕಣ್ಣಿನ ಪಾಪೆಗಳನ್ನು ಹಿಗ್ಗಿಸುತ್ತವೆ, ಎದೆಬಡಿತ ಹೆಚ್ಚಿಸುತ್ತವೆ, ಚಯಾಪಚಯ ಕ್ರಿಯೆಯ ದರ ವರ್ಧಿಸುತ್ತದೆ. ಈ ಎಲ್ಲ ಬದಲಾವಣೆಗಳೂ ಅತ್ಯಂತ ಬೇಗನೆ ಆಮ್ಲಜನಕವನ್ನು ಬಳಸುವಂತೆ ಮಾಡುತ್ತವೆ. ನೀವು ಭಯದ ಕ್ಷಣವನ್ನು ಧೈರ್ಯದಿಂದ ಎದುರಿಸುತ್ತೀರಿ ಅಥವಾ ಓಡಲು ರೆಡಿಯಾಗುತ್ತೀರಿ.