ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ... ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ ಸ್ಮಾರ್ಟ್ ಫೋನ್‌ಗಳಿಗೆ ಆಕರ್ಷಿತರಾಗಿದ್ದಾರೆ. ಇದರಿಂದಾಗಿ ಸ್ಮಾರ್ಟ್ ಫೋನ್‌ಗಳ ಖರೀದಿ ಹೆಚ್ಚಾಗಿದೆ. ಅದರಂತೆ ಯುವಜನತೆ ಹೆಚ್ಚಾಗಿ ತಮ್ಮ ಫೋಟೋಗಳನ್ನು ಅಪಲೋಡ್ ಮಾಡುತ್ತಾ, ಸಂದೇಶ ರವಾನಿಸುತ್ತಾ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಾಗಿ ಬೆರಳಾಡಿಸುವಲ್ಲಿ ನಿರತರಾಗಿರುತ್ತಾರೆ. ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಂಡ್ರಾಯ್ಡ್ ಅಪ್ಲಿಕೇಷನ್ ಸದ್ಯ ಹೆಚ್ಚಾಗಿ ಚಾಲ್ತಿಯಲ್ಲಿದೆ. ಇನ್ನೂ ಉದ್ಯೋಗಸ್ಥರು, ತಮ್ಮ ಅನೇಕ ಕೆಲಸಗಳನ್ನು ಆ್ಯಂಡ್ರಾಯ್ಡ್ ಸೆಟ್‌ಗಳಲ್ಲಿ ಅಳವಡಿಸಿಕೊಳ್ಳುವ ಅಂತರ್ಜಾಲ ಸೇವೆ ಮೂಲಕ ವಿದ್ಯುತ್ ಬಿಲ್, ಕರೆಂಟ್ ಬಿಲ್, ಬ್ಯಾಂಕ್‌ನ ಅನೇಕ ಕೆಲಸಗಳನ್ನು ಕೂತಲ್ಲೇ ಮಾಡಿ ಮುಗಿಸುತ್ತಾರೆ. ಇಂತಹ ಕೆಲಸ ಮಾಡುವವರು ಇನ್ನು ಮುಂದೆ ಎಚ್ಚರಿಕೆ ವಹಿಸಬೇಕಿದೆ. ಏಕೆಂದರೆ, ಆ್ಯಂಡ್ರಾಯ್ಡ್ ಸೆಟ್‌ಗಳಿಗೆ ಪಾಸ್‌ವರ್ಡ್ ಕಬಳಿಸುವ ವೈರಸ್ ಅಟ್ಯಾಕ್ ಆಗುತ್ತಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಿಗೆ ಸಂದೇಶ ಸೇರಿದಂತೆ ಫೋನ್‌ನಲ್ಲಿ ಶೇಖರಿಸಲಾಗಿರುವ ಎಲ್ಲಾ ಮಾಹಿತಿಗಳನ್ನು ಕಬಳಿಸುವ ವೈರಸ್ ಲಗ್ಗೆ ಇಟ್ಟಿದೆ. ಟ್ರೋಜನ್ ವೈರಸ್ ಸ್ಮಾರ್ಟ್ ಫೋನ್‌ಗಳನ್ನು ಅಕ್ರಮಿಸಿದ್ದು, ಈ ವೈರಸ್ ಸ್ಮಾರ್ಟ್ ಫೋನ್‌ಗಳಲ್ಲಿರುವ ಪಾಸ್‌ವರ್ಡ್ ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಕಬಳಿಸಿ ದುರಪಯೋಗ ಪಡಿಸಿಕೊಳ್ಳಲು ಸೈಬರ್ ಹ್ಯಾಕರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ಸೈಬರ್ ಭದ್ರತಾ ದಳ ತಿಳಿಸಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಹ್ಯಾಕರ್‌ಗಳು ಮಾಹಿತಿ ಕದಿಯಲು ಆರಂಭಿಸಿದ್ದಾರೆ, ಟ್ರೋಜನ್‌ಗಳಿರುವ ಎಸ್‌ಎಂಎಸ್ ಸೃಷ್ಟಿಸಿ ಬಳಕೆದಾರರ ಮಾಹಿತಿ ಕದಿಯಲು ಆರಂಭಿಸಿದ್ದಾರೆ. ಈ ವೈರಸ್ ಅನ್ನು '' ಎಂದು ಗುರುತಿಸಲಾಗಿದೆ. ಇದು ಆಂಡ್ರಾಯ್ಡ್ ಸೆಟ್‌ಗಳಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ಗುರುತಿಸಿ, ಆ ಸಂಖ್ಯೆಗೆ ಸಂದೇಶ ರವಾನಿಸಬಹುದಾಗಿದೆ. ಈ ವೈರಸ್ ಒಂದು ಬಾರಿ ಮೊಬೈಲ್‌ನಲ್ಲಿ ಬಂದರೆ, ಇದು ನಾವು ಕಳುಹಿಸುವ ಪ್ರತಿಯೊಂದು ಮಾಹಿತಿಯನ್ನು ಹ್ಯಾಕರ್‌ಗಳಿಗೆ ಕಳುಹಿಸುತ್ತದೆ. ಬಳಕೆದಾರರು ಅಂತರ್ಜಾಲದಲ್ಲಿ ಶೋಧ ಮಾಡುತ್ತಿರಬೇಕಾದರೆ, ಮಧ್ಯದಲ್ಲಿ ಈ ವೈರಸ್ ಯಾವುದೋ ಒಂದು ಲಿಂಕ್ ಮೂಲಕ ಡೌನ್‌ಲೋಡ್ ಆಗುತ್ತದೆ. ಡೌನ್‌ಲೋಡ್ ಆಗಿದ್ದೇ ತಡ ನಂತರ ಬಳಕೆದಾರನಿಗೆ ಗೊತ್ತಿಲ್ಲದಂತೆ ಅವನ ಫೋನ್‌ನಲ್ಲಿರುವ ಸಂಗ್ರಹವಾಗಿರುವ ಇತರೇ ವ್ಯಕ್ತಿಗಳ ನಂಬರ್‌ಗಳಿಗೂ ಇದೇ ರೀತಿಯ ವೈರ್‌ಸ್ ಸಂದೇಶಗಳನ್ನು ಕಳುಹಿಸುತ್ತದೆ ಎಂದು ಸೈಬರ್ ಭದ್ರತಾ ಕೇಂದ್ರ ತಿಳಿಸಿದೆ. ನಂಬಿಕಸ್ಥವಲ್ಲದ ಮೂಲಗಳಿಂದ ಬರುವಂತಹ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ. ಆಗಾಗ್ಗೆ ಆಂಡ್ರಾಯ್ಡ್ ಅಪ್‌ಡೇಟ್ ಮಾಡುತ್ತಿರಬೇಕು. ಮೊಬೈಲ್ ಆ್ಯಂಟಿ ವೈರಸ್ ಅಳವಡಿಸಿಕೊಂಡು, ಸ್ಕ್ಯಾನ್ ಮಾಡುತ್ತಿರಬೇಕು ಎಂದು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ-ಐಎನ್) ಸಲಹೆ ನೀಡಿದೆ. ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿ ಬೇಕಾದಷ್ಟಿದೆ. ಇದೀಗ ಈ ಕುತಂತ್ರಾಂಶಗಳು ಸ್ಮಾರ್ಟ್‌ಫೋನ್‌ಗಳ ಪ್ರಪಂಚಕ್ಕೆ ಲಗ್ಗೆ ಇಡಲು ಮುಂದಾಗಿದೆ.