ಕಣ್ಣೀರ ಕಥೆ ಅಳು ಅಥವಾ ಕಣ್ಣೀರಿನ ಹಿಂದಿನ ಸತ್ಯ ಎಷ್ಟು ಜನಕ್ಕೆ ಗೊತ್ತಿದೆಯೋ ಇಲ್ಲವೋ... ಕಣ್ಣೀರಿಗೂ ಸೈಂಟಿಫಿಕ್ ವ್ಯಾಖ್ಯಾನವಿದೆ. ಆದರೆ ಕಣ್ಣಲ್ಲಿ ನೀರು ಬರುವಾಗ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಬಿಡಿ. ಆದರೆ ನಿಜವಾಗಿ ಕಣ್ಣೀರಿಗೂ ದೇಹದಲ್ಲಿನ ಕೆಲ ರಾಸಾಯನಿಕಗಳೇ ಕಾರಣ. ಆದರೆ ಯಾವಾಗ, ಯಾವ ಕಾರಣಕ್ಕಾಗಿ ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ ಎಂಬುದು ಮಾತ್ರ ಇಲ್ಲಿ ಪ್ರಮುಖವಾಗಿ ಯೋಚಿಸಬೇಕಾದ ಸಂಗತಿ. ನಮಗೆ ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಕಣ್ಣಲ್ಲಿ ನೀರು ಬರುತ್ತದೆ. ಒಂದು ಭಾವನಾತ್ಮಕವಾದ ಕಣ್ಣೀರು, ಎರಡನೆಯದು, ಕಸ ಬಿದ್ದಾಗ, ಏಟು ಬಿದ್ದಾಗ, ಕೀಟ ಬಿದ್ದಾಗ ಅಥವಾ ಈರುಳ್ಳಿ ಕತ್ತರಿಸುವಾಗ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ಈರುಳ್ಳಿ ಕತ್ತರಿಸುವಾಗ ಎಂಜಿಮೋಗಳು ಸಲ್ಫೋಕ್ಸೈಡ್ ಜೊತೆಗೆ ಬೆರೆತು, ಬಳಿಕ ಸಲ್ಫೆನಿಕ್ ಆ್ಯಸಿಡ್ ಒಂದು ರೀತಿಯ ಗ್ಯಾಸ್ ಅನ್ನು ಉತ್ಪಾದಿಸುತ್ತದೆ. ಇದಕ್ಕೆ ಪ್ರೋಪೆನಿಥಿಯಲ್ ಎಸ್- ಆಕ್ಸೈಡ್ ಎಂದು ಕರೆಯಲಾಗುತ್ತದೆ. ಇದು ಸಲ್ಫುರಿಕ್ ಆ್ಯಸಿಡ್ ಆಗಿ ಪರಿವರ್ತಿತವಾಗಿ ಕಣ್ಣೀರಾಗಿ ಪರಿವರ್ತಿಸುತ್ತದೆ. ಈ ಇರುಸು ಮುರುಸು ಮೆದುಳು ವ್ಯವಸ್ಥೆಯನ್ನು ಅಲರ್ಟ್ ಮಾಡುತ್ತದೆ. ಇದು ಲೆಕ್ರಿಮಲ್ ಗ್ಲಾಂಡ್‌ಗೆ ಸೂಚನೆ ನೀಡಿ ಕಣ್ಣೀರಾಗಿ ಪರಿವರ್ತಿತವಾಗುವಂತೆ ಮಾಡುತ್ತದೆ. ಈ ಮೂಲಕ ಕಣ್ಣನ್ನು ವಾಶ್ ಮಾಡುತ್ತದೆ. ಇದಕ್ಕೆ ವೈಜ್ಞಾನಿಕವಾಗಿ ರಿಫ್ಲೆಕ್ಸ್ ಟಿಯರ್ಸ್ ಎಂದು ಕರೆಯಲಾಗುತ್ತದೆ. ಆದರೆ ಭಾವನಾತ್ಮಕವಾಗಿ ಬರುವ ಕಣ್ಣೀರೇ ಬೇರೆ. ಇದರಲ್ಲಿ ಪ್ರೋಲೆಕ್ಟೀನ್, ಅಡ್ರೆನೋಕೋರ್ಟಿಕೋಟ್ರೋಫಿಕ್ ಹಾರ್ಮೋನು ಮತ್ತು ಎನ್ಸೆಫೆಲಿನ್ (ಸ್ವಾಭಾವಿಕ ನೋವು ನಿವಾರಕ) ಇರುತ್ತವೆ. ಮೆದುಳಿನ ಲಿಂಬಿಕ್ ವ್ಯವಸ್ಥೆಯ ಭಾಗವಾದ ಹೈಪೋಥಲಮಸ್, ಭಾವನಾಕ್ಮಕ ಕ್ರಿಯೆಗಳಾದ ಭಯ, ಕೋಪ ಮತ್ತು ನೋವನ್ನು ನಿಯಂತ್ರಿಸುತ್ತದೆ. ಇದು ಲೆಕ್ರಿಮಲ್ ಗ್ಲಾಂಡ್‌ಗೆ ಸೂಚನೆ ನೀಡಿ ಕಣ್ಣೀರು ಬರಲು ಕಾರಣವಾಗುತ್ತದೆ. ಆದರೆ ಏಕೆ ಭಾವನಾತ್ಮಕ ಮಾನವರು ಅಳುತ್ತಾರೆ ಎಂಬ ಬಗ್ಗೆ ವಿಜ್ಞಾನದಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಸಾಮಾಜಿಕ ಕಾರಣಗಳು ಇರಬಹುದು ಎಂಬ ಅಭಿಪ್ರಾಯಪಡಲಾಗಿದೆ.