ಹೆಬ್ಬನಕೇರಿಬೆಟ್ಟ ಸಾಗರ ತಾಲೂಕಿನ ಬೆಳ್ಳರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬನಕೇರಿ ಎಂಬಲ್ಲಿ 500 ವರ್ಷಗಳ ಇತಿಹಾಸ ಹೊಂದಿರುವ ಶ್ರೀರಾಮಲಿಂಗೇಶ್ವರ ದೇಗುಲವಿದ್ದು, ಸೂಕ್ತ ನಿರ್ವಹಣೆಯಿಲ್ಲದೇ ಪಾಳುಬಿದ್ದ ಮನೆಯಂತಿದೆ. ಚೆನ್ನಭೈರವಿದೇವಿ ಎಂಬುವರಿಂದ ನಿರ್ಮಾಣ ಕಂಡ ಈ ದೇಗುಲ ಆವರಣದಲ್ಲಿ ಭೋಜನ ಶಾಲೆ ಇತ್ತು ಎಂಬುದಕ್ಕೆ ಕುಳಿತು ಊಟ ಮಾಡುವ ಕಲ್ಲುಗಳಿವೆ. ಅಡುಗೆ ಮನೆಯ ರುಬ್ಬುಗುಂಡು ಸೇರಿದಂತೆ ಕೆಲವು ಕುರುಹುಗಳಿವೆ. ಅಂದಹಾಗೆ ಈ ದೇಗುಲಕ್ಕೆ ಬರಬೇಕೆಂದರೆ ದಾರಿ ಸಲೀಸಲ್ಲ. ಸಾಗರದಿಂದ 48 ಕಿ.ಮೀ. ಸಾಗಿ ಪುನಃ ಕಿ.ಮೀ. ಕ್ರಮಿಸಬೇಕು. ಸಾಗುವಾಗ ಗುಡ್ಡ-ದಿಣ್ಣೆಗಳನ್ನು ಹತ್ತಿ ಇಳಿಯಬೇಕಿರುವುದರಿಂದ ಸ್ಮರಣೆಯಲ್ಲಿ ಉಳಿಯುವಂಥ ಚಾರಣ ಅನುಭವ ನೀಡಬಲ್ಲ ತಾಣವೆಂದರೆ ತಪ್ಪಾಗದು. ಇಲ್ಲಿ ಬೃಹತ್ ಶಿವಾಲಯವಿತ್ತು, ಆ ಕಾಲದಲ್ಲೇ ತ್ರಿಕಾಲ ಪೂಜೆ, ಆಗಮೋತ್ತ ಬಲಿ ನೆರವೇರುತ್ತಿತ್ತು ಎಂಬ ಪ್ರತೀತಿ ಇದೆ. ದೇಗುಲದ ಬಲ ಬದಿಯಲ್ಲಿ ಕ್ಷೇತ್ರಪಾಲ ಗಣಪತಿ ವಿಗ್ರವೂ ಇದೆ. ಇಲ್ಲಿನ ಈಶ್ವರ ಲಿಂಗ ಜೇನು ತುಪ್ಪದ ಬಣ್ಣ ಹೊಂದಿದೆ. ದೇಗುಲ ದೇವರಿಗೆ ಮೈಸೂರು ಅರಸ ಜಯಚಾಮರಾಜೇಂದ್ರ ಅವರು ಮುಖವಾಡ ನೀಡಿದ ಬಗ್ಗೆ ಲಿಪಿ ಇದೆ. 800 ವರ್ಷಗಳ ಹಿಂದೆಯೇ ಅಲ್ಲಿ ಸುಮಾರು 450 ಬ್ರಾಹ್ಮಣ ಕುಟುಂಬಗಳಿದ್ದವು, ಚಂದ್ರಶಾಲೆ ಇತ್ತು ಎಂಬುದಕ್ಕೆ ಪುರಾವೆ ಇದೆ. ಪ್ಲೇಗ್ ಕಾಯಿಲೆಯಿಂದಾಗಿ ಇಡೀ ಊರೇ ನಾಶವಾಯಿತಂತೆ. 15 ವರ್ಷಗಳ ಹಿಂದೆ ಬೃಹತ್ ಮರವೊಂದು ಬಿದ್ದು ದೇಗುಲ ಛಿತ್ರವಾಗಿದೆ. ಬಂಬಿಟ್ಟಿಗೆ ಗೋಡೆಯಿಂದಲೇ ವಿಗ್ರಹ ರಕ್ಷಿಸಲಾಗಿದೆ. ಸುಮಾರು 3 ಕಿ.ಮೀ. ಗುಡ್ಡವನ್ನೇರಿಯೇ ದೇಗುಲ ತಲುಪಬೇಕಿರುವುದು ಸಾಹಸದ ಕೆಲಸವೇ. ಇಲ್ಲಿನ ಅಡಿಕೆ, ಕೆಂಗು, ಬಾಳೆ ತೋಟಗಳ ಚಂದ ಚಾರಣಿಗರ ಮೈಮನಸಿಗೆ ತಂಪೆರೆಯಬಲ್ಲವು ಎನಿಸದಿರದು. ಸಾಧ್ಯವಾದರೆ ನೀವೂ ಹೆಬ್ಬನಕೇರಿಬೆಟ್ಟಕ್ಕೆ ಹೋಗಿಬನ್ನಿ. ಮಾಹಿತಿಗೆ 9632662560. -ಚಿತ್ರ-ಲೇಖನ: ಬಾಲಕೃಷ್ಣ ಶಿರ್ವ