ರತ್ನಭವನ ಬಿಜಾಪುರದ ಪ್ರಸಿದ್ಧ ಜಾಮಿಯಾ ಮಸೀದಿಯ ಆಗ್ನೇಯ ಭಾಗದಲ್ಲಿ ಮಹ್ಮದ್ ಆದಿಲ್‌ಶಾಹ್ ಕಾಲದ ಗುಜರಾತಿ ಮೂಲದ ಸೂಫಿಸಂತ ಸಯ್ಯದ್ ಕರೀಂ ಉಲ್ಲಾ ಖಾದ್ರಿ ದರ್ಗಾ ಕಾಣಸಿಗುತ್ತದೆ. ಅರಸ ಮಹ್ಮದ್ ಆದಿಲ್‌ಶಾಹ್ ಈ ಸಂತರಿಗೆ ಕಿಂಚಿತ್ತೂ ಕಡಿಮೆಯಾಗದಂತೆ ಸತ್ಕರಿಸಿ ಧರ್ಮ ಪ್ರಸಾರಕಾರ್ಯ ಮುಂದುವರೆಸಲು ಸಾಕಷ್ಟು ನೆರವು ನೀಡಿದ್ದನು. ಬಿಜಾಪುರದಲ್ಲಿ ನೆಲೆನಿಂತ ಸಂತ ಕರೀಂ ಉಲ್ಲಾರವರು ಕ್ರಿ.ಶ. 1740ರಲ್ಲಿ ಸ್ವರ್ಗಸ್ಥರಾದರು. ದರ್ಗಾದ ಪ್ರವೇಶದ್ವಾರದ ಲಲಾಟ ಭಾಗದಲ್ಲಿ ಪರ್ಶಿಯನ್ ಭಾಷೆಯ ಶಾಸನವಿದೆ. ದರ್ಗಾದ ಒಳಭಾಗದಲ್ಲಿ ಸಂತರ ಪುತ್ರರಾದ ರಶೀದ್ ಶಾ ಅಸ್ರಾರುಲ್ಲಾ ಮತ್ತು ಶಾಹ ವಲೀಯುಲ್ಲಾ ಖಾದ್ರಿ ಮತ್ತು ಇನ್ನೊಬ್ಬ ಸೂಫಿ ಸಂತರಾದ ಸಯೀದ್ ಅಬ್ದುಲ್ ರೆಹಮಾನ ಖಾದ್ರಿಯವರ ಸಮಾಧಿಗಳಿವೆ.ದರ್ಗಾದ ಶಿಲಾಭಿತ್ತಿಗಳಲ್ಲಿ ಸುಂದರ ಪುಷ್ಪ ಕೆತ್ತನೆಗಳಿವೆ. ಚಾವಣಿಯ ಮೇಲ್ಭಾಗದಲ್ಲಿ ಗಚ್ಚಿನಿಂದ ಮಾಡಿದ ಪುಷ್ಪದ ಚಿತ್ರಗಳಿವೆ. ಆ ಪುಷ್ಪದ ದಳಗಳೊಳಗೆ ಕೆಂಪು ರತ್ನ ಮತ್ತು ಸಿಂಪುಗಳ ಹುಡಿಯ ಲೇಪನಗಳಿವೆ. ಆದಿಲಶಾಹಿ ಕಾಲದಲ್ಲಿ ರತ್ನಗಳನ್ನು ಮತ್ತು ಸಿಂಪುಗಳನ್ನು ಪಾಕದ ಹದಕ್ಕೆ ಬರುವವರೆಗೆ ಅರೆಯಲಾಗುತ್ತಿತ್ತಂತೆ. ಕುಸುರಿ ಕಲಾವಿದರ ಕೌಶಲ್ಯಕ್ಕೆ ಇವು ಸಾಕ್ಷಿಯಾಗಿವೆ. ಬಿಜಾಪುರದಲ್ಲಿ ಸದ್ಯಕ್ಕೆ ಉಳಿದು ಬಂದಿರುವ ರತ್ನಲೇಪಿತ ದರ್ಗಾ ಎಂದರೆ ಇದೊಂದೇ! ದರ್ಗಾದ ಮೇಲ್ಭಾಗದಲ್ಲಿ ಕಮಾನಿನ ಮೇಲೆ ನಿಂತ ಗುಮ್ಮಟಗಟ್ಟೆಯಲ್ಲಿ ಪಕ್ಕಾಶೈಲಿಯ ದುಂಡು ಗುಮ್ಮಟ ರಚಿತಗೊಂಡಿದೆ. ಇನ್ನೊಂದು ವಿಶೇಷವೆಂದರೆ ದರ್ಗಾದೆದುರಿಗೆ ಚಾವಣಿಯುಳ್ಳ ಅಪರೂಪದ ಬಾವಿಯೊಂದು ವಾಸ್ತು ಶೈಲಿಯ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಈ ದರ್ಗಾ ಬಿಜಾಪುರದ ಅಲಕ್ಷಿತ ಸ್ಮಾರಕಗಳಲ್ಲೊಂದಾಗಿ ದುಃಖ ತೋಡಿಕೊಳ್ಳುತ್ತಿದೆ. = ಪ್ರೊ. ಎ.ಎಲ್.ನಾಗೂರ, ಬಿಜಾಪುರ