ಕೊಳಲಾಟದ ಕಹಳೆ ಒಂದೆಡೆ ಜಾನಪದ ಕಲೆಗಳು ಕಣ್ಣರೆಯಾಗುತ್ತಿದ್ದಂತೆ, ಮತ್ತೊಂದೆಡೆ ಅವು ಹೊಸ ಆಯಾಮ ಪಡೆದುಕೊಳ್ಳುತ್ತಲೇ ಇರುತ್ತವೆ. ಕರಿವಕ್ಕಲಿಗ ಗೌಡ ಜನಾಂಗ ಪರಿಚಯಿಸಿದ ಕೊಳಲಾಟ ಸದ್ಯದ ವಿನೂತನ ಕಲೆ. ಶಿರಸಿ ತಾಲೂಕಿನ ಜಡ್ಡಿಗದ್ದೆ ಸನಿಹದ ಕುಂಬಳ್ಳಿಯಲ್ಲಿ ಇದು ಜನಜನಿತ. ಕುಂಬಳ್ಳಿಯ ಕೃಷಿಕ ತಿಮ್ಮ ನಾಗು ಗೌಡರೇ ಈ ಕಲೆಯ ಸೃಷ್ಟಿಕರ್ತರು. ಕೊಳಲಾಟ... ಅಂದರೆ, ಕೊಳಲಿನಲ್ಲೇ ಆಟ ಆಡಿಸುವ, ವಿಶೇಷ ಮನರಂಜನೆಯ ಕಲೆ. ಕಷ್ಟದ ಮೋಜಿನ ಕಲೆ ಈ ವಿಶಿಷ್ಟ ಕಲೆ ಪ್ರಸ್ತುತಪಡಿಸಲು ಇಬ್ಬರು ಬೇಕೇಬೇಕು. ಆ ಇಬ್ಬರಿಗೂ ತರಬೇತಿಯೂ ಬೇಕು. ಕರಿವಕ್ಕಲಿಗೆ ಗೌಡರ ಜನಾಂಗದಲ್ಲೂ ತಿಮ್ಮಾ ಗೌಡ ಮತ್ತು ಶರ್ವಾ ಗೌಡರನ್ನು ಬಿಟ್ಟರೇ, ಮತ್ತ್ಯಾರಿಗೂ ಈ ಕಲೆ ರೂಢಿಯಾಗದೇ ಇರುವುದು ಸೋಜಿಗ. ಈ ವಿನೂತನ ಜಾನಪದ ಕಲೆಯಲ್ಲಿ ಒಬ್ಬರು ಸರಾಗವಾಗಿ ಕೊಳಲನ್ನು ನುಡಿಸುತ್ತಾರೆ. ಆ ಕೊಳಲಿನ ಧ್ವನಿ, ಸ್ವರ ಗ್ರಹಿಸಿಕೊಂಡು, ಅಡಗಿಸಿಟ್ಟ ವಸ್ತುವನ್ನು ಹುಡುಕಿ ತರುವುದೇ ಈ ಕಲೆಯ ವೈಶಿಷ್ಟ್ಯ. ಇದೊಂದು ಬಹಳ ಕಷ್ಟಕರದ ಮೋಜಿನ ಕಲೆ. ಕೃಷಿಯನ್ನೇ ಉಸಿರಾಗಿಸಿಕೊಂಡ ತಿಮ್ಮಾಗೌಡರಿಗೆ ಈಗ 60 ವರ್ಷ. ಈ ಇಳಿವಯಸ್ಸಿನಲ್ಲೂ ಅವರು ಸಲೀಸಾಗಿ, ತಾವೇ ಸಿದ್ಧಪಡಿಸಿಕೊಂಡ ಮೂರು ಕಣ್ಣಿನ ಬಿದಿರು ಗಳದ ಕೊಳಲನ್ನು ತಮ್ಮದೇ ಶೈಲಿಯಲ್ಲಿ ನುಡಿಸುತ್ತಾರೆ. ಈ ಕೊಳಲಿನಿಂದ ಹೊರಹೊಮ್ಮುವ ಸ್ವರದ ಜಾಡನ್ನು ಹಿಡಿದು, ಅಷ್ಟೇ ಸುಲಭವಾಗಿ ಅಡಗಿಸಿಟ್ಟ ವಸ್ತುವನ್ನು (ಅದು ಕೊಳಲನ್ನು ನುಡಿಸುವವನಿಗೆ ತೋರಿಸಿ, ಹುಡುಕುವ ವ್ಯಕ್ತಿಗೆ ಕಾಣಿಸದೇ ಅನತಿ ದೂರದಲ್ಲಿ ಅಡಗಿಸಿ ಇಡಬೇಕು) ಅರೆ ಕ್ಷಣದಲ್ಲಿ ಶರ್ವಾ ಗೌಡ ಹುಡುಕಿ ತರುತ್ತಾರೆ. ಈ ಸನ್ನಿವೇಶ ಜನಸಮೂಹದ ಎದುರಿನಲ್ಲೇ ನಡೆಯುವುದರಿಂದ, ಈ ಕೊಳಲಾಟ- ಹುಡುಕಾಟವು ವಿಶೇಷ ಮನರಂಜನೆ ನೀಡುತ್ತದೆ. ಈ ಜೋಡಿ ಅನೇಕ ವರ್ಷಗಳಿಂದ ಕೊಳಲಾಟ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇವರು ತಮ್ಮಲ್ಲಿನ ಕಲಾ ಪ್ರತಿಭೆಯನ್ನು ಸ್ವರ್ಣವಲ್ಲಿ, ಮಂಜುಗುಣಿ, ಬಿಸ್ಲಕೊಪ್ಪ, ಕೆರೆಕೊಪ್ಪ, ಗಡಿಹಳ್ಳಿ, ಅಂಕೋಲಾ, ಕಾರವಾರ... ಇತ್ಯಾದಿ ಕಡೆಗಳಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಅಡಗಿಸಿಟ್ಟ ವಸ್ತುವನ್ನು ಹುಡುಕುವ ಕೆಲಸವನ್ನು ನಮ್ಮ ಜನಾಂಗದ ಗಣಪತಿ ಗೌಡ ಇತ್ತಿಚೆಗಷ್ಟೇ ರೂಢಿಸಿಕೊಂಡಿದ್ದಾನೆ. ಆದರೆ, ಕೊಳಲನ್ನು ನುಡಿಸುವುದು ಮಾತ್ರ ಯಾರಿಗೂ ರೂಢಿ ಆಗಿಲ್ಲ. ತನಗೂ ವಯಸ್ಸಾಗಿದೆ. ಬೇರೆ ಬೇರೆ ಊರುಗಳಿಗೆ ಹೋಗಿ ಪ್ರದರ್ಶನ ನೀಡುವುದು ಕಷ್ಟವಾಗುತ್ತಿದೆ ಎಂದು ತಿಮ್ಮಾ ಗೌಡ ಬೇಸರ ವ್ಯಕ್ತಪಡಿಸುತ್ತಾರೆ. ಕರಿವಕ್ಕಲಿಗ ಗೌಡ ಜನಾಂಗದವರು ನಾಡಿಗೆ ಪರಿಚಯಿಸಿದ ವಿಶಿಷ್ಟ ಕಲೆ ಈಗ ಅವಸಾನದ ಅಂಚಿಗೆ ಬಂದಿರುವುದು ಬೇಸರದ ಸಂಗತಿ. ಈ ಬಗ್ಗೆ ಜಾನಪದ ಪರಿಷತ್ ಗಮನಹರಿಸಬೇಕು. -ಚಿತ್ರ, ಲೇಖನ: ಗಣಪತಿ ಹಾಸ್ಪುರ