ಕೆಸರಗೊಪ್ಪದ ಆಷಾಢ ರೋಗ ರುಜಿನಗಳು ಬಾರದಿರಲಿ ಎಂದು ಕೆಸರಗೊಪ್ಪದ ಜನ ವಾರ ಹಿಡಿಯುತ್ತಾರೆ. ಆಷಾಢ ಆರಂಭವಾದೊಡನೆ ಸೋಮವಾರ, ಶುಕ್ರವಾರಗಳಂದು ನೀರು ನೀಡುತ್ತಾರೆ. ರೋಗ ರುಜಿನಗಳು ಬಾರದಿರಲಿ ಎಂದು ಕೆಸರಗೊಪ್ಪದ ಜನ ವಾರ ಹಿಡಿಯುತ್ತಾರೆ. ಆಷಾಢ ಆರಂಭವಾದೊಡನೆ ಸೋಮವಾರ, ಶುಕ್ರವಾರಗಳಂದು ನೀರು ನೀಡುತ್ತಾರೆ. ಅದನ್ನೇ 'ವಾರ ಹಿಡಿಯುವುದು' ಎನ್ನುತ್ತಾರೆ. ನೀರು ನೀಡುವುದು ಎಂದರೆ ದೇಗುಲಗಳಿಗೆ ಮನೆಗೊಬ್ಬರಂತೆ ಕೊಡ ನೀರು ಹೊತ್ತು ದೇಗುಲಕ್ಕೆ ಬರುವುದು... ಜಿಟಿ ಜಿಟಿ ಮಳೆ, ಕಚಿಪಿಚಿ ಕೆಸರು, ಮಗು ಬಿಕ್ಕಿ ಬಿಕ್ಕಿ ಅತ್ತಂತೆ ಆಗಿಷ್ಟು ಈಗಿಷ್ಟು ಹನಿ ಉದುರಿಸುವ ಮೋಡಗಳು... ಮಳೆಗಾಲದ ದೃಶ್ಯ ವೈಭವವನ್ನು ಬಣ್ಣಿಸುವ ಈ ಸಾಲುಗಳನ್ನು ಈ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಕಲಿತವರೆಲ್ಲ ನೆನಪಿಸಿಕೊಳ್ಳುವುದು ಸಹಜ. ಅದರಲ್ಲೂ ಶ್ರಾವಣ ಬಂತೆಂದರೆ ಮಳೆಯ ಆ ಸೊಬಗೇ ಬೇರೆ. ಮಳೆಯಲ್ಲಿ ನೆನೆದುಕೊಂಡು ಆಡುತ್ತ, ಹಾಡುತ್ತ ನಲಿಯುವ ಪರಿಯೇ ಚೇತೋಹಾರಿ. ಇಂಥ ಮೈಮನಕ್ಕೆ ಮುದ ನೀಡುವ ಮಳೆಯ ನಡುವೆಯೇ ನಡೆಯುವ ಈ ಸಂಭ್ರಮ ನೋಡುವಂಥದ್ದು. ಅದೂ 'ವಾರ'ದ ಸಂಭ್ರಮ. ಅದನ್ನು ನೋಡಲು ಜನವೆಲ್ಲ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಕೆಸರಗೊಪ್ಪಕ್ಕೆ ಬರಬೇಕು. ಮಳೆ ಸಂಭ್ರಮವೇನೋ ನೀಡುತ್ತದೆ. ಅದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕೆಸರು, ರಾಡಿ, ಕೊಚ್ಚೆ ವಿಜೃಂಭಿಸುತ್ತದೆ. ಆಗ ರೋಗ ರುಜಿನಗಳು ತಾಂಡವ ನೃತ್ಯಕ್ಕೆ ಶುರುವಿಟ್ಟುಕೊಳ್ಳುತ್ತವೆ. ಅಂಥ ರೋಗ ರುಜಿನಗಳು ಬಾರದಿರಲಿ ಎಂದು ಕೆಸರಗೊಪ್ಪದ ಜನ ವಾರ ಹಿಡಿಯುತ್ತಾರೆ. ಆಷಾಢ ಆರಂಭವಾದೊಡನೆ ಸೋಮವಾರ, ಶುಕ್ರವಾರಗಳಂದು ನೀರು ನೀಡುತ್ತಾರೆ. ಅದನ್ನೇ ವಾರ ಹಿಡಿಯುವುದು ಎನ್ನುತ್ತಾರೆ. ನೀರು ನೀಡುವುದು ಎಂದರೆ ದೇಗುಲಗಳಿಗೆ ಮನೆಗೊಬ್ಬರಂತೆ ಕೊಡ ನೀರು ಹೊತ್ತು ದೇಗುಲಕ್ಕೆ ಬರುವುದಾಗಿದೆ. ಆಷಾಢ ಪೂರ್ತಿ ಗ್ರಾಮದಲ್ಲಿ ಯಾರ ಮನೆಯಲ್ಲೂ ಕರಿದ ತಿಂಡಿ ತಿನ್ನುವುದಿಲ್ಲ. ಸೋಮವಾರ, ಶುಕ್ರವಾರ ರೊಟ್ಟಿ ಮಾಡುವುದಿಲ್ಲ. ಈ ದಿನಗಳಂದು ಕೃಷಿಗೆ ಸಂಬಂಧಿಸಿದಂತೆ ಯಾವ ಕೆಲಸವನ್ನೂ ಮಾಡುವಂತಿಲ್ಲ. ವಾರದ ಆಚರಣೆ ಅವಧಿಯಲ್ಲಿ ಊರಿನವರು ಯಾರಾದರೂ ಬೇರೆ ಊರಿಗೆ ಹೋದರೆ ವಾರ ಮುಗಿಯುವುದರೊಳಗೆ ಕಡ್ಡಾಯವಾಗಿ ಊರಿಗೆ ಬರಲೇಬೇಕು. ಈ ಪದ್ಧತಿಯನ್ನು ಊರವರು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಮಾಸದ ಕೊನೆಯ ಶುಕ್ರವಾರ ಭಕ್ತಾದಿಗಳೆಲ್ಲ ದೇಗುಲಗಳಿಗೆ ತೆರಳಿ ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸುತ್ತಾರೆ. ವಾರ ಆಚರಣೆ ಸಮಾರೋಪ ಅಂಗವಾಗಿ ಗ್ರಾಮದ ಪ್ರಮುಖರಿಂದ, ಭಕ್ತರಿಂದ ದೇಣಿಗೆ ಸಂಗ್ರಹಿಸಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿಗೆ ವಾರದ ಸಂಭ್ರಮಕ್ಕೆ ತೆರೆ ಬೀಳುತ್ತದೆ. -ಚಂದ್ರು ಸಂಶಿ ಕೆಸರಗೊಪ್ಪ