ಬೆಟ್ಟದ ಮಲ್ಲೇಶ್ವರ ವಿಜಯ ನಗರ ಸಾಮ್ರಾಜ್ಯ ಗತವೈಭವದ ಚಾರಿತ್ರಿಕ ಕುರುಹುಗಳಿಂದ ಪ್ರಸಿದ್ಧವಾಗಿರುವ ಬಳ್ಳಾರಿ ಜಿಲ್ಲೆ ಅನೇಕ ಪುಣ್ಯ ಕ್ಷೇತ್ರಗಳಿಗೆ ಹೆಸರು ಪಡೆದಿದೆ. ಅಂತಹವುಗಳಲ್ಲಿ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಬೆಟ್ಟದ ಮಲ್ಲೇಶ್ವರ ಕ್ಷೇತ್ರ ಒಂದು. ಬೆಟ್ಟದ ಶ್ರೇಣಿ ನೋಡಿದರೆ ತಿರುಪತಿಯ ಸಪ್ತಗಿರಿಯನ್ನು ನೋಡಿದಂತೆ ಭಾಸವಾಗುತ್ತದೆ. ಬೆಟ್ಟದ ಹೃದಯ ಸ್ಥಳದಲ್ಲಿ ಸಮತಟ್ಟಾದ ಭಾಗವಿದೆ. ಅಲ್ಲಿ ಪುರಾತನ ಬೆಟ್ಟದ ಮಲ್ಲೇಶ್ವರ ದೇವಸ್ಥಾನವಿದೆ. ಇದು ಒಂದು ನಿಸರ್ಗ ರಮಣೀಯ ಸ್ಥಳ. ಇಲ್ಲಿ ಎಲ್ಲವೂ ಶಿವಮಯ. ಎಲ್ಲಾ ಕಾಲದಲ್ಲೂ ಭಕ್ತರು ಬರುತ್ತಾರೆ. ಪಾತಾಳ ಗಂಗೆ ಬೆಟ್ಟದ ಮಲ್ಲೇಶ್ವರ ದೇವಸ್ಥಾನದ ಗರ್ಭ ಗುಡಿಯಿಂದ ಸ್ವಲ್ಪ ಮುಂದೆ 'ಪಾತಾಳ ಗಂಗೆ' ಎಂದು ಪ್ರಸಿದ್ಧವಾದ ನೀರಿನ ಕೊಳವಿದೆ. ಈ ಗಂಗೆಯಿಂದಲೇ ಬೆಟ್ಟದ ಮಲ್ಲಯ್ಯನಿಗೆ ಅಭಿಷೇಕ ಮಾಡಲಾಗುತ್ತದೆ. ಈ ದೇವಸ್ಥಾನದ ಶಿವಲಿಂಗವು ಪುರಾತನವಾಗಿದ್ದು, ಶ್ರೀಶೈಲದ ಮಲ್ಲಿಕಾರ್ಜುನನೇ ಈ ಭಾಗದ ಭಕ್ತರ ಇಷ್ಟಾರ್ಥ ನೆರವೇರಿಸಲು ಸೋಗಿ ಬೆಟ್ಟದಲ್ಲಿ ಬಂದು ಆವಿರ್ಭವಿಸಿದ್ದಾನೆ ಎಂಬ ನಂಬಿಕೆಯಿದೆ. ಅದರ ಪ್ರತೀಕವೇ ಇಲ್ಲಿ ಸ್ಥಾಪಿತವಾದ ಶಿವಲಿಂಗಕ್ಕೆ ಮಲ್ಲಯ್ಯ ಎಂದು ಹೆಸರಿಡಲಾಗಿದೆಯಂತೆ. ಭ್ರಮರಾಂಭ ದೇವಸ್ಥಾನವೂ ಇಲ್ಲಿದೆ. ವೀರಭದ್ರಸ್ವಾಮಿ ಮೂರ್ತಿ, ವಿಘೇಶ್ವರನ ಮೂರ್ತಿ, ಆದಿ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿ ಹಾಗೂ ನವಗ್ರಹಗಳ ಮೂರ್ತಿಗಳನ್ನು ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ. ಹೀಗೆ, ಈ ಪುಣ್ಯ ಕ್ಷೇತ್ರವು ಭಕ್ತರಿಗೆ ಬಹಳ ಪವಿತ್ರ ಕ್ಷೇತ್ರವಾಗಿದೆ. ಭಕ್ತರಿಗೆಂದೇ ಪ್ರವಾಸಿ ಮಂದಿರ ಕಟ್ಟಲಾಗಿದೆ. ಶುಭ ಸಮಾರಂಭಗಳಿಗೆ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಹೀಗೆ ಬನ್ನಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಿಂದ 20 ಕಿ.ಮೀ. ಮೀಟರ್ ದೂರ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಿಂದ ಹೂವಿನಹಡಗಲಿ ಕಡೆಗೆ 14 ಕಿ.ಲೋ. ಮೀಟರ್ ದೂರದಲ್ಲಿ ಸಾಗಿದರೆ ಶ್ರೀಸೋಗಿ ಬೆಟ್ಟದ ಮಲ್ಲೇಶ್ವರ ಕ್ಷೇತ್ರ ಹೆಸರಿನ ಕಮಾನು ಫಲಕ ಕಾಣಬಹುದು. ಅಲ್ಲಿಂದ ಬಲಕ್ಕೆ ತಿರುಗಿದರೆ ಈ ಕ್ಷೇತ್ರ ಸಮೀಪಿಸಬಹುದು. - ಚಿತ್ರ-ಲೇಖನ: ಬಿ.ರಾಮಪ್ರಸಾದ್ ಗಾಂಧಿ