ಎಲ್ಲ ಸೀಸನ್‌ನ ಮೇವು! ಗ್ರಾಮೀಣರ ಅನೇಕ ಕಾರ್ಯಗಳು ಇಂದಿಗೂ ವಿಜ್ಞಾನಕ್ಕೆ ಸಡ್ಡು ಹೊಡೆದಿವೆ. ಇದಕ್ಕೆ ಸಮೀಪದ ಉದಾಹರಣೆಯೆಂದರೆ... ಗ್ರಾಮೀಣರ ಅನೇಕ ಕಾರ್ಯಗಳು ಇಂದಿಗೂ ವಿಜ್ಞಾನಕ್ಕೆ ಸಡ್ಡು ಹೊಡೆದಿವೆ. ಇದಕ್ಕೆ ಸಮೀಪದ ಉದಾಹರಣೆಯೆಂದರೆ, ಬೀದರ್- ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿ ಬಿಳಿ ಜೋಳದ ಕಳಕಿ, ರಾಶಿ ಮಾಡಿದ ಹೊಟ್ಟು (ಮೇವು) ಮತ್ತಿತರ ವಸ್ತುಗಳು 2-3 ವರ್ಷಗಳವರೆಗೆ ಹೊಲದಲ್ಲೆ ಇಟ್ಟರೂ ಅವೇನು ಹಾಳಾಗುವುದಿಲ್ಲ! ಇಂದು ಎಲ್ಲೆಡೆ ಕೋಲ್ಡ್ ಸ್ಟೋರೇಜ್, ಗೋದಾಮುಗಳು ಬಂದಿದ್ದರೂ ನಮ್ಮ ಹಳ್ಳಿಯವರು ಅದರ ಮುಖ ಮಾಡಿಲ್ಲ. ಅದರ ಅವಶ್ಯವೂ ಅವರಿಗಿಲ್ಲ. ಮಳೆ ಇರಲಿ, ಚಳಿ ಇರಲಿ... ಜಾನುವಾರಗಳ ಮೇವಿಗೆ ಯಾವುದೇ ಆಶ್ರಯವಿಲ್ಲದೆ ಖುಲ್ಲಾ ಜಮಿನಿನಲ್ಲಿ ಮಣ್ಣಿನಿಂದ ಮುಚ್ಚಿದ ಕಳಕಿಯ ಬಣವೆಗಳನ್ನು ಸಿದ್ಧಪಡಿಸುತ್ತಾರೆ. ಜೋಳದ ದಂಟುಗಳ ಸೂಡು ಕಟ್ಟಿದ ನಂತರ ಅದನ್ನು ಒಟ್ಟಿಗೆ ಸೇರಿಸಿ ನಂತರ ಅದರ ಮೇಲೆ ಮಣ್ಣಿನ ದೊಡ್ಡ-ದೊಡ್ಡ ಹೆಂಟೆಗಳಿಂದ ಮುಚ್ಚಲಾಗುತ್ತದೆ. ಇದರಿಂದ ಎಷ್ಟೇ ಮಳೆಯಾದರೂ ಕಳಕಿಗೆ (ಮೇವಿಗೆ) ಏನೂ ಆಗುವುದಿಲ್ಲ. ಹಿಂದಿನ ಕಾಲದ ಈ ವಿಶಿಷ್ಟ ಪದ್ಧತಿಯನ್ನು ಕಂಡು ಇಂದಿನ ವಿಜ್ಞಾನವೇ ಬೆರಗಾಗಿದೆ. ಕೇವಲ ಜೋಳದ ಕಳಕಿಯ ಬಣವೆಗಳು ಅಲ್ಲದೆ ತೊಗರಿ, ಕಡಲೆ ಮತ್ತಿತರ ಬೆಳೆಗಳ ರಾಶಿ ಮಾಡಿದ ನಂತರ ಬಂದಂಥ ಅದರ ಹೊಟ್ಟನ್ನೂ ಒಟ್ಟಿಗೆ ಸೇರಿಸಿ ಮಣ್ಣಿನಿಂದಲೇ ಮುಚ್ಚಲಾಗುತ್ತದೆ. ಇದಕ್ಕೂ ಋತು ವೈವಿಧ್ಯಗಳು ತೊಂದರೆ ಕೊಡುವುದಿಲ್ಲ. ಬರಗಾಲದಲ್ಲಿ ಜಾನುವಾರಗಳಿಗೆ ಮೇವಿನ ಕೊರತೆ ಇದ್ದಾಗ ಗ್ರಾಮೀಣರಲ್ಲಿ ವರ್ಷಗಟ್ಟಲೆ ಸಂಗ್ರಹ ಮಾಡಿ ಇಡಲಾದ ಇಂಥ ಮೇವು ನೆರವಿಗೆ ಬರುತ್ತದೆ. ಗ್ರಾಮೀಣರಂತೆ ಸರ್ಕಾರವೂ ಜಾನುವಾರಗಳಿಗೆ ಮೇವಿನ ಕೊರತೆಯಾಗದಂತೆ ಜಾಗೃತೆ ವಹಿಸಬೇಕು. ಮೇವು ಕೇಂದ್ರಗಳನ್ನು ತೆರೆದು ಬರಗಾಲದಂಥ ಸಮಸ್ಯೆಗಳ ವೇಳೆ ರೈತರಿಗೆ ಆಸರೆ ಕಲ್ಪಿಸಬೇಕು. - ಮೌಲಾನಾಸಾಬ್ ಚಿತ್ರ: ಗೋಪಿಚಂದ ತಾಂದಳೆ