ಕೋಟಿಗೊಂದು ಪುರ! ಶಿವಮೊಗ್ಗ ಜಿಲ್ಲೆಯಲ್ಲಿರುವ ಮನಮೋಹಕ ಹಾಗೂ ಪ್ರಸಿದ್ಧ ದೇವಾಲಯಗಳ ಪೈಕಿ ಕೋಟಿಪುರದ ಕೈಟಭೇಶ್ವರ ದೇವಾಲಯ ಸುಂದರವಾದ ಕೆತ್ತನೆ ಹಾಗೂ ವಿಶಿಷ್ಟ ವಾಸ್ತುವಿನಿಂದ ಪ್ರಸಿದ್ಧ. ಇದು ಹೊಯ್ಸಳರ ಕಾಲದ ದೇವಾಲಯ. ಆದರೆ ವಾಸ್ತು ಶೈಲಿ ಚಾಲುಕ್ಯರ ಕಾಲವನ್ನು ನೆನಪಿಸುತ್ತದೆ. ಶಾಸನಗಳಲ್ಲಿ 'ಕೋಟೇಶ್ವರ' ಎಂದು ಕರೆಯಲ್ಪಟ್ಟಿರುವ ಈ ದೇವಾಲಯವು ಕ್ರಿ.ಶ. 1100 ರಲ್ಲಿ ಹೊಯ್ಸಳ ವಿನಯಾದಿತ್ಯನ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸುಂದರವಾದ ದೇವಾಲಯವು ಪೂರ್ವ-ಪಶ್ಚಿಮ ಮುಖವಾಗಿದ್ದು ಸುತ್ತಲೂ ಏಳು ದೇವಾಲಯಗಳಿವೆ. ಮಧು-ಕೈಟಭ ಎಂಬ ರಕ್ಕಸರಿಗೆ ಸದ್ಗತಿಯನ್ನು ನೀಡಿದ ಶಿವ ಬನವಾಸಿಯಲ್ಲಿ 'ಮಧುಕೇಶ್ವರ', ಕೋಟಿಪುರದಲ್ಲಿ 'ಕೈಟಭೇಶ್ವರ' ಆದನೆಂಬ ಪ್ರತೀತಿ. ಇಲ್ಲಿಂದ ಬನವಾಸಿ ಕೇವಲ 33 ಕಿ.ಮೀ. ದೂರದಲ್ಲಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ದೇವಾಲಯದ ವಾಸ್ತುಶೈಲಿ ಅತ್ಯಾಕರ್ಷಕ. ಸ್ತಂಭಗಳು, ವಿಗ್ರಹಗಳು, ನಕಾಶೆ ಮತ್ತು ವಾಸ್ತುಶೈಲಿಯು ಚಾಲುಕ್ಯಶೈಲಿಯ ದೇವಾಲಯಗಳನ್ನು ಹೋಲುತ್ತದೆ. ಶಿವಲಿಂಗವು ಪೂರ್ವಾಭಿಮುಖವಾಗಿದೆ. ತಲವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ, ಸುಖನಾಸಿ, ತೆರೆದ ಚೌಕಾಕಾರದ ಮುಖಮಂಟಪಗಳನ್ನು ಒಳಗೊಂಡಿದೆ. ದೇವಾಲಯಕ್ಕೆ ಮೂರು ಪ್ರತ್ಯೇಕ ದ್ವಾರಗಳಿವೆ. ಮುಖಮಂಟಪದಲ್ಲಿನ ಸ್ತಂಭಗಳು ವೃತ್ತಾಕಾರವಾಗಿದ್ದು, ಅವುಗಳನ್ನು ತಿರುಗಣಿ ಯಂತ್ರದಲ್ಲಿ ಸಜ್ಜುಗೊಳಿಸಿ ಹೊಳಪಿಸಲಾಗಿದೆ. ಕನ್ನಡಿಯಂತೆ ಹೊಳೆಯುವ ಆ ಹೊಳಪಿನಲ್ಲಿ ನಮ್ಮ ಪ್ರತಿಬಿಂಬಗಳು 'ಅಡಿಮೇಲಾಗಿ' ಆಗಿ ಕಾಣಿಸುತ್ತವೆ. ಮೇಲ್ಛಾವಣಿ ಅಲಂಕೃತವಾದ ಭುವನೇಶ್ವರಿಯನ್ನು ಒಳಗೊಂಡಿದ್ದು ಹೊಯ್ಸಳ ಶೈಲಿಯ ಚಜ್ಜದಿಂದ ಆವರಿಸಲ್ಪಟ್ಟಿದೆ. ಸುಖನಾಸಿ ಗರ್ಭಗೃಹದ ಬಾಗಿಲು ದ್ವಾರಗಳನ್ನು ವಿಶಿಷ್ಟ ಅಲಂಕರಣ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಲಲಾಟ ಬಿಂಬಗಳಲ್ಲಿ ಸುಂದರವಾದ ಗಜಲಕ್ಮಿ ಚಿತ್ರಣವಿದೆ. ದೇವಾಲಯದ ಒಳಗೆ ತಲೆಯೆತ್ತಿ ನೋಡಿದರೆ ಚಾವಣಿಯಲ್ಲೂ ಚಿತ್ತಾಪಹಾರಿ ಕೆತ್ತನೆಗಳಿವೆ. ಬನವಾಸಿಗೆ ಸುರಂಗ? ಈ ದೇವಾಲಯದ ಕಂಬದಲ್ಲಿರುವ ಒಂದು ಮಹತ್ವಪೂರ್ಣ ಶಾಸನ ಅಂದಿನ ಕಾಲದ ಪರಿಣಿತ ವಾಸ್ತುಶಿಲ್ಪಿಗೆ ತಿಳಿದಿದ್ದ ವಿವಿಧ ದೇಗುಲಗಳ ಮಾದರಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ದೇವಾಲಯದ ಆವರಣದಲ್ಲಿ ಚಿಕ್ಕಚಿಕ್ಕ ದೇವಾಲಯಗಳಿದ್ದು ಒಂದು ದೇಗುಲ ಭೂಮಿಯಿಂದ ಕೆಳಮಟ್ಟದಲ್ಲಿದೆ. ಇಲ್ಲಿಂದ ಬನವಾಸಿಗೆ ಸುರಂಗ ಮಾರ್ಗವಿದೆ ಎನ್ನುತ್ತಾರೆ. ಇನ್ನೊಂದರಲ್ಲಿ ಶಿವಲಿಂಗವಿದೆ. ಮುಖ್ಯ ದೇವಾಲಯದ ಬಲಪಕ್ಕದಲ್ಲಿ ಸುಬ್ರಹ್ಮಣ್ಯ, ಎಡಪಕ್ಕದಲ್ಲಿ ಅಮ್ಮನವರ ಚಿಕ್ಕ ದೇಗುಲಗಳಿವೆ. ಉಳಿದವು ಖಾಲಿಯಿವೆ. ಶಿವನ ದೇವಾಲಯದಲ್ಲಿ ಆಂಜನೇಯನು ಪೂಜೆಗೊಳ್ಳುವ ವಿಶೇಷವನ್ನೂ ಇಲ್ಲಿ ನೋಡಬಹುದು. ವೀರಗಲ್ಲು, ಶಿಲಾಶಾಸನಗಳನ್ನು ಇಲ್ಲಿ ರಕ್ಷಿಸಿಡಲಾಗಿದೆ. - ಸೀತಾ ಎಸ್. ನಾರಾಯಣ