ಅಮೃತ ಘಳಿಗೆ ಧಾರವಾಡ ಜಿಲ್ಲೆಯ ಅಣ್ಣಿಗೇರಿಟಯ ಹೃದಯ ಭಾಗದಲ್ಲಿರುವ ಅಮೃತೇಶ್ವರ ದೇಗುಲ 'ದಕ್ಷಿಣ ಕಾಶಿ' ಅಂತಲೇ ಪ್ರಸಿದ್ಧಿ. ಈ ದೇಗುಲ ನಿರ್ಮಾಣದ ಕಾಲ ಅಷ್ಟು ಸ್ಪಷ್ಟವಿಲ್ಲ. ಕ್ರಿ.ಶ. 1202ರ ಶಾಸನವೊಂದು ಇಮ್ಮಡಿ ಬಲ್ಲಾಳನ ದಂಡನಾಯಕ ಬಸವ ಈ ದೇಗುಲಕ್ಕೆ ವಿಶೇಷ ದಾನ ನೀಡಿರುವುದನ್ನು ದಾಖಲಿಸುತ್ತದೆ. ಇದಕ್ಕೂ ಮುಂಚಿನ ಶಾಸನಗಳು ಅಮೃತೇಶ್ವರ ದೇವಾಲಯದ ಕುರಿತು ಪ್ರಸ್ತಾಪಿಸಿವೆ. ದೇಗುಲ ಮಂಟಪದ ಶಾಸನ ಅಸ್ಪಷ್ಟವಾಗಿದ್ದು, ಕ್ರಿ.ಶ. 12ನೇ ಶತಮಾನದ ಲಿಪಿಯಾಗಿದೆ. ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪವಿದೆ. ವಿಶೇಷವೆಂದರೆ, ಇದು ಕರಿಗಲ್ಲಿನಿಂದ ನಿರ್ಮಿಸಿದ ದೇಗುಲ. ದೇಗುಲದ ಬಗ್ಗೆ... ಈ ದೇಗುಲ ಗರ್ಭಗೃಹ, ಅಂತರಾಳ, ನವರಂಗ, ಸಭಾಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದೆ. ದಕ್ಷಿಣ ಮತ್ತು ಪೂರ್ವದಿಂದ ಮುಖ್ಯದ್ವಾರಗಳಿವೆ. ದಕ್ಷಿಣ ದ್ವಾರಕ್ಕೆ ಮುಖಮಂಟಪ ಇರುವುದರಿಂದ 'ದಕ್ಷಿಣ ಕಾಶಿ' ಎಂದು ಕರೆಯಲಾಗುತ್ತದೆ. ದೇಗುಲದ ಹೊರಭಿತ್ತಿಯ ಅಲಂಕಾರಿಕ ಕಿರು ಸ್ತಂಭಗಳು, ಕಿರುಶಿಖರ ಮಾದರಿಗಳು ಹಾಗೂ ದೇವದೇವತೆಗಳ ಉಬ್ಬು ಶಿಲ್ಪಗಳು ಮನಮೋಹಕ. ಉಮಾ ಮಹೇಶ್ವರ, ನಟರಾಜ, ನೃತ್ಯ ಶಿಲ್ಪಗಳು ಗಮನ ಸೆಳೆಯುತ್ತವೆ. ಗರ್ಭಗುಡಿಯ ಮೇಲ್ಭಾಗದಲ್ಲಿರುವ ಕದಂಬನಾಗರ ಶೈಲಿಯ ಶಿಖರದಲ್ಲಿ ಶೈವ ಪುರಾಣವನ್ನು ಪ್ರತಿನಿಧಿಸುವ ಅನೇಕ ಆಕರ್ಷಕ ಶಿಲಾಮೂರ್ತಿಗಳಿವೆ. ಹೀಗೊಬ್ಬ ಗೈಡ್ ಈ ದೇಗುಲಕ್ಕೆ ಭೇಟಿ ನೀಡಿದವರಿಗೆ ಕುತೂಹಲದ ವ್ಯಕ್ತಿಯೊಬ್ಬ ಕಾಣಸಿಗುತ್ತಾನೆ. ಹೆಸರು ಶೇಖರ ಬೇಲೇರಿ. ದೇಗುಲದ ಸೇವಕನೋ, ಗೈಡೋ ಎಂಬುದೇ ತಿಳಿಯುವುದಿಲ್ಲ. ಆದರೆ, ಈ ದೇಗುಲದ ಪ್ರತಿಯೊಂದು ಕಲ್ಲಿನ, ಮೂರ್ತಿಯ ಇತಿಹಾಸವನ್ನು ಪಟಪಟನೇ ಹೇಳುವಷ್ಟು ಪ್ರತಿಭಾವಂತ. ಈ ಹಿಂದೆ ಲಕ್ಕುಂಡಿ ಕಾಶಿ ವಿಶ್ವನಾಥ, ಜೈನ ಬಸದಿಯಲ್ಲಿ ಸುಮಾರು 15 ವರ್ಷ ಸೇವೆ ಸಲ್ಲಿಸಿದ್ದಾನೆ. ಐದಾರು ವರ್ಷಗಳಿಂದ ಈ ದೇಗುಲದಲ್ಲಿದ್ದಾನೆ. ಶಿವನ ಕುರಿತಾದ ಹತ್ತಾರು ಪದಗಳು ಇವನ ಬಾಯಲ್ಲಿವೆ. ದೇವಸ್ಥಾನದ ಸೇವೆಯೊಂದಿಗೆ ಇಲ್ಲಿನ ಇತಿಹಾಸದ ಮಾಹಿತಿ ಪಡೆದು ಭಕ್ತರಿಗೆ ತಿಳಿಸುತ್ತಾನೆ. ಅಂದಹಾಗೆ, ನೂರೈವತ್ತು ಇನ್ನೂರು ವರ್ಷಗಳ ಇತಿಹಾಸದ ಮಾನವರ ತಲೆಬುರುಡೆಗಳು ಸಿಕ್ಕಿದ್ದು ಇದೇ ಅಣ್ಣಿಗೇರಿಯಲ್ಲಿ. ಹೀಗೆಬನ್ನಿ... ಧಾರವಾಡದಿಂದ ಅಣ್ಣಿಗೇರಿ 65 ಕಿ.ಮೀ., ಹುಬ್ಬಳ್ಳಿಯಿಂದ 35 ಕಿ.ಮೀ. ಆಗುತ್ತದೆ. ಧಾರವಾಡದಿಂದ ನವಲಗುಂದ ಮೂಲಕ ಅಣ್ಣಿಗೇರಿ ತಲುಪಬಹುದು. ಹುಬ್ಬಳ್ಳಿಯಿಂದ ಗದಗ ರಸ್ತೆಯಲ್ಲಿ 35 ಕಿ.ಮೀ. ಸಾಗಿದರೆ ಅಣ್ಣಿಗೇರಿ ತಲುಪಬಹುದು. ಗದಗದಿಂದ 20 ಕಿ.ಮೀ. ಆಗುತ್ತದೆ. ಹುಬ್ಬಳ್ಳಿ, ಧಾರವಾಡ, ಗದಗದಿಂದ ಬಸ್ ವ್ಯವಸ್ಥೆ ಇದೆ. - ಬಸವರಾಜ ಹಿರೇಮಠ ಫೋಟೋ: ಅರುಣ್‌ಕುಮಾರ್ ಹೂಗಾರ