ಇದು ದೇವರ ಮನೆ ಕಾಣೋ! ನಿತ್ಯಹರಿದ್ವರ್ಣ ಕಾಡುಗಳಿಂದ ಕಂಗೊಳಿಸುವ ಚಿಕ್ಕಮಗಳೂರು ಜಿಲ್ಲೆ ವಾಣಿಜ್ಯ ಬೆಳೆ ಕಾಫಿ, ಮಲೆನಾಡು ಹಾಗೂ ಬಯಲುಸೀಮೆಯನ್ನು ಮಡಿಲಲ್ಲಿರಿಸಿಕೊಂಡಿದೆ. ಹೇಮಾವತಿ, ತುಂಗಾ, ಭದ್ರಾ ನದಿಗಳು ನಿರಂತರ ಹರಿದು ಇಲ್ಲಿನ ಪರಿಸರವನ್ನು ತಂಪಾಗಿರಿಸಿವೆ. ಪ್ರಾಕೃತಿಕ ಕಲಾ ಶ್ರೀಮಂತಿಕೆಯ ಪಶ್ಚಿಮಘಟ್ಟದ ಈ ಪುಣ್ಯಭೂಮಿಯಲ್ಲಿರುವ 'ದೇವರಮನೆ' ಹೆಸರಿನ ಪರಿಸರ ಪ್ರವಾಸಿಗರ ಮನಸ್ಸಿಗೆ ಆಹ್ಲಾದ ನೀಡಬಲ್ಲದು. ಮೂಡಿಗೆರೆಯಿಂದ 23 ಕಿ.ಮೀ. ದೂರವಿರುವ ದೇವರಮನೆ ತಾಣ ಕೆಲವು ಕುತೂಹಲಗಳಿಂದ ಕೂಡಿದೆ. ಇಲ್ಲಿನ ಗುಡ್ಡದ ಮಧ್ಯದಲ್ಲಿ ಕಲ್ಲಿನಲ್ಲಿ ಕೊರೆದಿರುವ ಬಟ್ಟಲು ಬಾವಿ ಮನಸೆಳೆಯುತ್ತದೆ. ಬೇಸಿಗೆ, ಮಳೆಗಾಲದಲ್ಲಿ ಒಂದೇ ಸಮನಾಗಿ ಅಲ್ಲಿ ನೀರಿರುತ್ತದೆ. ಗುಡ್ಡದಲ್ಲಿದ್ದರೂ ಜಲ ಬತ್ತುವುದಿಲ್ಲ ಎನ್ನುವ ಸ್ಥಳೀಯರು ಇದನ್ನು ಭೈರವೇಶ್ವರ ತೀರ್ಥ ಎಂದು ನಂಬಿದ್ದಾರೆ. ಈ ದೇವರಮನೆ ಭೈರವೇಶ್ವರ ಸನ್ನಿಧಿ ಎದುರಿನ ಬೃಹತ್ ಕೆರೆ ಆಕರ್ಷಕವಾಗಿದೆ. ಕೆರೆಯ ಬದಿಯಲ್ಲೇ ಜಲದೇವತೆ, ಆಂಜನೇಯ, ಬಾಗಿಲು ಮಾರಮ್ಮ ಗುಡಿಗಳಿವೆ. ಇಲ್ಲಿನ ತಂಪು ವಾತಾವರಣದಲ್ಲಿ ಭಕ್ತಿಭಾವದಿಂದ ಮನಸ್ಸು ಇನ್ನಷ್ಟು ಪ್ರಫುಲ್ಲತೆ ಹೊಂದಬಲ್ಲದು. ಎತ್ತರವಾದ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಿಸಿರುವ ಈ ದೇವಾಲಯದಲ್ಲಿ ಮುಖಮಂಟಪ, ಹಜಾರ, ಸುಖನಾಸಿ ಮತ್ತು ಭೈರೇಶ್ವರ ದೇವರು ಸ್ಥಾಪಿತವಾಗಿರುವ ಗರ್ಭಗುಡಿ ಇದೆ. ಶಿವನು ಭೈರವೇಶ್ವರ ರೂಪ ಧರಿಸಿ ದೇವರಮನೆ ಗುಡ್ಡದಲ್ಲಿ ನೆಲೆಸಿದ್ದಾನೆಂಬ ಭಾವದಿಂದ ಇಲ್ಲಿ ಪೂಜಾಕಾರ್ಯಗಳು ಜರುಗುತ್ತವೆ. ಇಲ್ಲಿನ ಬಟ್ಟಲಬಾವಿ ನಿರ್ಮಾಣದ ಹಿಂದೆ ಬಾಲಕನೊಬ್ಬನ ಪ್ರಾಣವನ್ನು ಭೈರವೇಶ್ವರ ಉಳಿಸಿದ ಕತೆಯಿದೆ. ಇದು ಜೋಗಿ ವಂಶಸ್ಥರ ಶ್ರದ್ಧಾಭಕ್ತಿಯ ಕೇಂದ್ರವೂ ಹೌದು. ಹೊಯ್ಸಳರ ಪ್ರಮುಖ ಅರಸ ಬಲ್ಲಾಳರಾಯ ಶತ್ರುಗಳಿಂದ ರಕ್ಷಣೆ ಪಡೆದುಕೊಳ್ಳುವ ಸಲುವಾಗಿ ದೇವರಮನೆಗೆ ಬಂದು ಇಲ್ಲಿನ ಪ್ರಜೆಗಳ ಮನೆಯಲ್ಲಿ ಅಡಗಿದ್ದನೆಂಬ ಮಾತಿದೆ. ಇದಕ್ಕೆ ನಿದರ್ಶನವೆಂಬಂತೆ ದೇವರಮನೆ ಗುಡ್ಡದಲ್ಲೊಂದು ಸುರಂಗ ಮಾರ್ಗವಿದೆ. ಅದು ಈಗಲೂ ಬಲ್ಲಾಳರಾಯ ಗವಿ ಎಂದು ಪ್ರಸಿದ್ಧಿಗೊಂಡಿದೆ. ಇಲ್ಲಿನ ಸುಗ್ಗಿದೇವತೆ ಬಾಸಮ್ಮದೇವಿಯ ಉತ್ಸವ ಮೂರ್ತಿಯಲ್ಲಿ ಬಲ್ಲಾಳರಾಯ ಎಂಬ ಹೆಸರಿದೆ. ದೇವಿಗೆ ಜಾತ್ರೆಯಲ್ಲಿ ಛತ್ರಿ ಹಿಡಿಯುವ ಯಜಮಾನನಿಗೆ ಬಲ್ಲಾಳ ಎಂದು ಕರೆಯಲಾಗುತ್ತದೆ. ಬಲ್ಲಾಳರಾಯನು ಆದಿವಾಸಿ ಜನಾಂಗದವರಾದ ಮಲೆಯ ಕುಡಿಯರಿಗೆ ಏಲಕ್ಕಿ ಬೀಜ ನೀಡಿ 'ಸಾಂಬಾರ ರಾಣಿ' ಏಲಕ್ಕಿ ಬೆಳೆಸಲು ಪ್ರೇರಕಶಕ್ತಿಯಾದನೆಂಬ ಮಾತಿದೆ. ದೇವರಮನೆ ಗುಡ್ಡ ಹಲವಾರು ಕವಲು ದಾರಿಗಳನ್ನು ಒಳಗೊಂಡಿದೆ. ಜನ್ನಮ್ಮನಕಾಡು, ಕಲ್ಲುಮೆಟ್ಟಿಗೆ ದಾರಿಯಲ್ಲಿ ನೇರವಾಗಿ ಚಾರಣ ಹೋದರೆ ಉಜಿರೆ-ಚಾಮರ್‌ಕಾಡಿಗೆ ಪ್ರವೇಶಿಸಬಹುದು. ದೇವರಮನೆ ಗುಡ್ಡದಲ್ಲಿ ಎಡಭಾಗಕ್ಕೆ ಸಾಗಿದರೆ ಕಾಟಿಮೆಟ್ಟಿದ ಕಲ್ಲು ಕಾಣಸಿಗುವುದು. ಇದು ಪುರಾತನ ಕಾಲದಲ್ಲಿ ಕಲ್ಲು-ನೀರು ಕರಗುವ ಸಮಯದಲ್ಲಿ ಕಾಡುದನದ ಹಾಲನ್ನು ಕರು ಮಂಡಿಕೊಟ್ಟು ಕುಡಿದದ್ದು ಎಂಬ ನಂಬಿಕೆ. ಈ ನಿಸರ್ಗ ನಿರ್ಮಿತ ಚಿತ್ರ ಮನಸೂರೆಗೊಳ್ಳುತ್ತದೆ. ಇಲ್ಲಿಂದ ಮುಂದೆ ಪ್ರಯಾಣಿಸಿದರೆ ಕಲ್ವಡಗ್ರಿ, ಕುಂಬರಡಿ, ಬೈರಾಪುರ, ಶಿಶಿಲಗುಡ್ಡಕ್ಕೆ ಪ್ರವೇಶ. ದೇವರಮನೆ ದೇವಾಲಯ ನಿರ್ಮಿಸಿದ್ದು ಹೊಯ್ಸಳರ ಪೂರ್ವರಾಜ, ಜೈನಮತೀಯನಾದ ವೇಣೂರಿನ ಭೈರವ ಅರಸನಂತೆ. ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಭೈರವ ಅರಸ ಸಮೀಪದ ಬೆಟ್ಟಗೆರೆಯಲ್ಲಿ ಭೈರವನಕೋಟೆ ನಿರ್ಮಿಸಿದ್ದ. ದಕ್ಷಿಣ ಕನ್ನಡದ ಜನರು ದೇವರಮನೆಗೆ ಬಂದು ಹೋಗುತ್ತಿದ್ದರು ಎಂಬುದಕ್ಕೆ ನಿದರ್ಶನಗಳಿವೆ. - ಚಿತ್ರ-ಲೇಖನ: ಸಂಪತ್ ಬೆಟ್ಟಗೆರೆ