ಸನ್ನತಿ ಸನ್ನಿಧಾನ ಹೈದರಾಬಾದ್- ಕರ್ನಾಟಕದ ಪ್ರಮುಖ ಜಿಲ್ಲೆ ಗುಲ್ಬರ್ಗ. ಇದು ಶೈಕ್ಷಣಿಕ ಕ್ಷೇತ್ರವೂ, ಇತಿಹಾಸ ಗತ ವೈಭವವನ್ನು ಸಾರಿ ಹೇಳುವ ಸ್ಥಳವೂ ಹೌದು. ಜಿಲ್ಲೆಯ ಚಿತ್ತಾಪುರ, ಸೇಡಂ ತಾಲೂಕಿನಲ್ಲಿರುವ ಕಾಳಗಿ, ಸನ್ನತಿ ಗ್ರಾಮಗಳು ಪುರಾತತ್ವ ಇಲಾಖೆ ಗುರುತಿಸಿದ ಐತಿಹಾಸಿಕ ಕ್ಷೇತ್ರಗಳು. ಇಲ್ಲಿ ಸಿಕ್ಕಿರುವ ವಸ್ತುಗಳು 1 ಮತ್ತು 2ನೇ ಶತಮಾನದ ಚರಿತ್ರೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿವೆ. 1997ರಲ್ಲಿ ಲೋಕಾರ್ಪಣೆಯಾದ ಸ್ಥಳೀಯ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ 1ರಿಂದ 15 ಶತಮಾನಗಳಲ್ಲಿ ಕಾಣಸಿಗುವ ಮಣ್ಣು, ತಾಮ್ರ, ಕಬ್ಬಿಣ ಮತ್ತು ಚರ್ಮದ ವಸ್ತುಗಳು ಪ್ರದರ್ಶನಕ್ಕಿವೆ. ಹೆಜ್ಜೆ ಹೆಜ್ಜೆಗೂ ವೀರಗಲ್ಲುಗಳು, ಒಂದೇ ಕಲ್ಲಿನಲ್ಲಿ ಸೂಕ್ಷ್ಮವಾಗಿ ಕೆತ್ತಿರುವ ಶಿಲೆಗಳು ನಮ್ಮನ್ನು ಗತಕಾಲಕ್ಕೆ ಕರೆದೊಯ್ಯುತ್ತವೆ. ಕ್ರಿ.ಶ. 1, 2ನೇ ಶತಮಾನದಲ್ಲೇ ಶಿಲ್ಪಗಳನ್ನು ನಮ್ಮ ಪೂರ್ವಿಕರು ವಿವಿಧ ಮಾದರಿಯಲ್ಲಿ ಕೆತ್ತಿರುವುದನ್ನು ನೋಡಿದರೆ ಅಚ್ಚರಿಯಾಗದಿರದು. ಮಹಾವೀರ ತಪಸ್ಸಿಗೆ ಕುಳಿತಿರುವ ಶಿಲ್ಪ, ಜೈನ ತೀರ್ಥಂಕರ, ಶ್ರೀರಾಮ, ರೆಕ್ಕೆಯುಳ್ಳ ಪ್ರಾಣಿಗಳ ಸಾಲು, ವೀರಗಲ್ಲು ರಾಜ ರಾಣಿ, ಆನೆ ಸಾಲು, ಸಂಸ್ಕೃತಿ ಮೂರ್ತಿ, ದ್ವಾರಪಾಲಕ, ರಾಜರು ಉಪಯೋಗಿಸಿದ ಖಡ್ಗ, ಗುರಾಣಿ, ತಾಮ್ರದ ಪಾತ್ರೆಗಳು, 12ನೇ ಶತಮಾನದ ಶಾಸನಗಳು, ಫಿರಂಗಿ ಮದ್ದುಗುಂಡುಗಳು, ತೋಪು, ಕಬ್ಬಿಣದ ಗುಂಡುಗಳು, ಪತ್ರ ಬರೆಯುವ ಪ್ರೇಯಸಿಯ ಮೂರ್ತಿ, ಕನ್ನಡ ಮತ್ತು ಹಿಂದಿ ಶಾಸನಗಳು, ವಿಷದಿ ಕಲ್ಲು, ಕಲ್ಲಿನಲ್ಲಿ ಕೆತ್ತಿರುವ ಚಿತ್ತಾರ, ಕುಳಿತಿರುವ ಮನುಷ್ಯ, ಮಣ್ಣಿನ ಪಾತ್ರೆಗಳು, ಹಸನ್ಮುಖಿ ಬುದ್ಧ... ಅಬ್ಬಾ! ಹೇಳುತ್ತಾ ಹೋದರೆ ಮುಗಿಯುವುದಿಲ್ಲ, ಅಷ್ಟೊಂದು ಪುರಾತನ ವಸ್ತುಗಳು ಇಲ್ಲಿ ನೋಡಲಿಕ್ಕೆ ಲಭ್ಯ. 15ನೇ ಶತಮಾನದ ನಿಷೇಧಿ ಕಲ್ಲು, ಮಿಥುನ ಅಲಂಕೃತ ಕಂಬ, ಚೈತ್ರ ಬಾಗಿಲು, 12ನೇ ಶತಮಾನದ ಚಾಲುಕ್ಯ ಶೈಲಿ ಜಾತಕ ಕಥೆ, ಬುದ್ಧಪಾದ, ಸ್ತೂಪದ ಕಟಕಟೆಯ ಕಂಬದ ಮೇಲಿನ ಪುಷ್ಪವಿನ್ಯಾಸ, ಸಿಂಹ ಸೇರಿದಂತೆ ಹಲವು ಪ್ರಾಣಿಗಳ ಕಾಲು, ಹೆಡೆ ಎತ್ತಿದ ನಾಗರ ಹಾವು, ಎತ್ತು ಮತ್ತು ಚಕ್ಕಡಿಗಳು, ಕುಳಿತಿರುವ ದಂಪತಿ, ಮಡಿಕೆ ಚೆಂಡುಗಳ ಸಾಲು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಶ್ರೀರಾಮ ಪಟ್ಟಾಭಿಷೇಕ, ಮೈಸೂರು ಶೈಲಿಯ ರಾಜ ಮನೆತನದ ಚಿತ್ರ, ಶಿವಲಿಂಗದ ಎದುರಿನ ನಂದಿ ವಿಗ್ರಹ, ಮಯೂರ, ಗಣಪತಿ, ಅರ್ಧಕಮಲ ಮುಂತಾದ ಚಿತ್ರಗಳು ಮ್ಯೂಸಿಯಂನ ಗೋಡೆಯೊಳಗೆ ಇತಿಹಾಸ ಹೊತ್ತು ಕುಳಿತಿವೆ. ಶಾಸನಗಳು, ಶಿಲ್ಪಗಳು ಮತ್ತು ಪುರಾತನ ವಸ್ತುಗಳ ಬಗ್ಗೆ ಆಸಕ್ತಿವುಳ್ಳವರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಭೇಟಿ ಸಮಯ: ಬೆಳಗ್ಗೆ 10ರಿಂದ ಸಂಜೆ 5. ಸೋಮವಾರ ರಜೆ. -ಬಿ.ಜಿ. ಪ್ರವೀಣಕುಮಾರ