ರತ್ನಗಿರಿ ರಹಸ್ಯ ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆ ಇಲ್ಲ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಗಿರಿಶಿಖರಗಳೇ ಗೋಚರಿಸುತ್ತವೆ. ಇಂಥ ಹಸಿರು ಕಾನನ ಜಿಲ್ಲಾ ಕೇಂದ್ರದಲ್ಲಿ ಒಂದು ಪುಟ್ಟ ದ್ವೀಪದಂತಿರುವ ರಕ್ತಗಿರಿಬೋರೇ ಮಹಾತ್ಮ ಗಾಂಧಿ ಉದ್ಯಾನವನ, ಇಲ್ಲಿನ ಜನರಿಗೆ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಎಲ್ಲವೂ ಆಗಿದೆ. ಅದಕ್ಕಿಂತ ಮುಖ್ಯವಾಗಿ ಅದರ ಸೊಬಗು ಪ್ರವಾಸ ತಾಣಗಳಿಗೇನೂ ಕಮ್ಮಿ ಇಲ್ಲ ಎಂಬಂತಿರುವುದು. ಇಲ್ಲಿಗೆ ಭೇಟಿ ನೀಡಿ ಸುತ್ತಾಡುವವರ ಮನಸ್ಸಿಗೆ ರಿಲ್ಯಾಕ್ಸ್ ಖಂಡಿತ. ಏಕೆಂದರೆ, ದಣಿದ ಮನಕ್ಕೆ ಆಹ್ಲಾದಕರ ನೀಡುವ ವಾತಾವರಣ ಇಲ್ಲಿದೆ. ಚಿಣ್ಣರ ಆಟಿಕೆ ಪರಿಕರಗಳಿವೆ. ಮಕ್ಕಳಿಗಾಗಿ ಪುಟ್ಟ ರೈಲಿದೆ. ಅದರಲ್ಲಿ ಕುಳಿತು ಇಡೀ ಬೆಟ್ಟ ಪ್ರದಕ್ಷಿಣೆ ಹಾಕುವುದೇ ಮನಕಾನಂದ. ರೈಲಿನಲ್ಲಿ ಕುಳಿತು ಹೋಗುವಾಗ ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ, ದೇವಿರಮ್ಮನಬೆಟ್ಟಗಳನ್ನು ಕಾಣಬಹುದು. ಮನರಂಜನೆಗೆ ಇಲ್ಲಿ ವಾಟರ್ ಪಾರ್ಕ್ ಕೂಡ ನಿರ್ಮಿಸಲಾಗಿದೆ. ಸಂಗೀತಕ್ಕೆ ತಕ್ಕಂತೆ ಕುಣಿಯುವ ಜಲನರ್ತನ ನೋಡುಗರ ಮನ ಸೆಳೆಯುವಂಥದ್ದು. ಶಾಲಾ ಮಕ್ಕಳೊಂದಿಗೆ, ಸಂಬಂಧಿಗಳೊಂದಿಗೆ ಈ ರತ್ನಗಿರಿಬೋರೆಬೆಟ್ಟಕ್ಕೆ ಭೇಟಿ ನೀಡಿ ಸವಿದರೆ ಅಚ್ಚಳಿಯದ ನೆನಪುಗಳನ್ನು ಕಟ್ಟಿಕೊಡಬಲ್ಲದು. ವಿಶೇಷವಾಗಿ ಪ್ರೇಮಿಗಳ ನೆಚ್ಚಿನ ತಾಣವೂ ಹೌದು. ಶಂಕರ್ ನಾಗ್ ಅಭಿನಯದ 'ಎಸ್‌ಪಿ ಸಾಂಗ್ಲಿಯಾನ' ಸಿನಿಮಾ ನೋಡಿದವರಿಗೆ ಈ ರತ್ನಗಿರಿಬೋರೆ ಚೆಲುವಿನ ರಹಸ್ಯ ನೆನಪಿಗೆ ಬರಬಹುದು. ಈ ಉದ್ಯಾನ ಎತ್ತರದ ಭೂಪ್ರದೇಶದಲ್ಲಿರುವುದರಿಂದ ತಂಪಾದ ಗೀಳಿ ಬೀಸುತ್ತಿರುತ್ತದೆ. ತಗ್ಗು ಉಬ್ಬಿನ ಭೂಪ್ರದೇಶಕ್ಕೆ ಪೂರಕವಾಗಿ ವ್ಯವಸ್ಥೆಗೊಳಿಸಿರುವ ಮೆಟ್ಟಿಲುಗಳು, ಬಣ್ಣಬಣ್ಣದ ಹೂ ಗಿಡಗಳಷ್ಟೇ ಅಲ್ಲದೆ, ಹಸಿರು ಕಾರ್ಪೆಟ್ ಹಾಸಿ ಸ್ವಾಗತ ಕೋರುತ್ತಿದ್ದಾರೆ ಎನಿಸುವಂಥ ಮೆತ್ತಮೆತ್ತನೆ ಹಸಿರು ಬೆಳೆಸಿರುವುದು ಮುದ ನೀಡುವಂತಿದೆ. ನಾಲ್ಕಾರು ಕಾರಂಜಿಗಳು ಚಿಮ್ಮಿದಾಗ ನೀರ ನರ್ತನ ಆಸ್ವಾದಿಸುತ್ತಿದ್ದಲೇ ಹೊತ್ತು ಸರಿಯುವುದೇ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ಮನಸ್ಸು ಹಿಡಿದಿಡುತ್ತದೆ. 250ಕ್ಕೂ ಹೆಚ್ಚು ಪ್ರಭೇದದ ರೋಸ್ ಗಿಡಗಳಿರುವ ನೆಹರು ರೋಸ್ ಗಾರ್ಡನ್ ಮಕ್ಕಳ ಹುಟ್ಟುಹಬ್ಬ ಆಚರಣೆಗೆ ಪ್ರೇರಕವಾಗುವಂತಿದೆ. ವೇದಗಳ ಯುಗವನ್ನು ನೆನೆಸುವಂಥ ನವಗ್ರಹ ವನ ಇಲ್ಲಿದೆ. ಹೀಗೆಬನ್ನಿ... ಜಿಲ್ಲಾ ಬಾಲಭವನ ಸೊಸೈಟಿ ಉಸ್ತುವಾರಿಯಲ್ಲಿರುವ ಈ ಉದ್ಯಾನ ಚಿಕ್ಕಮಗಳೂರು ಸಿಟಿ ಬಸ್ ನಿಲ್ದಾಣದಿಂದ 3 ಕಿ.ಮೀ. ಅಂತರದಲ್ಲಿದೆ. ವಿವರಗಳಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, 1ನೇ ಮಹಡಿ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು. ಹಲೋ: 08262-220930 ಇಲ್ಲಿಗೆ ಸಂಪರ್ಕಿಸಿ. - ಎಂ.ಜಿ. ಲಕ್ಷ್ಮೀಕಾಂತರಾಜು @.