ಶಿಲ್ಪ ಕಲಾ ವೈಭವ ನಾಡಿನ ಸಂಸ್ಕೃತಿ ಮತ್ತು ಪರಂಪರೆಗಳ ಬೋಧನೆ, ಸಂಶೋಧನೆ, ಪ್ರಕಟಣೆಗಳ ಕೈಂಕರ್ಯದಲ್ಲಿ ತೊಡಗಿರುವ ಕನ್ನಡಿಗರ ಮಾತೃಸಂಸ್ಥೆ ಹಂಪಿ ಕನ್ನಡ ವಿಶ್ವವಿದ್ಯಾಲಯ. 800 ಎಕರೆ ವಿಸ್ತಾರ ಪ್ರದೇಶದಲ್ಲಿರುವ ವಿ.ವಿ ಆವರಣದಲ್ಲಿರುವ ನಿಸರ್ಗದತ್ತವಾದ ಬೃಹತ್ ಶಿಲೆಗಳಿಗೂ ಇಲ್ಲಿ ಸೃಜನಾತ್ಮಕ ರೂಪ! ಕನ್ನಡದ ಪ್ರಥಮ ಬಯಲು ಶಿಲ್ಪ ಪ್ರದರ್ಶನ ಶಾಲೆ ಸ್ಥಾಪಿಸಿದ ಕೀರ್ತಿಯೂ ಕನ್ನಡ ವಿಶ್ವವಿದ್ಯಾಲಯದ್ದು. ಪ್ರಥಮ ಕುಲಪತಿಗಳಾಗಿ ಬಂದ ಡಾ.ಚಂದ್ರಶೇಖರ್ ಕಂಬಾರರು ಹಂಪಿ ಪರಿಸರದ ವಾಸ್ತು ಶಿಲ್ಪದ ಮಾದರಿಯಲ್ಲಿಯೇ ಕನ್ನಡ ವಿ.ವಿಗೆ ದೈಹಿಕ ಸ್ವರೂಪವನ್ನು ನೀಡಿದರು. ಮೂರನೇ ಕುಲಪತಿಗಳಾಗಿ ಬಂದ ಡಾ.ಎಚ್.ಜೆ.ಲಕ್ಕಪ್ಪಗೌಡ ಹಾಗೂ ಆಗಿನ ಕುಲಸಚಿವರಾದ ಡಾ.ಕೆ.ವಿ ನಾರಾಯಣ ಅವರ ಪ್ರಯತ್ನದಿಂದಾಗಿ 'ಶಿಲ್ಪವನ' ಜೀರ್ಣೋದ್ಧಾರಗೊಂಡಿತು. ಜತೆಗೆ ಹೊಸ ಶಿಲ್ಪಗಳೂ ಬಂದು ಸೇರಿದವು. ಶಿಲ್ಪವನದ ಸುತ್ತಲೂ ಕಾಂಪೌಂಡು ನಿರ್ಮಾಣವಾಯಿತು. ಇದೆಲ್ಲ ವಿ.ವಿಯ ಶಿಲ್ಪಕಲಾ ವಿದ್ಯಾರ್ಥಿಗಳಿಂದಲೇ ನಡೆದು, ಹೊಸ ದೃಷ್ಟಿಯ ನವೀನ ಸೃಷ್ಟಿ ರೂಪುಗೊಂಡಿತು. ವಿ.ವಿ. ಕಲಾವಿದ ಕೆ.ಕೆ.ಮಕಾಳಿ, ಶಿಲ್ಪಕಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರಾದ ರಾಜಕುಮಾರ್ ಸಂತೋಷ, ಭಾಸ್ಕರ್ ಆಚಾರ್ಯ, ಡಾ.ಶಿವಾನಂದ್ ಬಂಟನೂರ ಮತ್ತು ದಾವಣಗೆರೆಯ ವಿ.ಬಿ.ಹಿರೇಗೌಡರ್ ಅವರೆಲ್ಲರ ಪ್ರಯತ್ನ ಶಿಲ್ಪವನದ ಜೀರ್ಣೋದ್ಧಾರದ ಹಿಂದಿದೆ. ಕನ್ನಡ ವಿ.ವಿ.ಯ ಶಿಲ್ಪ ಮತ್ತು ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಶಿಲ್ಪವನವನ್ನೇ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಾದ ವಿಠ್ಠಲ ಬಡಿಗೇರ್, ರಮೇಶ್ ಬಿಜಾಪುರ್, ಭಷೀರ್ ಅಹ್ಮದ್, ವಿಶ್ವನಾಥ್ ಮುದಗಲ್, ಬಸವರಾಜ್ ಹಿರೇಗೌಡರ್ ಮತ್ತಿತರರು ವಿ.ವಿಯ ಆವರಣದಲ್ಲಿ ಇರುವ ನಿಸರ್ಗದತ್ತ ಕಲ್ಲುಗಳನ್ನು ಸಂಗ್ರಹಿಸಿ, ಅವುಗಳಿಗೆ ಕಲೆಯ ರೂಪ ನೀಡಿ 'ಶಿಲ್ಪವನವು ವಿಜಯನಗರದ ವಾಸ್ತು ಶಿಲ್ಪಗಳಿಗೆ ಕಡಿಮೆಯಿಲ್ಲ' ಎಂಬುದನ್ನು ಸಾದರ ಪಡಿಸಿದ್ದಾರೆ. ಶಿಲ್ಪವನದಲ್ಲಿ ಮನುಷ್ಯನ ಮುಖ ಹೊತ್ತ ಆಮೆ, ಬಂಡೆಯ ಮೇಲೆ ಸಂತುಷ್ಟನಾಗಿ ನಿಂತಿರುವ ವಿಘ್ನನಿವಾರಕ, ಶಿಲೆಯ ಸಿಂಹ, ಮದೋನ್ಮತ್ತ ಗೂಳಿ, ತಿಮಿಂಗಲ ಮೀನು, ಗಿಳಿ, ಇಂಥ ವಿಶಿಷ್ಟ ಶಿಲ್ಪಗಳಿವೆ. ನಿಸರ್ಗದತ್ತ ಶಿಲೆಯಲ್ಲಿ ಕಲೆಯನ್ನು ಹುಡುಕುವ, ಅವುಗಳಿಗೆ ಸೃಜನಾತ್ಮಕ ರೂಪವನ್ನು ನೀಡುವ ಕಾರ್ಯದ ಜತೆಗೆ ಜನಸಾಮಾನ್ಯರೂ ಅವುಗಳನ್ನು ಗುರುತಿಸುವ ರೀತಿಯಲ್ಲಿ ಶಿಲ್ಪಗಳನ್ನು ಕಲಾಕೃತಿಗಳಾಗಿ ಮಾರ್ಪಡಿಸಿರುವುದು ಇಲ್ಲಿನ ವಿಶೇಷ. ಕನ್ನಡ ವಿ.ವಿಯ ಎಲ್ಲ ವಿಭಾಗಗಳೊಂದಿಗೆ ಶಿಲ್ಪವನವೂ ಕೂಡ ಚರಿತ್ರೆಯ ಸಾಲಿನಲ್ಲಿ ನಿಂತು ಕನ್ನಡದ ಸಂಸ್ಕೃತಿ ಪರಂಪರೆಗಳ ಅಧಿಕೃತ ಪ್ರತಿನಿಧಿಯಾಗಿದೆ. - ಪ್ರವೀಣರಾಜು ಎಸ್. ಸೊನ್ನದ