ಕೂಡಲಿ ಸಂಗಮ ತುಂಗಾಭದ್ರಾತ್ಮಕಂ ವಿದ್ದಿ ಹರಿಶಂಕರಯೋರ್ವಪುಃ ತುಂಗಾ ನಾರಾಯಣಃ ಸಾಕ್ಷಾತ್ ಭದ್ರಾದೇವೋ ಮಹೇಶ್ವರಃ ಇದು ಕೂಡಲಿ ಕ್ಷೇತ್ರದ ವಿಸ್ತಾರದ ಬಗ್ಗೆ ಸ್ಕಂದ ಪುರಾಣದಲ್ಲಿನ ಉಲ್ಲೇಖ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತಾಲೂಕಿನ ಈ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ನದಿಯ ಸನಿಹದಲ್ಲಿ ಇರುವ ಶಾರದಾಪೀಠ ಕಟ್ಟಡ ವಿದ್ಯಾಶಂಕರನ ದೇಗುಲಗಳು ಸಾಕಷ್ಟು ಭಕ್ತವೃಂದವನ್ನು ಹೊಂದಿದೆ. ಶ್ರೀಕ್ಷೇತ್ರಕ್ಕೆ ಬರುವುದರಿಂದ ಪ್ರಮುಖವಾಗಿ ಮೂರು ಲಾಭಗಳಾಗುತ್ತವೆ. ಮೊದಲನೆಯದಾಗಿ ದೇವರ ದರ್ಶನ. ಎರಡನೆಯದು, ತುಂಗಾ- ಭದ್ರಾ ನದಿಯ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನ. ಮೂರನೆಯದು, ಪ್ರಕೃತಿ ಸೊಬಗು ಸವಿಯಲು. ಇಂಥ ಮೂರು ಬಯಕೆಗಳನ್ನು ಒಂದೇ ಸ್ಥಳದಲ್ಲಿ ಈಡೇರಿಸಿಕೊಳ್ಳಲು ಕ್ಷೇತ್ರಕ್ಕೆ ಭೇಟಿ ನೀಡಬಹುದು. ಕೂಡಲಿಯಲ್ಲೇನಿದೆ? ಕೂಡಲಿಯು ಶಿವಮೊಗ್ಗದ ಈಶಾನ್ಯ ದಿಕ್ಕಿನಲ್ಲಿದೆ. ಇದು ಹೊಳೆಹೊನ್ನೂರು ಬಳಿಯ ಪುಟ್ಟ ಗ್ರಾಮ. ತುಂಗಾ ನದಿಯ ದಕ್ಷಿಣ ಕಡೆಯಿಂದ ಈ ಹಳ್ಳಿಗೆ ಹರಿದು ಪಶ್ಚಿಮ ಭಾಗಕ್ಕೆ ಹರಿಯುತ್ತದೆ. ಅದೇ ರೀತಿ ಭದ್ರಾ ನದಿಯು ಹೊಳೆಹೊನ್ನೂರಿನ ಮೂಲಕ ಆಗ್ನೇಯ ದಿಕ್ಕಿನಿಂದ ಗ್ರಾಮವನ್ನು ಪ್ರವೇಶಿಸಿ ತುಂಗೆ ಜತೆ ಸೇರಿ ಉತ್ತರಾಭಿಮುಖವಾಗಿ ಹರಿಯುತ್ತಾ ತುಂಗಭದ್ರೆ ಎನಿಸಿಕೊಳ್ಳುತ್ತದೆ. ಹೀಗಾಗಿ, ಈ ಕ್ಷೇತ್ರಕ್ಕೆ 'ಕೂಡಲಿ' ಎಂಬ ಹೆಸರು ಬಂತು. ಶಾರದಾ ಪೀಠ ಹೊಳೆಯ ಸನಿಹದಲ್ಲೇ ಇರುವ ಶಾರದಾಪೀಠದ ಶಾಖೆಯು ನಮ್ಮನ್ನು ಅಧ್ಯಾತ್ಮ ಲೋಕಕ್ಕೆ ಕರೆದೊಯ್ಯುತ್ತದೆ. ಈ ಪೀಠವನ್ನು 1576ರಲ್ಲಿ ಸ್ಥಾಪಿಸಲಾಗಿದೆ. ಈ ಪೀಠವನ್ನು ಸಂದರ್ಶಿಸಲು ಸಾವಿರಾರು ಭಕ್ತರು ಬರುತ್ತಾರೆ. ಹೀಗಾಗಿ, ಧಾರ್ಮಿಕ ದೃಷ್ಟಿಯಿಂದಲೂ ಅತ್ಯಂತ ಮಹತ್ವದ ಸ್ಥಳವಾಗಿದೆ. ಪ್ರಕೃತಿ ಸೊಬಗು ಒಂದೆಡೆ ತುಂಗಾ- ಭದ್ರಾ ಅಪೂರ್ವ ಸಂಗಮವಾದರೆ ಮತ್ತೊಂದೆಡೆ ಹಸಿರು ಸೀರೆ ಉಟ್ಟ ಬೆಟ್ಟ. ಅಂದರೆ, ಸಹ್ಯಾದ್ರಿ ಶ್ರೇಣಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಮುಗಿಲೆತ್ತರಕ್ಕೆ ಸಾಟಿ ಎಂಬಂತೆ ಬೆಳೆದು ನಿಂತಿರುವ ಗಿಡ- ಮರಗಳನ್ನು ನೋಡಿದಾಗ ನಾವು ಕಳೆದುಕೊಂಡಿದ್ದು ಇಲ್ಲೇ ಸಿಗಬಹುದು ಎಂಬ ಭಾವ ಆವರಿಸಿದರೂ ಅಚ್ಚರಿಪಡಬೇಕಿಲ್ಲ. ನೀರ ಹರಿವು ಕಡಿಮೆ ಇದ್ದಾಗ ನದಿಯಲ್ಲೇ ಭಕ್ತರು ನಡೆದು ಬಂದು ಕ್ಷೇತ್ರ ತಲುಪುತ್ತಾರೆ. ಆದರೆ, ಇದು ಅಪಾಯವೇ ಸರಿ. ಇಲ್ಲಿ ಜಿಟಿಜಿಟಿ ಮಳೆ, ಚಳಿಗಾಲದ ಮಂಜಿನ ಲೀಲೆಗಳು ನದಿಯೊಡಲಲ್ಲಿ ಸೃಷ್ಟಿಸುವ ಸ್ವಚ್ಛಂದ ಪರಿಸರ ಕಾದು ಸವಿಯುವಂತಿರುತ್ತದೆ. ಅದೃಷ್ಟ ನಿಮ್ಮ ಪಾಲಿಗಿರಬೇಕಷ್ಟೇ. ಹಲವು ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲು ಶೇಷ್ಠ ಕ್ಷೇತ್ರವಾಗಿಯೂ ಈ ಕೂಡಲಿ ಸಂಗಮ ಪ್ರಸಿದ್ಧಿ. ಹೀಗೆ ಬನ್ನಿ... ಶಿವಮೊಗ್ಗ ನಗರದಿಂದ 14 ಕಿ.ಮೀ. ದೂರದಲ್ಲಿ ಕೂಡಲಿ ಕ್ಷೇತ್ರವಿದೆ. ಸೂಕ್ತ ಬಸ್‌ಗಳ ವ್ಯವಸ್ಥೆ ಇದೆ. ಸ್ವಂತ ವಾಹನಗಳನ್ನು ತರುವವರಿಗೆ ಪಾರ್ಕಿಂಗ್‌ಗೆ ಜಾಗವಿದೆ. ಇನ್ನು ಬೆಂಗಳೂರಿನಿಂದ ಬರುವುದಾದರೆ ತರೀಕೆರೆ, ಭದ್ರಾವತಿ, ಹೊಳೆಹೊನ್ನೂರು ಮುಖಾಂತರ ಬರಬಹುದು. - ವಸಂತಕುಮಾರ ಪಾಟೀಲ್ ಎಸ್. @.