ಭಂಗಿಯ ಬೆನ್ನೇರಿ ಸಕಲರಿಗೂ ಒಳಿತಾಗಲಿ ಎಂಬ ಧ್ಯೇಯದೊಂದಿಗೆ ನಾಗಸಾಧುಗಳು ಅಧ್ಯಾತ್ಮ ಸತ್ಯ ಶೋಧನೆಗೆ ಯತ್ನಿಸುತ್ತಾರೆ... ಸಕಲರಿಗೂ ಒಳಿತಾಗಲಿ ಎಂಬ ಧ್ಯೇಯದೊಂದಿಗೆ ನಾಗಸಾಧುಗಳು ಅಧ್ಯಾತ್ಮ ಸತ್ಯ ಶೋಧನೆಗೆ ಯತ್ನಿಸುತ್ತಾರೆ. ಇದಕ್ಕೆ ಮನಸ್ಸನ್ನು ನಿಗ್ರಹಿಸಲು ಅವರು ಮೊರೆ ಹೋಗುವುದು ಭಂಗಿಗೆ. ಭಾರತದಲ್ಲಿ ಸೃಷ್ಟಿಯ ಶೋಧನೆ ಶತಶತಮಾನಗಳಿಂದಲೂ ನಡೆಯುತ್ತಲೇ ಇದೆ. ಮಾನವ ವಿಕಾಸದ ಹಾದಿಯಲ್ಲಿ ಅಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಜೀವನ ಸತ್ಯವನ್ನು ಶೋಧಿಸಲು ಆಯಾ ಕಾಲಕ್ಕನುಗುಣವಾಗಿ ಅನೇಕ ಪಂಥಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ನಾಗಾ ಪಂಥವೂ ಒಂದು. ಅಲೆದಾಟ, ಹುಡುಕಾಟವೇ ಹಠಯೋಗಿಗಳಾದ ನಾಗಾ ಸಾಧುಗಳು ಮೋಕ್ಷ ಪಡೆಯುವ ಹಾದಿ. ಅನಿಸಿದ್ದನ್ನು ಧ್ಯಾನ, ತಪಸ್ಸಿನ ಅಡಿಗಲ್ಲಿನ ಮೇಲೆ ಸಾಧಿಸುವವರು. ಇವರೂ ಆಧ್ಯಾತ್ಮದ ನೆಲೆಗಟ್ಟಿನ ಮೇಲೆ ಸತ್ಯ ದರ್ಶನ ಮಾಡಿ, ಆ ಮೂಲಕ ಲೋಕ ಕಲ್ಯಾಣ ಮಾಡಬೇಕೆಂಬ ಪರಮ ಧ್ಯೇಯವನ್ನು ಹೊಂದಿರುವವರು. ಸತ್ಯ ದರ್ಶನಕ್ಕಾಗಿ ಮನಸ್ಸನ್ನು ಹದ್ದುಬಸ್ತಿನಲ್ಲಿಟ್ಟಿಕೊಳ್ಳುವುದು ಬಹಳ ಮುಖ್ಯ ಎಂಬುದು ನಾಗಾ ಸಾಧುಗಳ ನಂಬಿಕೆ. ಮನಸ್ಸನ್ನು ಎಲ್ಲ ಕಟ್ಟುಪಾಡುಗಳಿಂದ ಮುಕ್ತವಾಗಿಸಿ, ತೇಲುವ ಸ್ಥಿತಿಗೆ ಕೊಂಡೊಯ್ದು ಆ ಮೂಲಕ ಆಧ್ಯಾತ್ಮದ ಉನ್ನತ ಸ್ಥಿತಿಯನ್ನು ತಲುಪಿ ಜೀವನ ಸತ್ಯಗಳನ್ನು ಅನ್ವೇಷಿಸುವ ಅಲೆಮಾರಿಗಳು. ಊರೂರು ಸುತ್ತುತ್ತಾ ಸತ್ಯ ಅರಸುತ್ತಾ ಹೋಗುವ ವಿರಾಟ್ ಯೋಗಿಗಳು. ಭಂಗಿಯ ಅಧ್ಯಾತ್ಮ ಈ ಹಠ ಯೋಗಿಗಳು ಇದೇ ಮೊದಲ ಬಾರಿಗೆ ಕರ್ನಾಟಕಕ್ಕೂ ಕಾಲಿಟ್ಟಿದ್ದರು. ಹಾಸನ ಜಿಲ್ಲೆ ಅರಸಿಕೆರೆ ತಾಲೂಕು ಬಾಣಾವರಕ್ಕೆ ಆಗಮಿಸಿರುವ 157 ನಾಗಸಾಧುಗಳು ಮೈ ತುಂಬಾ ವಿಭೂತಿ ಧರಿಸಿಯೇ ಧ್ಯಾನ, ಯಾಗಗಳನ್ನು ಮಾಡಿದ್ದು ವಿಸ್ಮಯ ಮೂಡಿಸಿತು. ಮೌನವೇ ಇವರ ಆಭರಣ. ಸದಾ ಭಂಗಿ ಸೇದುತ್ತಲೇ ಮನಸ್ಸನ್ನು ಅಧ್ಯಾತ್ಮದ ಉನ್ನತ ಸ್ಥಿತಿಗೆ ಹೋಗಿ ಸತ್ಯ ದರ್ಶನ ಮಾಡುವುದು ಬೆರಗು ಹುಟ್ಟಿಸುತ್ತದೆ. ಸತ್ಯ ದರ್ಶನ ಮಾಡಲು ನಾಗಾ ಸಾಧುಗಳು ತಮಗೆ ಅನಿಸಿದಾಗ 'ಹರ ಹರ ಮಹಾದೇವ್‌' ಎಂದು ಭಜಿಸುತ್ತಾ ಭಂಗಿಯನ್ನು ಕೈಗೆತ್ತಿಕೊಂಡರೆ, ಇಳಿಸುವುದು ಅವರಿಗೆ ಸಾಕು ಎನಿಸಿದಾಗಲೇ. ಮನಸ್ಸು ಮುಕ್ತಗೊಳಿಸಿಕೊಳ್ಳುತ್ತಲೇ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಇವರಿಗೆ ಭಂಗಿಯೇ ಆಧಾರ. ದೇಹವನ್ನು ದಂಡಿಸಿ, ಸತ್ಯ ಶೋಧನೆಗಾಗಿ ಎಲ್ಲ ನಿರ್ಬಂಧಗಳಿಂದ ಮುಕ್ತರಾಗಲು ಓಶೋ ರಜನೀಶ್ ಅನುಯಾಯಿಗಳಂತೆ ನಾಗಾ ಸಾಧುಗಳೂ ಬಳಸೋದು ಭಂಗಿಯನ್ನು. ಎಲ್ಲೆಲ್ಲೂ ಸಾಧುಗಳು ಶಂಕರನ ಉಪಾಸನೆಯೊಂದಿಗೆ ದತ್ತಾತ್ರೇಯನನ್ನೂ ಆರಾಧಿಸುವ 2 ಲಕ್ಷ ನಾಗಾ ಸಾಧುಗಳು ಭಾರತದಲ್ಲಿದ್ದಾರೆ. ಹರಿದ್ವಾರ, ನಾಸಿಕ್, ಉಜೈನಿ, ಅಲಹಾಬಾದ್ ಮೊದಲಾದೆಡೆ ನಡೆಯುವ ಸಾಧು ಸಂತರ ಮಹಾ ಕುಂಭ ಮೇಳದಂತೆ ಬಾಣಾವರದಲ್ಲೂ ಸಾಧು ಸಂತರ ಸಮಾಗಮ ನಡೆದು, ಧರ್ಮ ಸಂದೇಶ ಸಾರಿದರು. ಬಾಣಾವರದ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಹಾಗೂ ಸಖರಾಯಪಟ್ಟಣದ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರು ಮಹಾರಾಜರ ಸ್ಮರಣಾರ್ಥವಾಗಿ ಶ್ರೀಸದ್ಗುರು ದತ್ತಾತ್ರೇಯ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಸಮಾಗಮ ಕಾರ್ಯಕ್ರಮ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆದಿದ್ದು ವಿಶೇಷ. ಝನಾ ಅಖಾಡದ ಮುಖ್ಯ ಕೇಂದ್ರ ಹರಿದ್ವಾರದಲ್ಲಿದ್ದು, ಆಚಾರ್ಯ ಮಹಾಮಂಡಲೇಶ್ವರರಾದ ಶ್ರೀ ಅವಿದೇವಾನಂದ ಮಹಾರಾಜ್ ನೇತೃತ್ವದಲ್ಲಿ ಪಂಚದಶಮಿ ಝನಾ ಅಖಾಡದ ಭಾರತದ ಅತಿ ದೊಡ್ಡ ಅಖಾಡವಾಗಿ ಪ್ರಖ್ಯಾತಿ ಪಡೆದಿದೆ. ಸುಮಾರು ಲಕ್ಷಾಂತರ ಸಾಧುಗಳು ಝನಾ ಅಖಾಡದ ಆಶ್ರಮದಲ್ಲಿದ್ದು ಉತ್ತರ ಭಾರತದ ಹಲವೆಡೆ ಸಾಧನೆಯಲ್ಲಿ ನಿರತರಾಗಿದ್ದಾರೆ. 'ಆದಿ' ಚರಿತೆ ಹಿಂದೂ ಧರ್ಮದ ಏಕದಂಡಿ ಪರಂಪರೆಯುಳ್ಳ ನಾಗಾ ಸಾಧುಗಳನ್ನು 8ನೇ ಶತಮಾನದಲ್ಲೇ ಆದಿ ಶಂಕರಚಾರ್ಯರು ಸಂಘಟಿಸಿದ್ದರು. 16ನೇ ಶತಮಾನದಲ್ಲಿ ಬಂಗಾಳದ ಮಧುಸೂದನ ಸರಸ್ವತಿ ಮೊಗಲರ ಆಳ್ವಿಕೆಯಲ್ಲಿ ನಾಗಾ ಸಾಧುಗಳನ್ನು ಸಂಘಟಿಸಿ, ಹಿಂದೂಗಳ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ತಡೆಯಲು ಯತ್ನಿಸಿದ್ದರು. ಆಗಲೇ ಈ ನಾಗಾಸಾಧುಗಳನ್ನು ಶಸ್ತ್ರ ಮತ್ತು ಅಧ್ಯಾತ್ಮದಲ್ಲಿ ನೈಪುಣ್ಯ ಪಡೆಯಲು ಅಣಿಗೊಳಿಸಲಾಯಿತು. ಶಂಕರನ ಆರಾಧಕರಾದ ಈ ನಾಗಾ ಸಾಧುಗಳು ಯಾವುದೇ ಜಾತಿ, ಲಿಂದ ಭೇದವಿಲ್ಲದೇ ಸನ್ಯಾಸತ್ವ ಸ್ವೀಕರಿಸಲು ಮುನ್ನುಡಿ ಬರೆದಿದ್ದೂ ಆಗಿದೆ.