ಆಹಾ ಉಳವಿ ಅಂತೂಇಂತೂ ಐದು ದಿನ ರಜೆ ಮಂಜೂರಾಯಿತು. ಎಲ್ಲದರೂ ಟೂರ್ ಹೋಗುವುದು ಎಂದು ಗೆಳೆಯರೆಲ್ಲ ತೀರ್ಮಾನಿಸಿದರು. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಉಳವಿ ಸುಕ್ಷೇತ್ರಕ್ಕೆ ಹೋಗುವುದೆಂದು ಪ್ಲ್ಯಾನ್ ರೆಡಿಯಾಯಿತು. ಉಳವಿ ದಟ್ಟಾರಣ್ಯದಿಂದ ಆವರಿಸಿರುವ ಪ್ರದೇಶ. ನಿಸರ್ಗ ನಿರ್ಮಿತ ಹೊಂಡ ಮತ್ತು ಗುಹೆಗಳಿಗೆ ಪ್ರಸಿದ್ಧಿ. ಮೊದಲ ದಿನ ಅಣ್ಣ ಚನ್ನಬಸವಣ್ಣನ ದರ್ಶನಕ್ಕೆ ಸೀಮಿತ. ಎರಡನೇ ದಿನ ಮುಂಜಾನೆಯೇ ಶುರುವಾಯಿತು ನೋಡಿ ನಮ್ಮ ಸಾಹಸ. ಉಳವಿ ಗುಹೆಗಳಲ್ಲಿ ಆಕಳ ಗವಿಯೇ ಮೋಸ್ಟ್ ಅಡ್ವೆಂಚರಸ್. ಎಲ್ಲ ತಯಾರಿ ಮಾಡಿಕೊಂಡು, ನಟರಾಜ ಸರ್ವಿಸ್‌ನೊಂದಿಗೆ ಪ್ರಯಾಣ ಬೆಳೆಸಿದೆವು. ಸುಮಾರು 7 ಕಿಮೀ ದಾರಿಯನ್ನು ಕಾಲ್ನಡಿಗೆಯಿಂದ ಕ್ರಮಿಸಬೇಕಾಗಿತ್ತು. ಹೊದಿಕೆಯಂತೆ ಆವರಿಸಿಕೊಂಡಿರುವ ಕಾಡಿನಲ್ಲಿ ಸಾಗುತ್ತಾ ಕಂಡದ್ದು ಗಗನಚುಂಬಿ ಮರಗಳು. ಅವುಗಳಲ್ಲಿ ಎಷ್ಟೋ ಮರಗಳ ಹೆಸರನ್ನೂ ನಾವು ಕೇಳಿರಲಿಲ್ಲ. ಅಲ್ಲಲ್ಲಿ ಕಂಡ ಕಾಡುಪ್ರಾಣಿಗಳು ನಮ್ಮಲ್ಲಿ ಭಯ ಹುಟ್ಟಿಸಿದ್ದು ಸುಳ್ಳಲ್ಲ. ಆಕಳ ಗವಿ ತಲುಪುವಷ್ಟರಲ್ಲಿ ಎಲ್ಲರ ಶಕ್ತಿ ಕುಗ್ಗಿ ಹೋಗಿತ್ತು. ಸುಮಾರು 15 ಮೀಟರ್ ಎತ್ತರದ ಬಂಡೆಯ ಮಧ್ಯದಲ್ಲಿ ಆ ಗುಹೆಯಿತ್ತು. ಏರಿ ಹೋಗಲು ಮೆಟ್ಟಿಲುಗಳಿದ್ದವು.ನಂತರ ಸುಮಾರು ಒಂದೆರಡು ಮೀಟರ್ ಕಲ್ಲಿನೊಳಗೆ ನುಸುಳುತ್ತಾ ಸಾಗಬೇಕಾಗಿತ್ತು, ಅದೂ ಗಾಢ ಕತ್ತಲೆಯಲ್ಲಿ. ಒಳಹೊಕ್ಕಾಗ 'ಆಹಾ ಅಮೇಜಿಂಗ್...' ಉದ್ಘಾರ ಎಲ್ಲರಿಂದ. ಒಳಗಡೆ ಆಕಳಿನ ಕೆಚ್ಚಲಿನ ತರಹ ಇರುವ ಕಲ್ಲಿನಿಂದ ನೀರು ತೊಟ್ಟಿಕ್ಕುತ್ತಿತ್ತು. ಅದೂ ಭೂಮಟ್ಟದಿಂದ ಸುಮಾರು 10 ಮೀಟರ್ ಎತ್ತರದಲ್ಲಿ! ಪುನಃ ನುಸುಳುತ್ತಾ ಹೊರ ಬಂದಾಗ ಏನೋ ಸಾಧಿಸಿ ಬಂದ ಎಂಬ ಹೆಮ್ಮೆ. ಬರುವಾಗ ಮಧ್ಯದಲ್ಲಿ ಸಿಗುವ ಹೊಂಡದಲ್ಲಿ ಸ್ನಾನ ಮಾಡಿದೆವು. ಮೈ ಹಗುರಾಯಿತು. ನಾವು ಅಲ್ಲಿಗೆ ಹೋಗಿ ಬಂದು ತಿಂಗಳೆರಡೂ ಕಳೆದರೂ ಇನ್ನೂ ಉಳವಿಯದೇ ಗುಂಗು! ಬಸ್ ಕೊರತೆ ಇಲ್ಲ ದಾಂಡೇಲಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಚಿತ್ರದುರ್ಗಗಳಿಂದ ಉಳವಿಗೆ ನೇರ ಬಸ್ ಸಂಪರ್ಕವಿದೆ. ಕ್ಷೇತ್ರದಲ್ಲಿ ವಾಸ್ತವ್ಯ, ಪ್ರಸಾದ ವ್ಯವಸ್ಥೆ ಇದೆ. ಸಿಂಥೇರಿ ರಾಕ್, ಅಣಶಿ ಅರಣ್ಯ, ಸುಪಾ ಡ್ಯಾಂ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು. -ಬಸವರಾಜ ಮಾವಿನಕಟ್ಟಿ