ಬರ್ಕಣಕ್ಕೆ ಬಾ ಸುತ್ತಲೂ ಹಚ್ಚ ಹಸಿರು, ನಡುವೆ ಬಿಳಿ ನೊರೆ ಹಾಲಿನಂತೆ ಧುಮ್ಮಿಕ್ಕುವ ಜಲಪಾತ. ಇದು ನಮ್ಮ ರಾಜ್ಯದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯಲ್ಲಿನ ಬರ್ಕಣ ಜಲಪಾತ. ಇದು 850 ಅಡಿ ಎತ್ತರ ಇದೆ. ಅಂದರೆ ನಮ್ಮ ದೇಶದ 11ನೇ ಅತಿದೊಡ್ಡ ಜಲಪಾತ ಇದು. ಇದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಗಡಿಭಾಗದಲ್ಲಿರುವುದರಿಂದ ಬರ್ಕಣ ಜಲಪಾತ ಎರಡೂ ಜಿಲ್ಲೆಗೆ ಸೇರುತ್ತದೆ. ಶಿವಮೊಗ್ಗದಿಂದ ಹರಿದು ಬರುವ ಸೀತಾನದಿಗೆ ಆಗುಂಬೆಯ ತುದಿಯಿಂದ ಉಡುಪಿ ಜಿಲ್ಲೆಯ ತಗ್ಗಿಗೆ ನೀರು ಧುಮುಕುವಾಗ ಈ ಭವ್ಯ ಜಲಪಾತ ಸೃಷ್ಟಿಯಾಗುತ್ತದೆ. ಈ ಜಲಪಾತ ವಿಹಾರಾಸಕ್ತರ ಪಿಕ್ನಿಕ್ ಸ್ಥಳವೂ ಹೌದು. ಟ್ರಕ್ಕಿಂಗ್ ಆಸಕ್ತರಿಗೆ ಖುಷಿ ಕೊಡುವ ಸ್ಥಳವೂ ಹೌದು. ಆಗುಂಬೆ ಪೇಟೆಯಿಂದ 3 ಕಿ.ಮೀ. ಪಯಣಿಸಿದರೆ ಮಲಂದೂರು ಸಿಗುತ್ತದೆ. ಅಲ್ಲಿ ವಾಹನವನ್ನು ನಿಲ್ಲಿಸಿ ಮತ್ತೂ 3-4 ಕಿ.ಮೀ. ದೂರ ಟ್ರಕ್ಕಿಂಗ್ ಮಾಡಿದರೆ ಈ ಸುಂದರ ಹಾಲ್ನೊರೆಯಂಥ ಜಲಪಾತದ ದರ್ಶನ ಸಿಗುತ್ತದೆ. ಬೇಸಿಗೆಯಲ್ಲಿ ಸೀತಾನದಿಯಂತೆ ಸೊರಗುವ ಈ ಜಲಪಾತ ಮಳೆಗಾಲದಲ್ಲಿ ಮೈದುಂಬಿ, ನಳನಳಿಸುತ್ತದೆ. ಸುತ್ತ ದಟ್ಟವಾದ ಭಾರಿ ಗಾತ್ರದ ಮರಗಳು, ಬಿದಿರು ಮೆಳೆಗಳು, ಅದೃಷ್ಟವಿದ್ದವರಿಗೆ ಹಾವು, ಕಾಡುಹಂದಿ, ಬರ್ಕ ಇತ್ಯಾದಿ ಪ್ರಾಣಿಗಳು ಕಾಣಸಿಗಬಹುದು. ಮಳೆಗಾಲದಲ್ಲಿ ಇಲ್ಲಿಗೆ ಬರುವವರಿಗೆ ಗೊತ್ತೇ ಆಗದಂತೆ ಉಚಿತವಾಗಿ ರಕ್ತ ಹೀರುವ ಜಿಗಣೆಗಳ ಕಾಟವಂತೂ ಇದ್ದೇ ಇದೆ. ದಾರಿ ಮಧ್ಯೆ ಹತ್ತಾರು ಕಾಡುಹೂಗಳು ಕಾಣಸಿಗುತ್ತವೆ. ಕೈಯಲ್ಲೊಂದು ಕ್ಯಾಮೆರಾ ಇದ್ದರೆ ಇಲ್ಲಿಗೆ ಬಂದ ನೆನಪನ್ನು ಸದಾ ಜತೆಗಿಟ್ಟುಕೊಳ್ಳಬಹುದು. ಬೆಳಗ್ಗೆ ಬಂದವರು ಕತ್ತಲಾಗುವ ಮೊದಲೇ ವಾಪಸ್ ಆಗುಂಬೆಗೆ ಹೋಗಬೇಕು. ದಟ್ಟವಾದ ಕಾಡು ಒಂದೆಡೆಯಾದರೆ, ಇಲ್ಲಿ ರಾತ್ರಿ ಕಳೆಯಲು ಹತ್ತಿರದಲ್ಲೆಲ್ಲೂ ಹೋಟೆಲ್‌ಗಳಿಲ್ಲ. ಅಲ್ಲದೆ ಇದು ನಕ್ಸಲರು ಸಂಚರಿಸುವ ಪ್ರದೇಶ. ಹಾಗಾಗಿ ಇಲ್ಲಿಗೆ ಬರುವ ಮೊದಲೇ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದಿದ್ದರೆ ಸೇಫ್. ಅಂದಹಾಗೆ, ಈ ಜಲಪಾತಕ್ಕೆ ಬರ್ಕಣ ಎಂದು ಹೆಸರು ಬಂದಿರುವುದೇ 'ಬರ್ಕ' ಎನ್ನುವ ಪ್ರಾಣಿಯಿಂದ. ಇಲಿಯಂತೆ ಮೂತಿ ಹೊಂದಿರುವ ಜಿಂಕೆಯಂಥ ಸಾಧು ಪ್ರಾಣಿ ಈ ಪ್ರದೇಶದಲ್ಲಿ ವಾಸಿಸುತ್ತದೆ. - ಚಿತ್ರ, ಲೇಖನ: ಸುಭಾಶ್ಚಂದ್ರ ವಾಗ್ಳೆ