ಬೀಗದಿಂದ ಬೀಗಿದ ದ್ವೀಪ! ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲೊಂದು ಹೊನ್ನಾವರ. ನಯನ ಮನೋಹರ ಶರಾವತಿ ನದಿಯ ದಡದಲ್ಲಿದೆ... ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲೊಂದು ಹೊನ್ನಾವರ. ನಯನ ಮನೋಹರ ಶರಾವತಿ ನದಿಯ ದಡದಲ್ಲಿದೆ. ರಾ.ಹೆ.17ಕ್ಕೆ ಹೊಂದಿಕೊಂಡಿರುವ ಇದೇ ಊರಿನಲ್ಲಿ ಶರಾವತಿ ಸಮುದ್ರದ ಸಂಗಮವಾಗುವುದು. ಶರಾವತಿ ನದಿಗೆ ಹೊಂದಿಕೊಂಡಿರುವ ಒಂದು ಪುಟ್ಟ ದ್ವೀಪ ಮಾವಿನಕುರ್ವೆ. ಈ ದ್ವೀಪ ಚಿಕ್ಕದಾದರೂ 8-10 ಸಾವಿರ ಜನರು ವಾಸಿಸುತ್ತಾರೆ. ಕೃಷಿಯೇ ಮುಖ್ಯ ಉದ್ಯೋಗ. ಮಾವಿನಕುರ್ಲೆ ದ್ವೀಪದ ಹೆಸರು ಇತಿಹಾಸದ ಪುಟಗಳಲ್ಲಿ ಪ್ರಜ್ವಲಿಸಿದ್ದಿದ್ದು ಬೀಗದಿಂದ! ಮಾವಿನಕುರ್ವೆ ಬೀಗವೆಂದರೆ ನಂಬಿಕೆ, ರಕ್ಷೆ ಎಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಕೈಯಿಂದಲೇ ತಯಾರಿಸಿದ ಮಾವಿನಕುರ್ವೆ ಬೀಗ ಎಲ್ಲರಿಗೂ ಬೇಕಿತ್ತು. ಗಜಗಾತ್ರದ ಬೀಗದಿಂದ ಹಿಡಿದು ಚಿಕ್ಕಬೀಗದವರೆಗೆ ಎಲ್ಲರ ಮನೆಯಲ್ಲಿ ಈ ಬೀಗ ಬಿಟ್ಟು ಬೇರೆ ಯಾವ ಬೀಗವನ್ನೂ ಬಳಸುತ್ತಿರಲಿಲ್ಲ. ಇದರಿಂದ ಈ ಕುಟುಂಬದ ಜೀವನ ನಿರಾತಂಕವಾಗಿ ಸಾಗುತ್ತಿತ್ತು. ತನ್ನಮಡಗಿ ಎಂಬ ಪ್ರದೇಶದಲ್ಲಿ ವಾಸವಾಗಿರುವ ಕೊಂಕಣ ಆಚಾರಿ ಕುಟುಂಬಸ್ಥರು ಈ ಬೀಗವನ್ನು ಗ್ರಾಹಕರ ಬೇಡಿಕೆ ಮೇರೆಗೆ ಒದಗಿಸುತ್ತಿದ್ದರು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಮಾವಿನಕುರ್ಲೆ ಬೀಗ ಉಳಿದ ಬೀಗಗಳೆದುರು ಬಾಯಿಗೆ ಬೀಗ ಬಿಗಿದುಕೊಂಡು ಕುಳಿತುಬಿಟ್ಟಿದೆ. ಇದನ್ನೇ ನಂಬಿಕೊಂಡಿದ್ದ ಕುಟುಂಬ ಈಗ ಬೇರೆ ಬೇರೆ ಉದ್ಯೋಗಗಳತ್ತ ಗಮನ ಹರಿಸಲಾರಂಭಿಸಿದೆ. ಆದರೆ, ಇಂದಿಗೂ ಹೊನ್ನಾವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾವಿನಕುರ್ವೆ ಬೀಗ ಬಲುನಂಬಿಕೆಯ ವಸ್ತುವಾಗಿ ಬಾಗಿಲನ್ನು ಕಚ್ಚಿಕೊಂಡಿರುತ್ತದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಈಜಿಪ್ತರು ಕೈಯಿಂದ ಬೀಗ ತಯಾರಿಸುವ ಮಾಹಿತಿ ಒದಗಿಸಿದ್ದರು. ಇನ್ನು ಇಂಥ ಕೈಯಿಂದ ತಯಾರಿಸಿದ ಕೀಬಾಯಿಗಳು ಇತಿಹಾಸದ ಪುಟ ಸೇರಲಿವೆಯೇನೋ! -ಬಳಕೂರು ಎಂ.ಎಸ್.ನಾಯಕ್