ನರಹರಿ ಪರ್ವತ ಶ್ರೀನರಹರಿ ಪರ್ವತದ ಸದಾಶಿವ ದೇವಸ್ಥಾನಕ್ಕೆ ಪುರಾತನ ಇತಿಹಾಸವಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಿಂದ 28 ಕಿ.ಮೀ. ದೂರದಲ್ಲಿರುವ ಇದನ್ನು ಕಾರ್ಣಿಕದ ಕ್ಷೇತ್ರ ಎಂದರೆ ತಪ್ಪಾಗದು. ಸಮುದ್ರಮಟ್ಟದಿಂದ 1000 ಅಡಿ ಎತ್ತರದಲ್ಲಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿರುವ ಈ ತಾಣ ರಮ್ಯತೆಯಿಂದ ಕೂಡಿದೆ. ಇಲ್ಲಿ ಕೋಟಿ ಚೆನ್ನಯ್ಯರ ಕಾಲದ ಸುಳ್ಯಬಾಲೆ, ಬಳ್ಯಬಾಲೆ ಕಾಣಬಹುದು. ಈಶಾನ್ಯದಲ್ಲಿ ಕಾರಿಂಜೇಶ್ವರ ದೇವಸ್ಥಾನ, ಉತ್ತರದಲ್ಲಿ ಕೂಡಂಜಯ ಕಲ್ಲು, ಪೂರ್ವಕ್ಕೆ ಕಲ್ಲಾಡಿ ಮನೆ ಮತ್ತು ಪಶ್ಚಿಮಕ್ಕೆ ಕಳಿಂಜ ಮಲೆ ಇರುವುದು ಈ ಕ್ಷೇತ್ರವನ್ನು ಪಾವನವಾಗಿಸಿದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ಪಾಪ ವಿಮೋಚನೆಗಾಗಿ ಈ ಬೆಟ್ಟಕ್ಕೆ ಬಂದು ಇಲ್ಲಿ ಶಸ್ತ್ರಾಸ್ತ್ರಗಳಾದ ಶಂಖ, ಚಕ್ರ, ಗದೆಯನ್ನಿರಿಸಿದ್ದರಂತೆ. ಅದರ ಕುರುಹಾಗಿ ಶಂಖತೀರ್ಥ, ಚಕ್ರತೀರ್ಥ, ಗದಾತೀರ್ಥ, ಪದ್ಮಾಕರ ತೀರ್ಥಗಳು ಸೃಷ್ಟಿಯಾಗಿವೆ ಎಂಬ ನಂಬಿಕೆ ಇದೆ. ನರಹರಿಯರು ಇಲ್ಲಿ ತಂಗಿ, ಭಕ್ತಿಯಿಂದ ಶಿವನನ್ನು ಸ್ಮರಿಸಿ ಪೂಜಿಸಿದ್ದರಿಂದ ಈ ಬೆಟ್ಟಕ್ಕೆ ನರಹರಿಬೆಟ್ಟ ಎಂಬ ಹೆಸರು ಬಂತು ಎನ್ನುತ್ತಾರೆ ಭಕ್ತರು. ಈ ಬೆಟ್ಟಕ್ಕಿರುವ 333 ಮೆಟ್ಟಿಲುಗಳನ್ನೇರಿ ದೇಗುಲಕ್ಕೆ ಬರಬೇಕು. ಮೆಟ್ಟಿಲುಗಳನ್ನೇರುವಾಗ ಸುತ್ತಲ ನಿಸರ್ಗ ಸಿರಿ ಮನಕಾನಂದ ನೀಡುವಂಥದ್ದು. ಶಿವ, ಗಣಪತಿ, ನಾಗದೇವರ ವಿಗ್ರಹಗಳು ಇಲ್ಲಿ ಪೂಜಿಸಲಾಗುತ್ತದೆ. ದೇಶದ ಬೇರೆಲ್ಲೂ ಕಾಣದ ವೈಶಿಷ್ಟ್ಯಪೂರ್ಣವಾದ ಹರಕೆ ಪೆರ್ಡೂರು ಅಂತೇಶ್ವರದಲ್ಲಿ ಕದಳಿ, ಸೂರ್ಯ ಸದಾಶಿವ ದೇಗುಲದಲ್ಲಿ ಮಣ್ಣಿನ ವಸ್ತುಗಳು ಕಾಣಬರುತ್ತವೆ. ಉಡುಪಿಯ ಅನಂತೇಶ್ವರ ದೇಗುಲದಲ್ಲಿ ಎಣ್ಣೆದೀಪ ಹಚ್ಚಿ ಸ್ಮರಿಸುತ್ತಾರೆ. ಆದರೆ, ಇಲ್ಲಿ ಅಚ್ಚರಿ ಎಂದರೆ, ಹಗ್ಗವನ್ನು ಸಮರ್ಪಿಸುತ್ತಾರೆ! ಬಾವಿ ನೀರು ಸೇದುವಂಥ ತೆಂಗು ನಾರಿನಿಂದ ಮಾಡಿದ 'ಹುರಿ ಹಗ್ಗ'ವನ್ನು ಮಾತ್ರ ಇಲ್ಲಿ ಸಮರ್ಪಿಸಲಾಗುತ್ತದೆ. ಆರೋಗ್ಯ, ಕಚೇರಿ ಕೆಲಸಗಳು ಇಷ್ಟಾರ್ಥದಂತೆ ನೆರವೇರಲೆಂದು ಪ್ರಾರ್ಥಿಸಿ, ಹರಕೆ ರೂಪದಲ್ಲಿ ಈ ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರದ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 9141763393. ಚಿತ್ರ-ಲೇಖನ: ವಿ.ಬಾಲಕೃಷ್ಣ ಶಿರ್ವ .@.