ಗಗನ ಗಾನ ಮಳವಳ್ಳಿ- ಕೊಳ್ಳೇಗಾಲ ಮಲ್ಲಿಕ್ಯಾತನಹಳ್ಳಿ ಬಳಿ ಕಾವೇರಿ ನದಿಯ ಭೋರ್ಗರೆತವನ್ನು ಕಿವಿದುಂಬಿಕೊಳ್ಳುವುದೇ ಒಂದು ಸೊಗಸು. 300 ಅಡಿ ಆಳದ ಕಣಿವೆಯಲ್ಲಿ ಧುಮುಕುತ್ತಾ ಹರಿದು ಸೃಷ್ಟಿಯಾಗಿರುವ ಜಲಪಾತವೇ ಗಗನಚುಕ್ಕಿ. ಶಿವನಸಮುದ್ರ ಎಂದೂ ಈ ಪ್ರದೇಶ ಹೆಸರುವಾಸಿ. ಯಡ್ವರ್ಸ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಉರುಳು ಅಣೆಕಟ್ಟೆ ನಿರ್ಮಿಸಲಾಗಿದೆ. ಪ್ಲೋರ್‌ಬೇ ಮುಖಾಂತರ ಎಸ್‌ಬಿಆರ್ ಕೆರೆಯಲ್ಲಿ ಸಂಗ್ರಹಿಸಿದ ನೀರನ್ನು ಕಾಲುವೆಗಳ ಮೂಲಕ ಹರಿಸಿದ ಏಷ್ಯಾ ಖಂಡದ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಇಲ್ಲಿದೆ. 1902ರಲ್ಲಿ ಸ್ಥಾಪನೆಯಾದ ಈ ಕೇಂದ್ರವು ಕೋಲಾರ ಚಿನ್ನದ ಗಣಿ ಕಾರ್ಯಗಳಿಗೆ ವಿದ್ಯುತ್ ಬಳಸಿದ ಹೆಗ್ಗಳಿಕೆ. ಅಂದಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಹೆಸರನ್ನೇ ಈ ವಿದ್ಯುತ್ ತಯಾರಿಕಾ ಕೇಂದ್ರಕ್ಕೆ ಇಡಲಾಗಿದೆ. ಹೊಯ್ಸಳರು, ಗಂಗರ ಕಾಲದಲ್ಲಿ ವೈಭವದಿಂದ ಮೆರೆದಿದ್ದ ಶಿವನಸಮುದ್ರ ತಾಣವನ್ನು ಪುರಾಣಗಳಲ್ಲಿ ದಂಡಕಾರಣ್ಯ ಎಂದು ಉಲ್ಲೇಖಿಸಲಾಗಿದೆ. ಸಪ್ತಋಷಿ ಕ್ಷೇತ್ರವಾದ ಈ ಭಾಗದಲ್ಲಿ ಹೊಯ್ಸಳರ ಕಾಲದ ರಂಗನಾಥ, ಸೋಮನಾಥ ದೇಗುಲದಲ್ಲಿ ಅಷ್ಟಚಕ್ರದಲ್ಲಿ ಒಂದಾದ ಶ್ರೀಚಕ್ರವು ಇಲ್ಲಿ ಸ್ಥಾಪಿತವಾಗಿದೆ. ದೇಶಾದ್ಯಂತ ಭಕ್ತರು ಇಲ್ಲಿಗೆ ಬಂದು ಶ್ರೀಚಕ್ರಕ್ಕೆ ಹರಕೆ ತೀರಿಸುತ್ತಾರೆ. ಜಲಪಾತಕ್ಕೆ ಭೇಟಿ ನೀಡುವವರು ವೀರಭದ್ರೇಶ್ವರ ದೇಗುಲ, ಬಿಸಿಲು ಮಾರಮ್ಮ, ಆದಿಶಕ್ತಿ, ಈಶ್ವರ, ಗಣೇಶ ದೇಗುಲಗಳಿತೂ ಭೇಟಿ ನೀಡಬಹುದು. ಗಂಗರಾಜನ ಮಡುವಿಗೆ ಬೀಳುವ ಗಗನಚುಕ್ಕಿ ಅಬ್ಬರ ಬಂಡೆಗಳ ಮೇಲೆ ಕುಳಿತು ನೋಡುವುದೇ ಚೆಂದ. - ಚಿತ್ರ-ಲೇಖನ: ಎಂ.ಡಿ. ಉಮೇಶ್