ಮಳೆಮದುವೆ ಕೈಕೊಟ್ಟ ಮಳೆ.. ರೈತರ ಗೋಳು ಹೇಳತೀರದ್ದು.. ಬೇಸಿಗೆಯಲ್ಲಿ ಸುರಿಯಬೇಕಿದ್ದ ದೊಡ್ಡ ಮಳೆಯೂ ಬರಲಿಲ್ಲ..... ಕೈಕೊಟ್ಟ ಮಳೆ.. ರೈತರ ಗೋಳು ಹೇಳತೀರದ್ದು.. ಬೇಸಿಗೆಯಲ್ಲಿ ಸುರಿಯಬೇಕಿದ್ದ ದೊಡ್ಡ ಮಳೆಯೂ ಬರಲಿಲ್ಲ. ಬಿತ್ತನೆಗಾಗಿ ಹೊಲಗದ್ದೆಗಳನ್ನೆಲ್ಲ ಹದ ಮಾಡಿಕೊಂಡು ಮುಗಿಲನ್ನೇ ನೋಡುತ್ತ ಕುಳಿತ ರೈತರು ಕಂಗೆಟ್ಟು, ಇದೀಗ ಮಳೆರಾಯನ ಕೃಪೆಗಾಗಿ ಹೋಮ ಹವನ, ಕತ್ತೆ ಮದುವೆ, ಕಪ್ಪೆ ಮದುವೆ ಮುಂತಾದ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ದೃಶ್ಯಗಳು ಬೆಳಗಾವಿ ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ... ಇದು ಕತ್ತೆಗಳ ಶಾದಿ ಭಾಗ್ಯ! ಹೊತ್ತು ಬಂದಾಗ ಕತ್ತೆ ಕಾಲು ಹಿಡಿ ಅನ್ನೋ ಮಾತಿದೆ. ಆದ್ರೆ ಇಲ್ಲಿ ಕತ್ತೆಗಳ ಕಾಲು ಹಿಡಿಯೋದಷ್ಟೇ ಅಲ್ಲ, ನವ ವಧು-ವರರಂತೆ ಕತ್ತೆಗಳನ್ನು ಶೃಂಗರಿಸಿ ಶಾಸ್ತ್ರೋಕ್ತವಾಗಿ ಮದುವೆಯನ್ನೂ ಮಾಡಲಾಯಿತು! ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಇಡಿ ಊರಿಗೆ ಊರೇ ಮದುವೆ ಕಾರ್ಯದಲ್ಲಿ ಭಾಗವಹಿಸಿ ಅಕ್ಷತೆ ಹಾಕಿ ಕತ್ತೆಗಳನ್ನು ಆಶೀರ್ವದಿಸಿದ್ರು. ಸಾವಿರಾರು ರು. ಖರ್ಚು ಮಾಡಿ ಗಾರ್ದಭ ಕಲ್ಯಾಣ ಪೂರೈಸಿ, ನಮ್ಮೂರಿಗೆ ಮಳೆಯನ್ನು ಕರುಣಿಸಪ್ಪಾ ಅಂತಾ ಗ್ರಾಮಸ್ಥರು ವರುಣನಲ್ಲಿ ಪ್ರಾರ್ಥಿಸಿಕೊಂಡ್ರು. ಕತ್ತೆಗಳ ಮದುವೆ ಮಾಡಿದ್ರೆ ಮಳೆಯಾಗುತ್ತೇ ಅನ್ನೋ ನಂಬಿಕೆ ಉತ್ತರ ಕರ್ನಾಟಕದ ಜನತೆಯಲ್ಲಿದೆ. ಹಿಂದೊಮ್ಮೆ ಶಿವನ ಪತ್ನಿಯರಾದ ಪಾರ್ವತಿ-ಗಂಗೆಯರಲ್ಲಿ ನಾ ಹೆಚ್ಚು, ನಾ ಹೆಚ್ಚು ಎಂಬ ಕಚ್ಚಾಟ ಶುರುವಾಯ್ತಂತೆ. ಯಾರು ಹೆಚ್ಚು ನೋಡೋಣ. ಪರಸ್ಪರ ಒಬ್ಬರ ಸಹಾಯ ಮತ್ತೊಬ್ಬರು ಪಡೆದುಕೊಳ್ಳದೆ ಎಂಟು ದಿನ ಇರಿ ನೋಡೋಣ ಎಂದು ಶಿವ ಹೇಳಿದ್ನಂತೆ. ಎಂಟು ದಿನ ನೀರಿಲ್ಲದೆ ಕಳೆದ ಪಾರ್ವತಿಗೆ ಸಾಕು-ಬೇಕಾಯ್ತಂತೆ. ಬಾಯಾರಿಕೆಯಿಂದ ಬಳಲಿದ ಪಾರ್ವತಿ ತನ್ನ ತಾಪತ್ರಯವನ್ನು ಪತಿ ಶಿವನ ಮುಂದೆ ಹೇಳಿಕೊಂಡಾಗ ಶಿವ, ಗಂಗೆ ಎಲ್ಲಿರುವೆ ಎಂದು ಕೂಗಿದ. ಆಗ ಗಂಗೆ ಎಂಟು ದಿನಗಳ ಕಾಲ ಅಡಗಿ ಕುಳಿತ ಜಾಗವನ್ನು ಕತ್ತೆ ತೋರಿಸ್ತಂತೆ. ಹೀಗಾಗಿ ಕತ್ತೆಗಳ ಮದುವೆ ಮಾಡಿದ್ರೆ ಗಂಗಾ ಮಾತೆ ಒಲಿಯುತ್ತಾಳೆ. ಗಂಗೆ ಎಲ್ಲಿದ್ದಾಳೆ ಎಂಬುವುದನ್ನು ಕತ್ತೆ ತಿಳಿಸುತ್ತೆ. ಇದರಿಂದ ಮಳೆ ಬರುತ್ತೆ ಅನ್ನೋ ನಂಬಿಕೆ ಕತ್ತೆಗಳ ಮದುವೆಗೆ ಕಾರಣ ಅಂತಾರೆ ಶೋಭಾ ಹಿರೇಮಠ. ಉಪ್ಪಿನ ಹೋಮ ಮಳೆಗಾಲ ಪ್ರಾರಂಭವಾದ್ರೂ ತಮ್ಮ ಜಮೀನಿಗೆ ನೀರು ಹರಿಯದ್ದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮದ ರೈತರು, ಟನ್‌ಗಟ್ಟಲೇ ಉಪ್ಪು ಮತ್ತು ಕಟ್ಟಿಗೆಯನ್ನು ಸುಟ್ಟು ಹೋಮ ಮಾಡುತ್ತಿದ್ದಾರೆ. ಉಪ್ಪು ಸುಟ್ಟರೆ ಇದು ಆವಿಯಾಗಿ ಕಾರ್ಮೋಡ ಸೇರಿಕೊಂಡು ಮಳೆ ಸುರಿಯುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಕಪ್ಪೆ ಮದುವೆ ಚಿಕ್ಕೋಡಿ ಪಟ್ಟಣದ ಅಲ್ಲಮಪ್ರಭು ಅನ್ನದಾನ ಸಮಿತಿಯವರು ಮೊನ್ನೆ ಮೊನ್ನೆ ಇಲ್ಲಿನ ಬಸ್ ನಿಲ್ದಾಣದ ಹತ್ತಿರ ಕಪ್ಪೆಗಳ ಮದುವೆಯನ್ನು ಸಂಪ್ರದಾಯದವಾಗಿ, ಅತಿ ವಿಜೃಂಭಣೆಯಿಂದ ಮಾಡಿದರು! ಕಪ್ಪೆಗಳಿಗೆ ಅರಿಶಿನ ಹಚ್ಚಿ, ಹೊಸ ಉಡುಪು ಹಾಕಿ ಹೂಗಳಿಂದ ಶೃಂಗರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ಜೈನ ಧರ್ಮ ಗುರುಗಳಾದ ಉದಯಕುಮಾರ ಉಪಾಧ್ಯೆ ಮಂತ್ರ ಹೇಳಿದರು. ಜನರೆಲ್ಲ ಭಕ್ತಿ-ಭಾವದಿಂದ ಕಪ್ಪೆಗಳಿಗೆ ಅಕ್ಷತೆ ಹಾಕಿದರು. ಕಪ್ಪೆಗಳ ಮದುವೆ ಮಾಡುವ ಮೂಲಕ ಮಳೆರಾಯನನ್ನು ಕರೆ ತರುವುದು ಸಾವಿರಾರು ವರ್ಷಗಳಿಂದ ಬಂದಿರುವ ಸಂಪ್ರದಾಯವಾಗಿದೆ. ನಾವೂ ಮಳೆರಾಯನ ಬರುವಿಕೆಗಾಗಿ ಈ ಹೊತ್ತು ಕಪ್ಪೆಗಳ ಮದುವೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದೇವೆ ಎನ್ನುತ್ತಾರೆ ಚಂದ್ರಕಾಂತ ಹುಕ್ಕೇರಿ. ಕೊನೆಗೂ ಜನರ ನಂಬಿಕೆಗಳ್ಯಾವುವೂ ಮಳೆ ತರುತ್ತಿಲ್ಲ. ಭಕ್ತವೃಂದಕ್ಕೆ ದಿಕ್ಕು ತೋಚುತ್ತಿಲ್ಲ. ವರುಣನ ಮುನಿಸಿನಶಮನ ಮಂತ್ರದ ಹುಡುಕಾಟ ನಡೆದೇ ಇದೆ... - ಮಲ್ಲಿಕಾರ್ಜುನ ದಾನನ್ನವರ, ಚಿಕ್ಕೋಡಿ