ತ್ಯಾಜ್ಯಾಕೃತಿ ಹಳೆ ಕಬ್ಣ... ಹಳೆ ಪೇಪರ್... ತರ ಹೋಯಿ.. ಎಂದು ಹೇಳುವ ಹಾಗಿಲ್ಲ. ಕಬ್ಬಿಣ ಹಳೆಯದಾಗಿದ್ದರೂ ಅದರಿಂದ ಮೂಡಿರುವ ಕಲಾಕೃತಿಗಳು ನವನವೀನ. ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಗುಜರಿ ವಸ್ತುಗಳಿಂದಲೇ ಮಾಡಿದ ಕಲಾಕೃತಿಗಳು ಮೋಡಿ ಮಾಡಿದ್ದವು. ಆಕರ್ಷಕ ಕಾಲಾಕೃತಿ ನಿಮಾತೃ ಇಲಿಯಾಸ್ ಅಹಮದ್. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇಲಿಯಾಸ್ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ಕಲಾಭೋದನೆ ಮಾಡುತ್ತಿದ್ದಾರೆ. 1989ರಲ್ಲಿ ಕಲಾಕೃತಿ ನಿರ್ಮಾಣಕ್ಕೆ ಅಡಿಯಿಟ್ಟರು. ಬೆಂಗಳೂರಿನ ಎರೋನಾಟಿಕ್ಸ್ ಲಿಮಿಟೆಡ್‌ನ ಎನ್‌ಸಿಟಿವಿಡಿಯಲ್ಲಿ ಏವಿಯೇಷನ್ ವೆಲ್ಡಿಂಗ್ ಕುರಿತು ವ್ಯಾಸಂಗ ಮಾಡಿದ್ದಾರೆ. ಆಯಿಲ್ ಫೀಲ್ಡ್ ವೆಲ್ಡರ್ ಹಾಗೂ ಎಡಬ್ಲೂಎಸ್ ವೆಲ್ಡಿಂಗ್ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ದು ಇವರ ಕಲಾಪೋಷಣೆಗೆ ಪ್ಲಸ್ ಪಾಯಿಂಟ್. ಹಾಲೆಂಡ್‌ನ ಮರ್ಸೆಕ್ ತೈಲ ಸಂಸ್ಥೆಯಲ್ಲಿ ವೆಲ್ಡರ್ ಆಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಹಡಗಿನಲ್ಲೇ ಕೆಲಸ ಮಾಡುತ್ತಿದ್ದರಿಂದ ಸಾಕಷ್ಟು ಕಬ್ಬಿಣದ ತ್ಯಾಜ್ಯಗಳು ಸಿಗುತ್ತಿದ್ದವು. ಅಪಾರ ಪ್ರಮಾಣದ ನಿರುಪಯುಕ್ತ ಎನಿಸಿಕೊಂಡ ವಸ್ತುಗಳನ್ನು ಆಯ್ದು ಜೀವ ನೀಡುವ ಕೈಂಕರ್ಯಕ್ಕೆ ಮುಂದಾದರು. ಬಿಡುವು ಸಿಕ್ಕಾಗೆಲ್ಲಾ ನಟ್ಟು ಬೋಲ್ಟುಗಳನ್ನು ಸೇರಿಸಿ ಆಕೃತಿ ಮಾಡುವ ಹವ್ಯಾಸ ರೂಢಿಸಿಕೊಂಡರು. ಪುಟ್ಟ ಪುಟ್ಟ ಕಲಾಕೃತಿಗಳಿಂದ ಪ್ರಾರಂಭಗೊಂಡು 150 ಕೆ.ಜಿ ತೂಗುವ ಬೃಹತ್ ಕಲಾಕೃತಿ ನಿರ್ಮಾಣಕ್ಕೂ ಮುಂದಾದರು. ಅರ್ಧ ಅಡಿ ಎತ್ತರದಿಂದ ಮೊದಲ್ಗೊಂಡು 10 ಅಡಿ ಎತ್ತರದ ನೂರಾರು 'ತ್ಯಾಜ್ಯಾಕೃತಿ'ಗಳು ಜೀವತಳೆದಿವೆ. ದೇಶ ವಿದೇಶಗಳಲ್ಲಿ ಇಲಿಯಾಸ್ ಕೈಚಳಕಕ್ಕೆ ಬೆರಗಾಗಿ ಇವನ್ನು ಖರೀದಿಸಿವರಿದ್ದಾರೆ. ಮೈಸೂರಿನ ಗಾಲ್ಫ್ ಈಡನ್‌ನಲ್ಲಿ ನಿಂತಿರುವ ಅಮೆರಿಕ ಮೂಲ ನಿವಾಸಿಯ ಆಕೃತಿ ಇಲಿಯಾಸ್‌ರ ಚಮತ್ಕಾರಕ್ಕೆ ಬೆನ್ನುಡಿ. ಐದಕ್ಕೂ ಹೆಚ್ಚು ಏಕವ್ಯಕ್ತಿ ಕಲಾಕೃತಿ ಪ್ರದರ್ಶನ ನೀಡಿದ್ದಾರೆ. ಹಲವು ಸಮೂಹ ಪ್ರದರ್ಶನದಲ್ಲೂ ಇಲಿಯಾಸ್ ಕಲಾಕೃತಿಗಳು ಪ್ರದರ್ಶಿತಗೊಂಡಿವೆ. ಮುಂಬೈನ 'ದಿ ಮ್ಯೂಸಿಯಮ್ ಆರ್ಟ್ ಗ್ಯಾಲರಿ, ಕಲಾ ಗೋಡ, ಬಂದ್ರಾ-ಕುರ್ಲಾ ಎಗ್ಸಿಬಿಷನ್, ಅರ್ಬನ್ ಹಾತ್ ಫೆಸ್ಟ್ ಸೇರಿದಂತೆ ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಂಡಿವೆ. = ಮಂಜು