ನಾರಾಯಣದುರ್ಗ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ನಾರಾಯಣದುರ್ಗ ಚಾರಣ ರೋಮಾಂಚಕಾರಿ ಅಷ್ಟೇ ಅಲ್ಲ, ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ ಕೂಡ. ಕೆ.ಆರ್.ಪೇಟೆ- ಮೇಲುಕೋಟೆ ರಸ್ತೆಯಲ್ಲಿ 5 ಕಿ.ಮೀ. ಸಾಗಿದರೆ ಉಯ್ಯೋನಹಳ್ಳಿ, ಹರಳಹಳ್ಳಿಗಳನ್ನು ದಾಟಿದರೆ ನೀತಿಮಂಗಲ ಜಂಕ್ಷನ್ ಬಳಿ ಎಡಕ್ಕೆ ತಿರುಗಿದರೆ ನಾರಾಯಣದುರ್ಗ ಬೆಟ್ಟವಿರುವ ರಾಯನಸಮುದ್ರ ಊರು ತಲುಪಬಹುದು. ಎರಡು ಬೆಟ್ಟಗಳ ಕಚ್ಚಾರಸ್ತೆಯ ಮಧ್ಯೆ ಸಾಗುವುದು ರೋಮಾಂಚನ ತರಿಸುತ್ತದೆ. ಸುಣ್ಣಗಾರೆಯಿಂದ ನಿರ್ಮಿಸಿದ ಇಲ್ಲಿನ ದ್ವಾರ ಚಾರಣಿಗರನ್ನು ಸ್ವಾಗತಿಸುತ್ತದೆ. ಕಡಿದಾದ ಕಲ್ಲಿನ ಮೆಟ್ಟಿಲುಗಳಿದ್ದು ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದಿಟ್ಟು ಮುಂದೆ ಸಾಗಬೇಕು. ಈ ಬಂಡೆಗಳ ಬೆಟ್ಟದ ಮೇಲೆ ಯೋಗಾನರಸಿಂಹಸ್ವಾವು, ಕೈವಲ್ಯೇಶ್ವರ ದೇಗುಲವಿದ್ದು, ಚಾರಣದ ದಣಿವಾರಿಸಿಕೊಳ್ಳಲು ಪೂರಕವಾಗಿದೆ. ಸುತ್ತ ಎರಡು ಸುತ್ತಿನ ಕಲ್ಲಿನ ಗೋಡೆಯಿಂದ ನಿರ್ಮಿಸಲಾಗಿರುವ ಈ ದೇಗುಲದೊಳಗೆ ಹಲವು ದೇವರ ಮೂರ್ತಿಗಳು, ಕಲ್ಲಿನ ಮಂಟಪಗಳಿವೆ. ಕಲ್ಲುಕಂಬದ ಮೇಲಿನ ನಂದಿಯ ವಿಗ್ರಹ ಅತ್ಯಾಕರ್ಷಕವಾಗಿದ್ದು, ಬೆಟ್ಟದ ಮೇಲಿನಿಂದ ವಿಶಾಲ ನೋಟ ಬೀರಿದರೆ ಸುತ್ತಲ ಜನಜೀವನ ಕಣ್ಮುಂದೆ ಬಂದು ನಿಲ್ಲುತ್ತದೆ. ಸಾಮಾನ್ಯವಾಗಿ ಲಿಂಗದ ಎದುರು ಬಸವನ ಮೂರ್ತಿ ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ, ಇಲ್ಲಿನ ನಂದಿ ವಿಗ್ರಹವನ್ನು ಬೆಟ್ಟದ ಮೇಲೆ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿರುವುದು ವಿಶೇಷ. ದೇವಾಲಯ ಎಲ್ಲಾ ಸಮಯದಲ್ಲೂ ನೋಡಬಹುದು. ಇಲ್ಲಿಂದ ಮೇಲುಕೋಟೆದ ಅದ್ಭುತ ದೃಶ್ಯಗಳು ಕಾಣಬಹುದು. ಮುಂಜಾನೆ, ಸಂಜೆ ವೇಳೆ ಬೀಸುವ ಸ್ವಚ್ಛಂದ ತಂಗಾಳಿ ಇಲ್ಲಿಂದ ತೆರಳಲು ಮನಸ್ಸಾಗದಂತೆ ಹಿಡಿದಿಡುವಂತಿದೆ. ಅದರಲ್ಲೂ, ಚಳಿಗಾಲ, ಮಳೆಗಾಲದಲ್ಲಿ ಇಲ್ಲಿನ ಪರಿಸರ ರಮಣೀಯ. ನಾರಾಯಣದುರ್ಗ ಚಾರಣಕ್ಕೆ ನೀವೂ ಟ್ರೈ ಮಾಡಿನೋಡಿ. < -ಚಿತ್ರ-ಲೇಖನ: ಡಾ.ರಾ.ಲ.ಜಗದೀಶ್ @.