ಬದುಕು ಬೆಸೆವ ಬುತ್ತಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮ ವನಭೋಜನಕ್ಕೆ ಹೆಸರಾಗಿದೆ. ಶ್ರೀಶರಣಬಸವೇಶ್ವರ ಜಾತ್ರೆ ಪ್ರಯುಕ್ತ ಪ್ರತಿ... ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮ ವನಭೋಜನಕ್ಕೆ ಹೆಸರಾಗಿದೆ. ಶ್ರೀಶರಣಬಸವೇಶ್ವರ ಜಾತ್ರೆ ಪ್ರಯುಕ್ತ ಪ್ರತಿ ವರ್ಷ ಇಲ್ಲಿ ವನಭೋಜನವನ್ನು ಅದ್ಧೂರಿಯಾಗಿ ಮಾಡುತ್ತಾರೆ. ಆರು ನೂರಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದ ಈ ಗ್ರಾಮದಲ್ಲಿ ವರ್ಷ ವರ್ಷವೂ ವಿಭಿನ್ನ ರೀತಿಯಲ್ಲಿ ಯುವಕರು ವನ ಭೋಜನ ಕಾರ್ಯ ಮಾಡುವುದು ವಿಶೇಷ. ಗ್ರಾಮದವರು ಮತ್ತು ಪಕ್ಕದ ಹಳ್ಳಿಯ ಜನರು ಸೇರಿಕೊಂಡು ಬುತ್ತಿ ತೆಗೆದುಕೊಂಡು ಇಡಿ ಊರು ಸುತ್ತುತ್ತಾರೆ. ಏನಿದು ವನ ಭೋಜನ? ಇದು ಸಾಂಪ್ರದಾಯಿಕವಾಗಿ ಹಿರಿಯರು ನಡೆಸಿಕೊಂಡು ಬಂದಿರುವ ವ್ಯವಸ್ಥೆ. ಇಲ್ಲಿನ ಜನತೆ ಮೇಲು ಕೀಳೆನ್ನದೆ, ಸಡಗರ ಸಂಭ್ರಮದಲ್ಲಿ ಎಲ್ಲರೊಂದಿಗೆ ಬೆರೆತು, ತಂದಿರುವ ಭೋಜನವನ್ನು ಸಂತಸದಿಂದ ಒಬ್ಬರಿಗೊಬ್ಬರು ಹಂಚಿಕೊಂಡು ಅವರ ಬುತ್ತಿ ಇವರು, ಇವರ ಬುತ್ತಿ ಅವರು ಸವಿಯುತ್ತಾರೆ. ಪಕ್ಕದ ಗ್ರಾಮದ ಊರಿನವರು ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ. ದಿನಸಗೇರಿ ಆಹಾರಂಟು ಉತ್ತರ ಕರ್ನಾಟಕಕ್ಕೆ ಹೆಸರಾಗಿರುವ ಕಟಕ್ ಬಿಳಿಜೋಳದ ರೊಟ್ಟಿ, ಸಜ್ಜೆ, ಜೋಳದ ರೊಟ್ಟಿಗಳು ಇಲ್ಲುಂಟು. ನಾನಾ ಬಗೆಯ ಆಹಾರ ಧಾನ್ಯದ ಪಲ್ಲೆಗಳಾದ ಪುಂಡೆಪಲ್ಲೆ, ಚವಳಿಕಾಯಿ, ತುಪ್ಪರಿಕಾಯಿ, ಅವರೆಕಾಯಿ, ಬದನೆಕಾಯಿ ,ಕೋಸು, ಈರುಳ್ಳಿ ಪಲ್ಯ ಮತ್ತು ಚಟ್ನಿ, ಇನ್ನಿತರ ಪದಾರ್ಥ ಆಹಾರ ಇಲ್ಲಿರುತ್ತದೆ. ಇಡಿ ಗ್ರಾಮ ಒಂದೆಡೆ ಸೇರುವುದರಿಂದ ವರ್ಷದಲ್ಲಿ ನಡೆದ ವೈಮನಸ್ಯಗಳು ಮರೆತು ಸಾಮರಸ್ಯ ಹೆಚ್ಚುತ್ತದೆ. ವನಭೋಜನ ಮನಸುಗಳನ್ನು ಬೆಸೆವ ಕಾರ್ಯಕ್ರಮ ಎನ್ನುತ್ತಾರೆ ಗ್ರಾಮಸ್ಥರು. -ಚಿತ್ರ- ಬರಹ -ದೇವರಾಜ ಮ್ಯಾದ್ನೇರಿ