ಕಡಲಾಮೆಗಳ ಕಿನ್ನರಲೋಕ ಪ್ರಕೃತಿಯಲ್ಲಿ ನಮ್ಮಂತೆಯೇ ಗಿಡ, ಮರ, ಬಳ್ಳಿ ಹಲವಾರು ಪ್ರಾಣಿಗಳು, ಜಲಚರಗಳು ವಾಸಿಸುತ್ತವೆ. ನಮ್ಮಂತೆಯೇ ಪ್ರಾಣಿಗಳಿಗೂ ಜೀವಿಸಬೇಕೆಂಬ ಆಸೆ. ಪ್ರಕೃತಿಯಲ್ಲಿ ನಮ್ಮಂತೆಯೇ ಗಿಡ, ಮರ, ಬಳ್ಳಿ ಹಲವಾರು ಪ್ರಾಣಿಗಳು, ಜಲಚರಗಳು ವಾಸಿಸುತ್ತವೆ. ನಮ್ಮಂತೆಯೇ ಪ್ರಾಣಿಗಳಿಗೂ ಜೀವಿಸಬೇಕೆಂಬ ಆಸೆ. ಆದರೆ ಮಾನವನ ದುರಾಸೆಗೆ ಬಲಿಯಾದ ಹಲವು ಚರಗಳ ಬವಣೆ ಕೇಳುವವರಾರು? ಹೊಣೆ ಹೊರುವವರಾರು? ಆಮೆಗಳು ಅಪರೂಪದ ಪರಿಸರಸ್ನೇಹಿ ಜೀವಿಗಳು. ಹಳ್ಳಿಗಳಲ್ಲಿ ಇವುಗಳನ್ನು ಬಾವಿಗೆ ಬಿಡುತ್ತಾರೆ. ಕಾರಣ, ಇದು ಕ್ರಿಮಿಕೀಟಗಳನ್ನು ತಿಂದು ನೀರನ್ನು ಶುದ್ಧೀಕರಿಸುತ್ತದೆ ಎಂದು. ವಿಭಿನ್ನ ರೀತಿಯ ಆಮೆಗಳನ್ನು ಕಾಣಲು ನೀವು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಭಟ್ಕಳ, ಹಳದಿಪುರದಂಥ ಅರಬ್ಬೀ ತಟಗಳಿಗೆ ಹೋಗಬೇಕು. ದೈತ್ಯ ಅಲೆಗಳನ್ನು ಬೇಧಿಸಿ ಕಡಲ ಕಿನಾರೆಗೆ ಬರುವ ಕಡಲಾಮೆಗಳು ಪ್ರವಾಸಿಗನ ಕಣ್ಣಿಗೆ ಸಂತೋಷ ನೀಡುತ್ತವೆ. 10 ಕೆ.ಜಿ. ತೂಕ! ಈ ಆಮೆಗಳು ಸಾಮಾನ್ಯ ಗಾತ್ರದವಲ್ಲ. ಇವು ಶ್ರೀಲಂಕಾ ದ್ವೀಪ ಸಮೂಹದ ಕಡಲಾಮೆಗಳು. ಒಂದಕ್ಕಿಂತ ಒಂದು ದೊಡ್ಡದಿದ್ದು, 5ರಿಂದ 10 ಕೆ.ಜಿ. ತೂಗುತ್ತವೆ. ಅಲ್ಲಿಂದ ಇಲ್ಲಿನ ಅರಬ್ಬೀ ತೀರಕ್ಕೆ ಬಂದು ಮೊಟ್ಟೆ ಇಟ್ಟು ನಿರ್ಗಮಿಸುತ್ತವೆ. ಆದರೆ ಈ ಮೊಟ್ಟೆಗಳನ್ನು ಕಾಗೆ, ನಾಯಿ, ಹದ್ದು, ಹಲವು ಪ್ರಾಣಿಗಳು ತಿಂದು ನಾಶ ಮಾಡುತ್ತವೆ. ಹೀಗಾಗಿ ಇವುಗಳ ರಕ್ಷಣೆಗಾಗಿ ಹೊನ್ನಾವರ ಅರಣ್ಯ ಇಲಾಖೆಯು ಮೊಟ್ಟೆಗಳನ್ನು ಮರಿ ಮಾಡಿ ಸಮುದ್ರಕ್ಕೆ ಬಿಡುವ ಕೆಲಸ ಮಾಡುತ್ತಿದೆ. ಇಲ್ಲಿಗೆ ಕಡಲಾಮೆ ವೀಕ್ಷಣೆಗಾಗಿ ಬೇರೆ ಬೇರೆ ರಾಜ್ಯ, ದೇಶದ ಪ್ರವಾಸಿಗರು ಬರುತ್ತಾರೆ. ಪ್ರಭೇದಗಳು ಈ ಕಡಲಾಮೆಗಳಲ್ಲಿ ಹಲವು ವಿಧಗಳಿವೆ. ಕೆಲವು ಜಾತಿಯವು ನೀರಿನಿಂದ ಹೊರಗೆ ಬರುವುದೇ ಇಲ್ಲ. ಮತ್ತೆ ಕೆಲವು ನೀರಿನಲ್ಲೂ, ಮರಳಿನ ಮೇಲೂ ಬದುಕು ಕಟ್ಟಿಕೊಳ್ಳುತ್ತವೆ. ಆಕಾರ, ಬಣ್ಣ, ಗಾತ್ರದ ಮೂಲಕ ಇವುಗಳ ವಿಂಗಡಣೆ ಮಾಡುತ್ತಾರೆ. ಕಡಲಾಮೆಗಳು ಅಶುದ್ಧ ವಾತಾವರಣದಲ್ಲಿ ಬದುಕಲಾರವು. ಕಡಲಾಮೆಯ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನುವುದು, ಅಕ್ಟೋಬರ್‌ನಿಂದ ಜನವರಿವರೆಗೆ ನಡೆವ ಮೀನುಗಾರಿಕೆ, ಪರಿಸರ ಸ್ನೇಹಿಯಲ್ಲದ ಕೊರಕಲು, ತಡೆಗೋಡೆ ನಿರ್ಮಾಣ, ತೀರದಲ್ಲಿ ರಸ್ತೆ ಇತ್ಯಾದಿಗಳು ಕಡಲಾಮೆ ಸಂತತಿಗೆ ಮಾರಕವಾಗಿವೆ. -ಚಿತ್ರ, ಲೇಖನ: ಬಳಕೂರು ವಿ.ಎಸ್. ನಾಯಕ