ಕೂಡಲಸಂಗಮ ಕೂಡಲ ಸಂಗಮ ಬಸಣ್ಣನ ಕಾಲದಲ್ಲಿ ಶಿವಶರಣ ಅಧ್ಯಾತ್ಮಿಕ ಕೇಂದ್ರವಾಗಿ ಇಂದಿಗೂ ಈಶ್ವರ ಆರಾಧನೆಯಲ್ಲಿ ತೊಡಗಿರುವ ಕ್ಷೇತ್ರಗಳಲ್ಲಿ ಮೇರುಪಂಕ್ತಿಯಲ್ಲಿದೆ. ನಿತ್ಯ ಇಲ್ಲಿ ನೂರಾರು ಪ್ರವಾಸಿಗರು ಕ್ಷೇತ್ರದ ಮಹಿಮೆ ಅರಿಯಲು ಬಂದರೆ, ಭಕ್ತರು ಶಿವನ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಇದರಿಂದಾಗಿ ಇಂದು ಕೂಡಲಸಂಗಮ ಕ್ಷೇತ್ರ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಎಲ್ಲ ವರ್ಗದವರಿಗೂ ಬೇಕಾದ ಪರಮೇಶ್ವರನ್ನು ಕಾಣಲು ಎಲ್ಲ ಕಾಲದಲ್ಲೂ ಇಲ್ಲಿ ಭಕ್ತರು ಸಮಾವೇಶಗೊಳ್ಳುತ್ತಾರೆ. ಅದರಲ್ಲೂ, ಸಂಕ್ರಾಂತಿ, ಮಹಾ ಶಿವರಾತ್ರಿ ದಿನಗಳಲ್ಲಂತೂ ಇಲ್ಲಿ ಸಹಸ್ರಾರು ಭಕ್ತರು ಆಗಮಿಸುವ ಈ ತಾಣ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯಿಂದ 15 ಕಿ.ಮೀ. ಅಂತರದಲ್ಲಿದೆ. ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಕೂಡಲ ಕ್ಷೇತ್ರದಲ್ಲಿ ಸಂಗಮವಾಗಿ ಮುಂದೆ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಹರಿಯುತ್ತವೆ. ಸಂಗಮೇಶ್ವರ ದೇಗುಲ, ಬಸವಣ್ಣನ ಸಮಾಧಿ (ಐಕ್ಯ ಮಂಟಪ), ಬಸವ ಧರ್ಮಪೀಠ ಮಹಾಮನೆ ಆವರಣ, ಪೂಜಾವನ, 6000 ಮಂದಿ ಏಕಕಾಲಕ್ಕೆ ಆಸೀನರಾಗಬಹುದಾದ ಸಭಾ ಭವನ, ಕರ್ನಾಟಕ ಇತಿಹಾಸ ಮತ್ತು ಬಸವಣ್ಣರ ಅವರ ಮೇಲೆ ಬೆಳಕು ಚೆಲ್ಲುವ ವಸ್ತು ಸಂಗ್ರಹಾಲಯ ಪ್ರವಾಸಿಗರನ್ನು ಮನಸೆಳೆಯುವಂತಿದೆ. ಇಲ್ಲಿನ ಮತ್ತೊಂದು ವಿಶೇಷವಾಗಿದ್ದು, ವಿಶೇಷ ಹಿನ್ನೆಲೆಯ ಮಹತ್ವ ಹೊಂದಿದೆ. ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಕ್ಷೇತ್ರದ ಉಸ್ತುವಾರಿ ಹೊತ್ತು ಕಾರ್ಯನಿರ್ವಹಿಸುತ್ತಿದೆ. ಬಸವಣ್ಣನವರ ಜೀವನ ಚರಿತ್ರೆ, ಶರಣರ ಮಹತ್ಕಾರ್ಯಗಳನ್ನು ಅರುಹುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.