ಗಿರಿಯಾಲ ಎಲ್ಲೋ...! ಗಿರಿಯಾಲ ಎನ್ನುವ ಹೆಸರನ್ನೂ ನೀವು ಕೇಳಿರಲಾರಿರಿ. ನಾಡಿನ ಜನತೆಗೆ ಹೆಚ್ಚಾಗಿ... ಗಿರಿಯಾಲ ಎನ್ನುವ ಹೆಸರನ್ನೂ ನೀವು ಕೇಳಿರಲಾರಿರಿ. ನಾಡಿನ ಜನತೆಗೆ ಹೆಚ್ಚಾಗಿ ಪರಿಚಯವೇ ಇಲ್ಲದ ಪುಟ್ಟ ಗ್ರಾಮ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿದೆ. ಇದು ಗಿರಿಯ ಮೇಲಿರುವುದರಿಂದ ಗಿರಿಯಾಲ ಎನ್ನುವ ಹೆಸರು. ಈ ಗ್ರಾಮ ಐತಿಹಾಸಿಕವಾಗಿ ಮಹತ್ವ ಪಡೆದಿದ್ದರೂ, ಅಷ್ಟಾಗಿ ಗಮನ ಸೆಳೆಯದ ಸ್ಥಳ. ಹೆಜ್ಜೆಹೆಜ್ಜೆಗೂ ಶಿಲಾಶಾಸನಗಳು, ವೀರಗಲ್ಲುಗಳು ಕಾಣುತ್ತವೆ. ಎಲ್ಲಿ ನೋಡಿದರಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕರುಹುಗಳು ಕಾಣುತ್ತವೆ. ವೀರಗಲ್ಲು, ಮಹಾಸತಿಕಲ್ಲುಗಳು ಜನರ ಕಲ್ಪಣೆಯಲ್ಲಿ ದೇವರ ವಿಗ್ರಹಗಳಾಗಿ ಪೂಜಿಸಲ್ಪಡುತ್ತಿವೆ. ಜೈನರ ಕಾಲದ ತೀರ್ಥಂಕರರ ವಿಗ್ರಹಗಳನ್ನು ನೋಡಿದಾಗ ಈ ಗ್ರಾಮದಲ್ಲಿ ಜೈನ ಧರ್ಮದ ಇತಿಹಾಸವೂ ಇದೆ ಎಂಬುದು ಸ್ಪಷ್ಟವಾಗುತ್ತದೆ. ಈಗಲೂ ಹೊಲ ಗದ್ದೆಗಳಲ್ಲಿ ಉಳುಮೆ ಮಾಡುವಾಗ ಹಳೆ ಕಾಲದ ಗುರುತುಳು, ಶಾಸನಗಳು, ನಾಣ್ಯಗಳು ಪತ್ತೆಯಾಗುತ್ತಿವೆ. ಇತ್ತೀಚೆಗೆ ಗ್ರಾಮದ ಹಿರಿಯರಾದ ಅಡಿವೆಪ್ಪ ಹಳಮನಿ ಅವರು ಮನೆ ಕಟ್ಟಲು ಭೂಮಿ ಅಗೆಯುವಾಗ ಹಳೆಯ ಕಾಲದ ಆಯುಧಗಳು, ಮಡಿಕೆ ಕುಡಿಕೆಗಳು, ಬೀಸುಕಲ್ಲುಗಳು ದೊರೆತಿವೆ. ಗಿರೀಶ ಮಾಡಮಗೇರಿ ಎಂಬ ಯುವಕನಿಗೆ ಹಳೆಯ ಕಾಲದ ತಾಮ್ರದ ನಾಣ್ಯಗಳು ದೊರೆತಿವೆ. ವಿಪರ್ಯಾಸ ಎಂದರೆ ಇಷ್ಟೊಂದು ಭವ್ಯ ಇತಿಹಾಸವನ್ನು ಸಾರುವ ಮೂಲಾಧಾರಗಳು ಪತ್ತೆಯಾಗಿದ್ದರೂ ಇದು ನಮ್ಮ ಪುರಾತತ್ವ ಇಲಾಖೆ ಗಮನಕ್ಕೆ ಬಂದಿಲ್ಲ. ಸ್ಮಾರಕಗಳು ಪಾಳು ಬೀಳುತ್ತಿವೆ. ಶಾಸನ ಅಥವಾ ಪ್ರಾಚ್ಯವಸ್ತುಗಳನ್ನು ಜನರಾದರೂ ಎಷ್ಟೆಂದು ಸಂರಕ್ಷಿಸಬಹುದು? ವರ್ಷದಲ್ಲಿ ನಾಲ್ಕು ಜಾತ್ರೆ ಅಪಾರ ಭಕ್ತಿ ಭಾವವನ್ನು ಹೊಂದಿರುವ ಗ್ರಾಮಸ್ಥರು ವರ್ಷದಲ್ಲಿ ನಾಲ್ಕು ದೇವರ ಜಾತ್ರೆಗಳನ್ನು ಮಾಡುತ್ತಾರೆ. ಮಹಾನವಮಿಯ ನಿಮಿತ್ತ ಜರುಗುವ ಬೆಂಕಟೇಶ್ವರ ಜಾತ್ರೆಯು ಒಂದು ವಿಶಿಷ್ಟ ಪದ್ದತಿಯಲ್ಲಿ ಜರುಗುವ ಜಾತ್ರೆಯಾಗಿದೆ. ಜಾತ್ರೆಯ ದಿನದಂದು ಹರಕೆ ಹೊತ್ತ ಸಾವಿರಾರು ಭಕ್ತಾದಿಗಳು ಚೀಲಗಟ್ಟಲೆ ತೆಂಗಿನಕಾಯಿಗಳನ್ನು ತಂದು ಜನರ ಮಧ್ಯದಲ್ಲಿಯೇ ನಿಂತುಕೊಂಡು ಎತ್ತರಕ್ಕೆ ಹಾರಿಸುತ್ತಾರೆ. ಅವು ಜನರ ತಲೆ ಮೇಲೆ ಬೀಳುತ್ತವೆ. ಸಾಕಷ್ಟು ಜನರ ತಲೆ ಒಡೆದು ರಕ್ತ ಹರಿಯುತ್ತದೆ. ಆದರೂ ಜನರು ಭಯ ಪಡದೆ ತಮ್ಮ ಪಾಪ ಪರಿಹಾರವಾಯಿತೆಂದು ತಿಳಿದು ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ವಿಠಲ ರುಕ್ಮಾಬಾಯಿ ದೇವರ ಜಾತ್ರೆ, ಹನಮಂತ ದೇವರ ಜಾತ್ರೆ, ಕಲ್ಮೇಶ್ವರ ಜಾತ್ರೆಗಳು ವಿಜೃಂಭಣೆಯಿಂದ ಜರುಗುತ್ತವೆ. ಈ ಜಾತ್ರೆಗಳಲ್ಲಿ ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ, ಉಚಿತ ಪ್ರಸಾದ ವಿತರಣೆ, ವಾದ್ಯ ಮೇಳಗಳ ಪ್ರದರ್ಶನ, ಭಜನೆ ಮತ್ತು ಕಿರ್ತನೆಗಳು, ಮನರಂಜನೆಗಾಗಿ ಸಣ್ಣಾಟ, ದೊಡ್ಡಾಟ, ನಾಟಕ ಪ್ರದರ್ಶನಗಳಿರುತ್ತವೆ. ಸೌತೆ ಬೀಜದ ಪ್ರಸಿದ್ಧಿ ಐತಿಹಾಸಿಕವಾಗಿ ಮಾತ್ರವಲ್ಲ, ಇನ್ನೂ ಅನೇಕ ಕಾರಣಗಳಿಂದ ಗೆರಿಯಾಲ ಪ್ರಮುಖ ಊರು. ಇಲ್ಲಿ ಹೆಚ್ಚಾಗಿ ತರಕಾರಿಗಳನ್ನು ಬೆಳೆಯುತ್ತಾರೆ. ಗಿರಿಯಾಲದ ಸವತೆ ಬೀಜಗಳು ತುಂಬಾ ಹೆಸರುವಾಸಿ. ಇಲ್ಲಿನ ರೈತರು ಜಮೀನಿಗೆ ನೀರಾವರಿ ಇಲ್ಲದಿದ್ದರೂ ನೀರಾವರಿ ಜಮೀನಿಗಿಂತ ಹೆಚ್ಚಿನ ಬೆಳೆ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಪಟ್ಟಣಕ್ಕೆ ಹೋಗಿ ಬೇರೊಂದು ಕೆಲಸ ಹಿಡಿದು ದುಡಿಯುತ್ತಾರೆ. ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಮತ್ತೆ ಊರಿಗೆ ಬಂದು ತಮ್ಮ ಪುಟ್ಟ ಗದ್ದೆಗಳಲ್ಲಿ ಉಳುಮೆ ಮಾಡಲು ಸಜ್ಜಾಗುತ್ತಾರೆ. ಗಿರಿಯಾಲದಲ್ಲಿ ಸಿಗುತ್ತಿರುವ ಆಧಾರಗಳು 11 ಮತ್ತು 12 ನೇ ಶತಮಾನಕ್ಕೆ ಸಂಬಂಧಿಸಿದ್ದು ಬಾಗೇವಾಡಿ ಶಾಸನಗಳನ್ನು ಹೋಲುತ್ತವೆ. ಈ ಕುರಿತು ಇನ್ನಷ್ಟು ಅಧ್ಯಯನದ ಅಗತ್ಯವಿದೆ. - ಸುನೀಲ ಸಿ.ಬಿ, ಇತಿಹಾಸಕಾರ - ಸಿದ್ದು ಇಟಗಿ