ಸವಿಸವಿ ಓಲೆಬೆಲ್ಲ ಮಳೆಗಾಲ ಪ್ರಾರಂಭವಾದರೆ ಕೊಡಗಿನ ಜನರು ಮೈ ಬೆಚ್ಚಗೆ ಮಾಡಿಕೊಳ್ಳಳು ಕಾಫಿ ಬೇಕೇಬೇಕು. ಬೆಲ್ಲ ಉಪಯೋಗಿಸಿ ಕಾಫಿ... ಮಳೆಗಾಲ ಪ್ರಾರಂಭವಾದರೆ ಕೊಡಗಿನ ಜನರು ಮೈ ಬೆಚ್ಚಗೆ ಮಾಡಿಕೊಳ್ಳಳು ಕಾಫಿ ಬೇಕೇಬೇಕು. ಬೆಲ್ಲ ಉಪಯೋಗಿಸಿ ಕಾಫಿ ಮಾಡಿ ಕುಡಿಯುವವರು ಬಹಳಷ್ಟು ಮಂದಿ. ಕೊಡಗಿಗೆ, ಕಬ್ಬು ಹೆಚ್ಚಾಗಿ ಬೆಳೆಯುವ ಪ್ರದೇಶಗಳಾದ ಪಕ್ಕದ ಹಾಸನ, ಮೈಸೂರು, ಮಂಡ್ಯಗಳಿಂದ ಬೆಲ್ಲ ಸರಬರಾಜುವಾಗುತ್ತಿದೆ. ಪಕ್ಕದ ಕೇರಳ ರಾಜ್ಯದ ಪಾಲಕ್ಕಾಡು, ಚಿಟ್ಟೂರು ಜಿಲ್ಲೆಯ 'ಓಲೆಬೆಲ್ಲ' ಇತ್ತೀಚೆಗೆ ಜಿಲ್ಲೆಗೆ ಲಗ್ಗೆ ಇಟ್ಟಿದೆ. ಅಲ್ಲಿ ಬೆಳೆಯವ ಕರಿಪನಾ ಮರದಿಂದ ಸಿಗುವ ರಸದೊಂದಿಗೆ ಬೆಲ್ಲ, ಸಕ್ಕರೆ, ಶುಂಠಿ, ಕರಿಮೆಣಸು, ಏಲಕ್ಕಿ ಇತ್ಯಾದಿ ವಸ್ತುಗಳನ್ನು ಬಳಸಿ ತಯಾರಿಸುವ ಈ ಓಲೆ ಬೆಲ್ಲ ವಿಶಿಷ್ಟವಾದುದು. ದಿಢೀರ್ ಕಾಣಿಸಿಕೊಳ್ಳುವ ಶೀತ, ಕೆಮ್ಮು, ಆಯಾಸ, ತಲೆನೋವು ನಿವಾರಕವಾಗಿಯೂ ಓಲೆ ಬೆಲ್ಲ ಪ್ರಯೋಜನಕಾರಿ. ಈ ಓಲೆಬೆಲ್ಲ ಮಾರಾಟ ಮಾಡುವವರು ಸ್ಥಳದಲ್ಲಿಯೇ ಸ್ಟವ್‌ನಲ್ಲಿ ಬಿಸಿನೀರು ಕಾಯಿಸಿ ಓಲೆಬೆಲ್ಲವನ್ನು ಬಿಸಿನೀರಿನಲ್ಲಿ ಹಾಕಿ ಕಾಫಿಹುಡಿಯನ್ನು ಬೆರೆಸಿ ಬಿಸಿಬಿಸಿ ಕಾಫಿಯನ್ನು ಬೆಲ್ಲ ಕೊಳ್ಳುವವರಿಗೆ ಸ್ಯಾಂಪಲ್ ರೂಪದಲ್ಲಿ ನೀಡುತ್ತಾರೆ. ಸಿಹಿಯಾಗಿ ಔಷಧದ ಗುಣವುಳ್ಳ ಓಲೆಬೆಲ್ಲದ ಕಾಫಿ ರುಚಿಯಾಗಿದ್ದು ಪ್ರತಿ ಕೆ.ಜಿ.ಗೆ ರು. 180ರಂತೆ ವಾಹನದಲ್ಲಿ ಮಾರಾಟ ಮಾಡುತ್ತಿದ್ದಾರೆ. - ಚಿತ್ರ-ಬರಹ: ಮುಬಾರಕ್ ಎಸ್.ಎಂ.ಸಿದ್ದಾಪುರ