ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಫೋಟೋಗಳು ವೈರಲ್ ಆಯ್ತು, ಕಾರವಾರ ರೈಲ್ವೇ ನಿಲ್ದಾಣ ಫೇಮಸ್ ಆಯ್ತು! ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಯಾವುದು ಹೇಗೆ ಖ್ಯಾತಿ ಗಳಿಸುತ್ತದೆ ಎಂಬುದು ತಿಳಿಯುವುದಿಲ್ಲ. ಸಾಕಷ್ಟು ಸುದ್ದಿಗಳು ವಸ್ತುಗಳು ವೈರಲ್ ಆಗುತ್ತಿವೆ. ಕಾರವಾರ: ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಯಾವುದು ಹೇಗೆ ಖ್ಯಾತಿ ಗಳಿಸುತ್ತದೆ ಎಂಬುದು ತಿಳಿಯುವುದಿಲ್ಲ. ಸಾಕಷ್ಟು ಸುದ್ದಿಗಳು ವಸ್ತುಗಳು ವೈರಲ್ ಆಗುತ್ತಿವೆ.ಇಂತಹ ಪಟ್ಟಿಗೆ ಕಾರವಾರ ರೈಲು ನಿಲ್ದಾಣ ಕೂಡ ಸೇರ್ಪಡೆಯಾಗಿದ್ದು, ಹಸಿರು ಬೆಟ್ಟಗಳ ನಡುವೆ ಇರುವ ರೈಲು ನಿಲ್ದಾಣ ಇದೀಗ ಪ್ರವಾಸಿಗರ ಫೇವರಿಟ್ ಪ್ರದೇಶವಾಗಿ ಮಾರ್ಪಟ್ಟಿದೆ. ಜೂನ್ 2018 ರಲ್ಲಿ, ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ರೋಷನ್ ಕಾನಡೆ ಮತ್ತು ಆತನ ಸ್ನೇಹಿತ ಶಿವರಾಜ್ ಬೋರ್ಕರ್ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಅವುಗಳನ್ನು ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರಗಳು ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ, ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದವು. ಇಂದು ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಕಾರವಾರ ರೈಲ್ವೇ ನಿಲ್ದಾಣ ಎಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ ಎಂದರೆ ಉತ್ತರ ಕನ್ನಡದ ಅತ್ಯಂತ ಛಾಯಾಚಿತ್ರ ತೆಗೆದ ಸ್ಥಳಗಳಲ್ಲಿ ಒಂದಾಗಿದೆ.ಮಂಜಿನ ಮರೆಯಲ್ಲಿ ಹಸಿರು ಪರ್ವತಗಳ ನಡುವಿನಲ್ಲಿರುವ ಈ ರೈಲ್ವೇ ನಿಲ್ದಾಣ ಛಾಯಾಚಿತ್ರಕಾರರ ಮತ್ತು ಪ್ರವಾಸಿಗರ ಹಾಟ್ ಫೇವರಿಟ್ ಆಗಿದೆ. ಈ ಬಗ್ಗೆ ಮಾತನಾಡಿರುವ ಕಾನಡೆ, 'ನಾನು ಆಗಾಗ್ಗೆ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದೆ, ನಿಲ್ದಾಣದ ಸೌಂದರ್ಯ ನೋಡಿ ಕೆಲವು ಚಿತ್ರಗಳನ್ನು ಕ್ಲಿಕ್ ಮಾಡಲು ನಿರ್ಧರಿಸಿದೆ. ಅದು ಮಧ್ಯಾಹ್ನವಾಗಿತ್ತು. ಸುರಂಗದಿಂದ ರೈಲು ಹೊರ ಬರಲು ನಾನು ಕಾಯುತ್ತಿದ್ದೆ. ರೈಲು ಬರುತ್ತಿದ್ದಂತೆಯೇ ನಾನು ಫೋಟೋ ಕ್ಲಿಕ್ ಮಾಡಿದೆ. ನಾನು ಕೆಲವು ಚಿತ್ರಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಪೋಸ್ಟ್ ಮಾಡಿದ್ದೇನೆ. ನನಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿದೆ. ಈ ಚಿತ್ರ ವೈರಲ್ ಆಗಿದೆ ಮತ್ತು ಈಗಲೂ ವೈರಲ್ ಆಗುತ್ತಿದೆ ಎಂದು ಹೇಳಿದರು.ಕಾನಡೆ 2019 ರಲ್ಲಿ ಮತ್ತೆ ಅದೇ ಸ್ಥಳವನ್ನು ಛಾಯಾಚಿತ್ರ ಮಾಡಿದ್ದು, ಅದೂ ಕೂಡ ಹಿಟ್ ಆಗಿತ್ತು. ಇಂದು, ನಿಲ್ದಾಣದ ಎರಡೂ ಬದಿಗಳಲ್ಲಿ ವಿದ್ಯುತ್ ಕಂಬಗಳನ್ನು ಸ್ಥಾಪಿಸಲಾಗಿದೆ. ಇದು ನಿಲ್ದಾಣದ ಸೌಂದರ್ಯವನ್ನು ಹಾಳುಮಾಡುತ್ತದೆ. ಅದರ ಹೊರತಾಗಿಯೂ, ಈ ಸ್ಥಳವು ಹಲವರ ಅಚ್ಚುಮೆಚ್ಚಿನ ಸ್ಥಳವಾಗಿದೆ ಎಂದು ಕಾನಡೆ ಹೇಳಿದ್ದಾರೆ.ಈ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ನಾರ್ವೇಯನ್ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ ಎರಿಕ್ ಸೋಲ್ಹೀಮ್ ಕೂಡ ಈ ಕುರಿತು ಟ್ವೀಟ್ ಮಾಡಿ, 'ಅದ್ಭುತ ಹಸಿರು! ಇದು ಪ್ರಪಂಚದ ಮತ್ತು ಭಾರತದ ಹಸಿರು ರೈಲು ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾರವಾರ ಸೋಲ್ಹೀಮ್ ಗ್ರೀನ್ ಪಾರ್ಟಿಯ ಸದಸ್ಯರಾಗಿದ್ದು, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕಾರವಾರದಿಂದ 6 ಕಿಮೀ ದೂರದಲ್ಲಿರುವ ಶಿರವಾಡದಲ್ಲಿ ಈ ರೈಲ್ವೇ ನಿಲ್ದಾಣವಿದೆ. ಶಿರವಾಡ ಬೋಟಿಂಗ್ ಮತ್ತು ಬೋಟ್‌ಗಳಿಗೆ ಖ್ಯಾತಿ ಗಳಿಸಿರುವ ಸುಂದರ ಕರಾವಳಿ ಪಟ್ಟಣವಾಗಿದೆ. ಎಡಪಲ್ಲಿ-ಪನ್ವೇಲ್ ಹೆದ್ದಾರಿ (-17) ಕಡಲತೀರದಿಂದ ಕೆಲವೇ ಮೀಟರ್ ದೂರದಲ್ಲಿ ಚಲಿಸುತ್ತದೆ. ಇದೂ ಕೂಡ ಪ್ರವಾಸಿಗರನ್ನು ಸೆಳೆಯಲು ಪ್ರಮುಖ ಅಂಶವಾಗಿದೆ. ಈ ನಿಲ್ದಾಣವು ಮಾನ್ಸೂನ್ ಕೊಡುಗೆಯಾಗಿದ್ದು, ಹಿಂಬದಿ ಸಂಪೂರ್ಣ ಹಸಿರಿನಿಂದ ಕೂಡಿದೆ. ಸಮೃದ್ಧವಾದ ಕಾಡು ಮತ್ತು ವ್ಯತಿರಿಕ್ತ ರೈಲ್ವೆ ಮಾರ್ಗವು ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳಿದ್ದಾರೆ. ಸುಂದರವಾದ ನಿಲ್ದಾಣವು ಸುತ್ತಲೂ ಎತ್ತರದ ದಟ್ಟವಾದ ಪಶ್ಚಿಮ ಘಟ್ಟಗಳಿಂದ ಹೊರಹೊಮ್ಮಿರುವಂತೆ ಭಾಸವಾಗುತ್ತದೆ. ಹವ್ಯಾಸಿ ಛಾಯಾಚಿತ್ರಕಾರರಿಗೆ ಹೇಳಿಮಾಡಿಸಿದ ಜಾಗ. ಎರಡನೇ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುವ ಕಾಲು ಸೇತುವೆ ನಿಲ್ದಾಣದ ವಿಶಾಲ ಆಯಾಮವನ್ನು ಸೆರೆ ಹಿಡಿಯಲು ಛಾಯಾಗ್ರಾಹಕರು ಹೆಚ್ಚು ಇಷ್ಟಪಡುವ ಸ್ಥಳವಾಗಿದೆ. ಇದು ಪ್ರತಿ ಮಳೆಗಾಲದಲ್ಲಿ ನೂರಾರು ಛಾಯಾಗ್ರಾಹಕರನ್ನು ಸೆಳೆಯುತ್ತದೆ ಮತ್ತು ಇದು ವಿದ್ಯಾರ್ಥಿಗಳ ಸೆಲ್ಫಿ ಹಾಟ್‌ಸ್ಪಾಟ್ ಆಗಿದೆ. ಬೇಸಿಗೆಯಲ್ಲಿ ಸಸಿಗಳು ಒಣಗುವವರೆಗೂ ಅಂದರೆ ಸುಮಾರು 6-8 ತಿಂಗಳುಗಳವರೆಗೆ ಇಲ್ಲಿ ಹಸಿರಿರುತ್ತದೆ. ಸಣ್ಣ ಮಳೆ ಬಿದ್ದರೂ ಇಲ್ಲಿ ಹಸಿರು ಸಸಿಗಳು ಬೆಳೆದು ಗ್ರೀನ್ ಕಾರ್ಪೆಟ್ ಹರಡಲು ಪ್ರಾರಂಭಿಸುತ್ತದೆ.ಈ ನಿಲ್ಗಾಣವು ಎರಡು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಇದು ಹಲವಾರು ಪ್ರದೇಶಗಳನ್ನು ಉತ್ತರ ಕನ್ನಡ ಕರಾವಳಿಗೆ ಸಂಪರ್ಕಿಸುತ್ತದೆ. ಈ ಸುಂದರ ನಿಲ್ದಾಣವನ್ನು ಹಲವಾರು ಅಡೆತಡೆಗಳ ನಡುವೆ ನಿರ್ಮಿಸಲಾಗಿದ್ದು, 1920 ರ ದಶಕದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿಲ್ದಾಣದ ಸಮೀಕ್ಷೆಯನ್ನು ಮಾಡಲಾಗಿದ್ದರೂ, ನಿರ್ಮಾಣವಾಗಿದ್ದು ಮಾತ್ರ 1980 ರ ಕೊನೆಯ ಭಾಗದಲ್ಲಿ. ಜನತಾ ದಳದ ಹಿರಿಯ ನಾಯಕ ಜಾರ್ಜ್ ಫರ್ನಾಂಡಿಸ್ ರೈಲ್ವೇ ಮಂತ್ರಿಯಾದಾಗ ನಿಲ್ದಾಣದ ಕಾಮಗಾರಿ ಪ್ರಾರಂಭವಾಯಿತು.ಮಂಗಳೂರಿನ ಫರ್ನಾಂಡಿಸ್, ಕೊಂಕಣ ರೈಲ್ವೆಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು, ಇದು ಅವರ ತವರು ನಗರವಾದ ಕಾರವಾರ ಮತ್ತು ಕರಾವಳಿ ಮಹಾರಾಷ್ಟ್ರದ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಸುಂದರ ರೈಲ್ವೆ ಮಾರ್ಗದ ನಿರ್ಮಾಣವು ಒಂದು ದೊಡ್ಡ ಸವಾಲಾಗಿತ್ತು, ಏಕೆಂದರೆ ಇದು ಪಶ್ಚಿಮ ಘಟ್ಟಗಳನ್ನು ವಿಭಜಿಸುತ್ತದೆ, ಕಣಿವೆಗಳು ಮತ್ತು ಹಲವಾರು ನದಿಗಳ ಮೇಲೆ ನಿರ್ಮಿಸಲಾದ ಸೇತುವೆಗಳ ಮೇಲೆ ಹಾದುಹೋಗುವ ಹಳಿಗಳು ಮತ್ತು ಪರ್ವತಗಳ ಮೂಲಕ ಹಲವಾರು ಸುರಂಗಗಳ ಮೂಲಕ ಈ ಮಾರ್ಗ ನಿರ್ಮಿಸಲಾಗಿದೆ. ಕಾರವಾರದಲ್ಲಿ, ನಿಲ್ದಾಣವು ಕಾಳಿ ನದಿ ಕಣಿವೆಯ ಮೂಲಕ ಹಾದುಹೋಗುತ್ತದೆ. ಕಾರವಾರಕ್ಕೆ ರೈಲ್ವೆ ಸಂಪರ್ಕವನ್ನು ನೀಡಿದ ಶ್ರೇಯ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಹಣಕಾಸು ಸಚಿವ ಮಧು ದಂಡಾವಟೆ, ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ. ಇವರ ಶ್ರಮದ ಫಲವಾಗಿ ಈ ಮಾರ್ಗದಲ್ಲಿ ಇಂದು ರಾಜಧಾನಿ ಎಕ್ಸ್‌ಪ್ರೆಸ್, ಗರೀಬ್ ರಥ್, ಗಾಂಧಿಧಾಮ ಎಕ್ಸ್‌ಪ್ರೆಸ್, ಪೋರ್ ಬಂದರ್ ಎಕ್ಸ್‌ಪ್ರೆಸ್ ಸೇರಿದಂತೆ 22 ಪ್ರಮುಖ ರೈಲುಗಳು ಇಲ್ಲಿ ನಿಲ್ಲುಗಡೆ ಹೊಂದಿ ಸಾಗುತ್ತವೆ.