ಸಿಂಪಲ್ ಚತುರ್ಥಿಗೆ ಸೂತ್ರ ಗಣೇಶ್ ಹುಟ್ಟಿದ ದಿನವಾದ ಚತುರ್ಥಿಯನ್ನು ಬಹು ವಿಜೃಂಭಣೆಯಿಂದ.... ಗಣೇಶ್ ಹುಟ್ಟಿದ ದಿನವಾದ ಚತುರ್ಥಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲೇಬೇಕು. ಆದರೆ, ಈ ವಿಜೃಂಭಣೆ ಪರಿಸರದ ಮೇಲೆ ಘೋರ ಪರಿಣಾಮ ಬೀರಬಾರದು. ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸುವುದೂ ನಮ್ಮೊಳಗೆ ರೂಢಿಯಾಗಬೇಕು. ಹಾಗಿದ್ದರೆ ಕೇಳಿ ಕೆಲವು ಟಿಪ್ಸ್... ಜೇಡಿಮಣ್ಣಿನ ಗಣಪ ಪರಿಸರ ಸ್ನೇಹಿ. ಮಣ್ಣಿನಲ್ಲೇ ಹುಟ್ಟಿ ಮಣ್ಣ ಸೇರುವ ತತ್ವ ಸಾರುವವ. ಸಾಂಪ್ರದಾಯಿಕವಾಗಿಯೂ ಈ ಗಣಪ ಶ್ರೇಷ್ಠ. ರಾಸಾಯನಿಕಗಳಿಂದ, ಪ್ಲಾಸ್ಚರ್ ಆಫ್ ಪ್ಯಾರಿಸ್‌ನಿಂದ, ಪ್ಲಾಸ್ಟಿಕ್‌ನಿಂದ, ಥರ್ಮಕೋಲ್‌ನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಕೊಳ್ಳಬೇಡಿ. ವಿಸರ್ಜನೆಯ ವೇಳೆ ನೀರು ಮತ್ತು ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗದಂಥ ನೈಸರ್ಗಿಕ, ಜೈವಿಕ ವಸ್ತುಗಳಿಂದ ತಯಾರಿಸಿದ ಬಣ್ಣದಿಂದ ಮಾಡಿದ ಗಣಪ ಉತ್ತಮ. ಇಲ್ಲದಿದ್ದಲ್ಲಿ ವರ್ಣಯವಾಗಿ ನೀರಿಗೆ ವಿಷ ಹರಡುವುದು. ದೊಡ್ಡ ಗಾತ್ರದ ಮೂರ್ತಿಗಳಿಗೆ ಹೆಚ್ಚು ಸ್ಥಳ ಬೇಕಾಗುತ್ತದೆ. 5 ಅಡಿ ಅಥವಾ 1.5 ಮೀಟರ್‌ಗೆ ವಿಗ್ರಹದ ಎತ್ತರವನ್ನು ಸೀಮಿತಗೊಳಿಸಿ. ಒಂದೇ ಬೀದಿಯಲ್ಲಿ ಹತ್ತಾರು ಕಡೆ ಬೀದಿಯವರೆಲ್ಲ ಒಂದಾಗಿ ಒಂದೇ ಮೂರ್ತಿ ಇರಿಸಿದರೆ ಪರಿಸರ ಸಂರಕ್ಷಣೆಯ ಜತೆ ಬಾಂಧವ್ಯವೂ ವೃದ್ಧಿಸುತ್ತದೆ. ದೊಡ್ಡ ವಿಗ್ರಹಗಳ ಬಳಕೆಯಿಂದ ವಿಲೇವಾರಿ ಮತ್ತು ಸಂಚಾರಕ್ಕೂ ತೊಂದರೆಯಾಗಿ ಟ್ರಾಫಿಕ್ ಜಾಮ್ ತಲೆದೋರುವ ಸಾಧ್ಯತೆಯೂ ಹೆಚ್ಚು. ಅಲಂಕಾರಿಕ ದೀಪಗಳನ್ನು ಸಂಜೆ ಅಥವಾ ಅಗತ್ಯವಿದ್ದಾಗ ಮಾತ್ರ ಸ್ವಿಚ್ ಆನ್ ಮಾಡಿ ಸಾಂಪ್ರದಾಯಿಕ ಬಲ್ಬಗಳ ಬದಲು ಸಿಎಫ್‌ಎಲ್ ಮತ್ತು ಟ್ಯೂಬ್‌ಗಳನ್ನು ಬಳಸಿದರೆ ವಿದ್ಯುತ್ ಉಳಿಸಹುದು. ನೈಸರ್ಗಿಕ ಬಣ್ಣಗಳಾದ ಅರಿಶಿನ, ಮೆಹಂದಿ, ಅಕ್ಕಿ ಹಿಟ್ಟು, ಗುಲಾಲುಗಳನ್ನು ರಂಗೋಲಿಯಲ್ಲಿ ಬಳಸಿ. ಇಲ್ಲದಿದ್ದಲಿ ಪುಷ್ಪ ಪಕಳೆಗಳಿಂದಲೂ ಅಂದಗೊಳಿಸಬಹುದು. ಜೋರಾಗಿ ಸಂಗೀತ ಹಾಕುವ ಬದಲು ಮೃದಂಗ, ತಬಲಾ ಮತ್ತು ಕಡಿಮೆ ಧ್ವನಿಯ ಉಪಕರಗಳನ್ನು ಬಳಸಿ, ಧ್ವನಿವರ್ಧಕ ಯಂತ್ರಗಳಿಂದ ಆಸ್ಪತ್ರೆ, ವೃದ್ದಾಶ್ರಮ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸಮಸ್ಯೆ ಉಂಟಾಗುತ್ತದೆ. ಸ್ಪೀಕರ್ ಮತ್ತು ಮೈಕ್ರೋಫೋನ್‌ಗಳನ್ನು ಸಂಜೆ 6ರಿಂದ 10ರವರೆಗಷ್ಟೇ ಬಳಸಿ. ಪಟಾಕಿ ಬಳಕೆ ಬೇಡ. ಗಣೇಶ್ ವಿಸರ್ಜನೆಗೆ ಕೃತಕ ವಿಸರ್ಜನೆ ತೊಟ್ಟಿ ಒಳ್ಳೆಯದು. ಇದರಿಂದ ನೈಸರ್ಗಿಕ ಸಂಪನ್ನೂಲಗಳಾದ ನದಿ, ಕೆರೆ, ಹೊಂಡಗಳು ಮಾಲಿನ್ಯ ಮುಕ್ತವಾಗುತ್ತವೆ. ಲೋಹದ ಅಥವಾ ಕಲ್ಲಿನ ವಿಗ್ರಹಗಳನ್ನು ಬಳಸಿ ಮನೆಯಲ್ಲೇ ಬಕೆಟ್‌ನಲ್ಲಿ ಅಥವಾ ಕೆಲವು ಹನಿ ನೀರನ್ನು ವಿಗ್ರಹಕ್ಕೆ ಚಿಮುಕಿಸಿ ಸಾಂಕೇತಿಕವಾಗಿ ವಿಸರ್ಜಿಸಬಹುದು. ನಂತರ ಪ್ಯಾಕ್ ಮಾಡಿ ಗಣೇಶನನ್ನು ಎತ್ತಿಟ್ಟರೆ ಮುಂದಿನ ವರ್ಷಕ್ಕೆ ಬಳಸಬಹುದು. -ಗಣೇಶ ರಾಯ್ಕರ