ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ಹಸುಗಳಿಗೂ 'ಆಧಾರ್ ಕಾರ್ಡ್' ಮಸೂದೆ ಚರ್ಚೆ ಬಿಜೆಪಿ ಪಕ್ಷದ ಮೂರು ದಿನದ ರಾಷ್ಟೀಯ ಕಾರ್ಯಕಾರಿಣಿ ಸಭೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರು: ಬಿಜೆಪಿ ಪಕ್ಷದ ಮೂರು ದಿನದ ರಾಷ್ಟೀಯ ಕಾರ್ಯಕಾರಿಣಿ ಸಭೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ನೆನ್ನೆ ಪಕ್ಷದ ಪದಾಧಿಕಾರಿಗಳ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಭೆಯಲ್ಲಿ ಎಲ್ಲ ಬಿಜೆಪಿ ಆಡಳಿತ ರಾಜ್ಯದ ಮುಖ್ಯಮಂತ್ರಿಗಳು ಕೂಡ ಭಾಗವಹಿಸಿದ್ದರು. ಭೂ ಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಗೆ ವಿಪಕ್ಷಗಳು ಅಡ್ಡಗಾಲು ಹಾಕುತ್ತಿರುವುದರಿಂದ, ವಿಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ರೈತರಿಗೂ ಸಂತಸ ನೀಡುವಂತಹ ಹೊಸ ಕಾಯ್ದೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕಾಯ್ದೆಯ ಮುಖ್ಯ ಅಂಶ ಎಂದರೆ ಹಸುಗಳಿಗೂ ಆಧಾರ್ ಕಾರ್ಡ್ ನೀಡುವುದು! ಈ ಆಧಾರ್ ಕಾರ್ಡ್ ನಿಂದ ರೈತರು ಹಸುವಿನ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ. ಹಾಗೂ ಹಸುಗಳ ಪಾಲನೆಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಸರ್ಕಾರದಿಂದ ನೀಡಲಾಗುವುದು. ಆದರೆ ಈ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆದರೆ ಪ್ರತಿ ಹಸುವಿನ ವಿಭಿನ್ನವಾದ ಗುರುತು ಏನು ಎಂಬುದನ್ನು ತಿಳಿಯಲು ಪಕ್ಷ ತಜ್ಞರ ಮೊರೆ ಹೋಗಲಿದೆ. ಸದ್ಯಕ್ಕೆ ಮನುಷ್ಯರಿಗೆ ನೀಡುವ ಆಧಾರ್ ಕಾರ್ಡ್ ತಂತ್ರಜ್ಞಾನವನ್ನೇ ಹಸುಗಳಿಗೂ ವಿಸ್ತರಿಸಲು ಚಿಂತಿಸಲಾಗಿದೆ. ಬಯೋಮೆಟ್ರಿಕ್ಸ್ ಬಗ್ಗೆ ನಂದನ್ ನಿಲೇಕಣಿ ಅವರ ಜೊತೆಗೂ ಪ್ರಧಾನಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಮೊದಲು ಪೂರ್ವಭಾವಿಯಾಗಿ 'ಗೋಹತ್ಯಾ ನಿಷೇಧ ಕಾನೂನು' ಜಾರಿಗೆ ತಂದಿರುವ ಮಹಾರಾಷ್ಟ್ರದಲ್ಲಿ ಪರೀಕ್ಷಿಸಿ ನಂತರ ರಾಷ್ಟ್ರದಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ. ಸಭೆಯಲ್ಲಿ ನೆರೆದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಈ ಹೊಸ ಮಸೂದೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು ಶಿವಸೇನೆ ಬೆಂಬಲ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ವಿಷಯವಾಗಿ ಶಿವಸೇನಾ ಮುಖ್ಯಸ್ಥ ಉದ್ಧವ ಠಾಕ್ರೆ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ವಾರ ವಿಧಾನಸಭೆಯಲ್ಲಿ ಈ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ಮಾಲೆಗಾವ್ ಪ್ರದೇಶದಲ್ಲಿ ಸರ್ಕಾರದ ತಜ್ಞರ ತಂಡ ಹಸುಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ಓದಿದ್ದಕ್ಕೆ ಧನ್ಯವಾದಗಳು.. ಇಂದು ಏಪ್ರಿಲ್ ೧.. ನಮ್ಮೆಲ್ಲರ ದಿನ! ನಕ್ಕುಬಿಡಿ