ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ: ವರದಿ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿದ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳೇ ಗರಂ ಆಗಿರುವ ಹೊತ್ತಿನಲ್ಲಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದ್ದು, ತಮ್ಮ ಮಲಸಹೋದರ ವೈಭವ್ ಪಾಂಡ್ಯರಿಂದ ವಂಚನೆಗೊಳಗಾದ ಬಳಿಕ ಅವರು ಅಂಬಾನಿ ಕುಟುಂಬದಿಂದ ಆಶ್ರಯ ಮತ್ತು ಬೆಂಬಲ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ. ನವದೆಹಲಿ: ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡ ಸೇರಿದ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳೇ ಗರಂ ಆಗಿರುವ ಹೊತ್ತಿನಲ್ಲಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದ್ದು, ತಮ್ಮ ಮಲಸಹೋದರ ವೈಭವ್ ಪಾಂಡ್ಯರಿಂದ ವಂಚನೆಗೊಳಗಾದ ಬಳಿಕ ಅವರು ಅಂಬಾನಿ ಕುಟುಂಬದಿಂದ ಆಶ್ರಯ ಮತ್ತು ಬೆಂಬಲ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರಿಗೆ ಪಾಲಿಮರ್‌ನ ಪಾಲುದಾರಿಕೆ ಉದ್ಯಮದಲ್ಲಿ 4.3 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ, ಇವರ ಮಲ ಸಹೋದರನಾದ ವೈಭವ್ ಪಾಂಡ್ಯನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಕ್ರಿಕೆಟಿಗರಾದ ಸಹೋದರರಿಬ್ಬರು ಮುಂಬೈನಲ್ಲಿ 2021ರಲ್ಲಿ ತಮ್ಮ ಮಲ ಸಹೋದರನೊಂದಿಗೆ ಪಾಲುದಾರಿಕೆ ಆಧರಿತ ಪಾಲಿಮರ್ ಉದ್ಯಮವನ್ನು ಆರಂಭಿಸಿದ್ದರು. ಸಹೋದರರಿಬ್ಬರು ತಲಾ ಶೇ 40ರಷ್ಟು ಬಂಡವಾಳ ಹೂಡಿದರೆ, ವೈಭವ್ ಶೇ 20ರಷ್ಟು ಪಾಲು ಹೊಂದಿದ್ದರು. ಈ ಉದ್ಯಮದ ದೈನಂದಿನ ವಹಿವಾಟಿನ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿದ್ದ ಎನ್ನಲಾಗಿದೆ.ತನ್ನ ಸಹೋದರರಿಗೆ ವಿಷಯ ತಿಳಿಸದ ವೈಭವ್, ಅದೇ ವ್ಯವಹಾರದಲ್ಲಿ ಮತ್ತೊಂದು ಕಂಪನಿ ಸ್ಥಾಪಿಸುವ ಮೂಲಕ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾನೆ. ಇದರಿಂದಾಗಿ ಮೂಲ ಕಂಪನಿಯ ಲಾಭ ಕಡಿಮೆಯಾಗುವುದರ ಜೊತೆಗೆ ಅಂದಾಜು 3 ಕೋಟಿ ನಷ್ಟ ಉಂಟಾಗಿದೆ. ಈ ಅವಧಿಯಲ್ಲಿ ಈತನ ವೈಯಕ್ತಿಕ ಲಾಭ ಶೇ 20 ರಿಂದ ಶೇ 33ರಷ್ಟು ಹೆಚ್ಚಿದೆ. 1 ಕೋಟಿ ಹಣವನ್ನು ಪಾಲುದಾರಿಕೆಯ ಖಾತೆಯಿಂದ ಸ್ವಂತಕ್ಕೆ ಬಳಸಿಕೊಂಡಿದ್ದಾನೆ. ನಷ್ಟಕ್ಕೀಡಾದ ಕ್ರಿಕೆಟಿಗರು ನೇರವಾಗಿ ಭೇಟಿಯಾದಾಗ, ನಿಮ್ಮ ಖ್ಯಾತಿಗೆ ಕಳಂಕ ತರುವೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.ಇದರಿಂದಾಗಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ ಹಾರ್ದಿಕ್ ಪಾಂಡ್ಯ ಆರ್ಥಿಕ ಸ್ಥಿರತೆಗಾಗಿ ಅಂಬಾನಿ ಕುಟುಂಬದತ್ತ ಮುಖ ಮಾಡಿದ್ದಾರೆ. ಅಂಬಾನಿ ಸಂಸ್ಥೆಯು ಅವರಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಅವಕಾಶ ನೀಡಿದೆ. ಆದರೆ, ಪಾಂಡ್ಯ ಅವರಿಗೆ ಷರತ್ತು ವಿಧಿಸಿತ್ತು ಎನ್ನಲಾಗಿದೆ. ಅದೇನೆಂದರೆ, ಅಂಬಾನಿ ಕುಟುಂಬದ ಒಡೆತನದ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್‌ಗೆ ಪಾಂಡ್ಯ ಅವರು ನಿಷ್ಠೆಯಿಂದಿರಬೇಕು ಎಂದು ವರದಿಯಾಗಿದೆ.