ಐಪಿಎಲ್ 2020: ಈ ಬಾರಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ: ಚೆನ್ನೈ ನಾಯಕ ಎಂಎಸ್ ಧೋನಿ ಐಪಿಎಲ್ 2020 ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಹುತೇಕ ಹೊರ ಬಿದ್ದಿದ್ದು, ಈ ಬಾರಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ಶಾರ್ಜಾ: ಐಪಿಎಲ್ 2020 ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಹುತೇಕ ಹೊರ ಬಿದ್ದಿದ್ದು, ಈ ಬಾರಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ.ನಿನ್ನೆ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಮಾತನಾಡಿದ ನಾಯಕ ಧೋನಿ, ಈ ವರ್ಷ ನಮ್ಮದಲ್ಲ. 8 ಅಥವಾ 10 ವಿಕೆಟ್‌ಗಳಿಂದ ಸೋತರೂ ಅದು ಅಷ್ಟೇನೂ ಮುಖ್ಯವಲ್ಲ. ಆದರೆ, ಈ ಹಂತದಲ್ಲಿ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಇದರಿಂದ ನಿಜಕ್ಕೂ ನೋವುಂಟಾಗಿದೆ. ತಂಡದ ಹಿನ್ನೆಡೆಗೆ 100 ಕಾರಣಗಳು ಇರಬಹುದು, ಆದರೆ ಪರಿಸ್ಥಿತಿಗೆ ತಕ್ಕಂತೆ ನಮ್ಮ ಸಾಮರ್ಥ್ಯವನ್ನು ತೋರಿಸುವಲ್ಲಿ ನಾವು ಎಡವಿದ್ದೇವೆ. ಜೊತೆಗೆ ಅದೃಷ್ಟ ಕೂಡ ಈ ಬಾರಿ ತಂಡದ ಪರವಾಗಿಲ್ಲ ಎಂದು ಹೇಳಿದ್ದಾರೆ.ಅಂಬಟಿ ರಾಯುಡು ಗಾಯಗೊಂಡಿದ್ದರು. ಜೊತೆಗೆ, ನಾವು ಮೊದಲು ಬ್ಯಾಟಿಂಗ್‌ ಮಾಡಲು ಬಯಸಿದ ಪಂದ್ಯಗಳಲ್ಲಿ ನಾವು ಟಾಸ್‌ ಗೆಲ್ಲುತ್ತಿರಲಿಲ್ಲ. ಬಳಿಕ ಗುರಿ ಬೆನ್ನತ್ತಿದ್ದ ವೇಳೆ ಇಬ್ಬನಿ ಹೆಚ್ಚು ಬೀಳುತ್ತಿತ್ತು. ಒಟ್ಟಾರೆ ಬ್ಯಾಟಿಂಗ್‌ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ್ದು ನಿಜ. ಆದರೆ, ಅದು ಆಟದ ಒಂದು ಭಾಗವಷ್ಟೇ. ಮುಂಬರುವ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಯೋಚಿಸುವುದು ಹೆಚ್ಚು ಸೂಕ್ತ ಎಂದು ನಾನು ಭಾವಿಸುತ್ತೇನೆ. ಉಳಿದ ಮೂರು ಪಂದ್ಯಗಳಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ. ಮುಂದಿನ ವರ್ಷ ಯುವಕರನ್ನು ಗಮನದಲ್ಲಿಟ್ಟುಕೊಂಡು ಯಾರು ಉತ್ತಮ ಬ್ಯಾಟಿಂಗ್‌ ಮಾಡುತ್ತಾರೆ. ಯಾರು ಒತ್ತಡಕ್ಕೆ ಅನುಗುಣವಾಗಿ ಬೌಲಿಂಗ್‌ ಮಾಡುತ್ತಾರೆ ಎಂಬುದನ್ನು ಪರಿಗಣಿಸಿ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.ಇನ್ನು ಹಾಲಿ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ಆಡಿರುವ 11 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎಂಟರಲ್ಲಿ ಸೋತಿದೆ. 6 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಇನ್ನೂ ಮೂರು ಪಂದ್ಯಗಳನ್ನಾಡಲಿದ್ದು, ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ.