ರೈತ ವಿರೋಧಿ ಭಾವನೆ ನಿಮ್ಮ DNAಯಲ್ಲೇ ಇದೆ: ಕಾಂಗ್ರೆಸ್ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕಿಡಿ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ 2013-14 ರಿಂದ ಕೃಷಿ ಕ್ಷೇತ್ರಕ್ಕೆ ಬಜೆಟ್ ವೆಚ್ಚವನ್ನು ಹಲವು ಪಟ್ಟು ಹೆಚ್ಚಿಸಿದೆ. ರೈತರು ರಸಗೊಬ್ಬರಗಳನ್ನು ಅತಿಹೆಚ್ಚು ಸಬ್ಸಿಡಿಗಳ ಮೂಲಕ ಪಡೆಯುತ್ತಿದ್ದಾರೆ. ನವದೆಹಲಿ: ರೈತ ವಿರೋಧಿ ‌ಭಾವನೆ ನಿಮ್ಮ ಡಿಎನ್‌ಎಯಲ್ಲೇ ಇದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಮೋದಿ ಸರ್ಕಾರ ಕಳೆದ 10 ವರ್ಷದ ಆಡಳಿತದಲ್ಲಿ ಕೃಷಿ ವಲಯದಲ್ಲಿ ಏನನ್ನೂ ಮಾಡಿಲ್ಲ, ಕೊನೆ ಪಕ್ಷ ಬಜೆಟ್‌ನಲ್ಲಿಯೂ ಯಾವುದೇ ನೆರವು ನೀಡಿಲ್ಲ. ಮೋದಿ ಸರ್ಕಾರ ಕೃಷಿ ವಲಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಚೌಹಾಣ್ ಅವರು ಪ್ರತಿಕ್ರಿಯೆ ನೀಡಿದರು.ರೈತ ವಿರೋಧಿ ಎಂಬುದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿದೆ. ಮೊದಲಿನಿಂದಲೂ ಕಾಂಗ್ರೆಸ್‌ನ ಆದ್ಯತೆಗಳು ತಪ್ಪಾಗಿಯೇ ಇದ್ದವು. ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವಿವರಿಸಿದರು.ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ 2013-14 ರಿಂದ ಕೃಷಿ ಕ್ಷೇತ್ರಕ್ಕೆ ಬಜೆಟ್ ವೆಚ್ಚವನ್ನು ಹಲವು ಪಟ್ಟು ಹೆಚ್ಚಿಸಿದೆ. ರೈತರು ರಸಗೊಬ್ಬರಗಳನ್ನು ಅತಿಹೆಚ್ಚು ಸಬ್ಸಿಡಿಗಳ ಮೂಲಕ ಪಡೆಯುತ್ತಿದ್ದಾರೆ. ಜೊತೆಗೆ ಕೃಷಿಗೆ ಅಗತ್ಯವಾದ ಪೋಷಕಾಂಶದ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದಾರೆ ಎಂದು ಹೇಳಿದರು.ಪ್ರಸ್ತುತ ಸರ್ಕಾರವು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡುವುದು, ವಿಪತ್ತುಗಳ ಸಂದರ್ಭದಲ್ಲಿ ಸಾಕಷ್ಟು ಪರಿಹಾರ ಸೇರಿದಂತೆ ಹಲವು ಆದ್ಯತೆಗಳನ್ನು ನಿಗದಿಪಡಿಸಿದೆ. ಮೋದಿ ಸರ್ಕಾರ ರೈತರನ್ನು ದೇವರೆಂದು ಪರಿಣಗಿಸಿದೆಯೆ ಹೊರತು, ವೋಟ್‌ಬ್ಯಾಕ್‌ನಂತೆ ಅಲ್ಲ ಎಂದು ತಿಳಿಸಿದರು.