ರೈಲು ಬರುವ ವೇಳೆ ಹಳಿ ಮೇಲೆ ಸಿಲುಕಿದ 40 ಮಕ್ಕಳಿದ್ದ ಶಾಲಾ ಬಸ್... ಮುಂದೇನಾಯಿತು? ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಖಪೇರ್‌ಖೇಡಾದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಾಗ್ಪುರ: ನಾಗ್ಪುರದ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಬರುತ್ತಿದ್ದ ವೇಳೆ ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ ರೈಲ್ವೆ ಹಳಿಗಳ ಮೇಲೆ ಸಿಲುಕಿದ್ದು, ಲೋಕೋ ಪೈಲಟ್ ಮತ್ತು ಸ್ಥಳೀಯರ ಸಮಯೋಚಿತ ಪ್ರಯತ್ನ 40 ವಿದ್ಯಾರ್ಥಿಗಳ ಜೀವ ಉಳಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಖಪೇರ್‌ಖೇಡಾದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಲೆವೆಲ್ ಕ್ರಾಸಿಂಗ್‌ನಲ್ಲಿ ರೆಡ್ ಸಿಗ್ನಲ್ ಇದ್ದರೂ ಶಾಲಾ ಬಸ್ ಚಾಲಕ ಬಸ್ ನಿಲ್ಲಿಸದೆ ಮುಂದೆ ಸಾಗಿದ್ದಾರೆ. ಬಸ್ ಹಳಿಗಳ ಮೇಲೆ ಇದ್ದಾಗ ಲೆವೆಲ್ ಕ್ರಾಸಿಂಗ್‌ನ ಎರಡೂ ಗೇಟ್‌ಗಳನ್ನು ಮುಚ್ಚಲಾಯಿತು.ಇದೇ ಸಮಯದಲ್ಲಿ ಮಧ್ಯ ಪ್ರದೇಶದ ಛಿಂದ್ವಾರಾದಿಂದ ನಾಗ್ಪುರದ ಇಟ್ವಾರಿಗೆ ಪ್ಯಾಸೆಂಜರ್ ರೈಲು ಹೋಗುತ್ತಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಆಗಮಿಸುತ್ತಿದ್ದ ರೈಲು ಚಾಲಕನಿಗೆ ರೈಲು ನಿಲ್ಲಿಸುವಂತೆ ಸೂಚಿಸಲು ಸ್ಥಳೀಯರು ಹಳಿಗಳ ಮೇಲೆ ಆಗಮಿಸಿ ಅಪಾಯದ ಬಗ್ಗೆ ಸೂಚನೆ ನೀಡಿದ್ದಾರೆ.ಇನ್ನು ಲೆವೆಲ್ ಕ್ರಾಸಿಂಗ್ ಮಧ್ಯೆ ಶಾಲಾ ಬಸ್ ಇರುವುದನ್ನು ಕಂಡ ಗೇಟ್ ಕೀಪರ್ ವಾಕಿಟಾಕಿ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಳಿಗಳ ಮೇಲೆ ಅನೇಕ ಜನರು ಜಮಾಯಿಸಿದ್ದನ್ನು ಗಮನಿಸಿದ ಲೋಕೋ ಪೈಲಟ್ ಏನೋ ಸರಿಯಿಲ್ಲ ಎಂದು ಅರಿತು ಬ್ರೇಕ್ ಹಾಕಿದ್ದಾರೆ. ಹೀಗಾಗಿ ರೈಲು ಲೆವೆಲ್ ಕ್ರಾಸಿಂಗ್‌ ಸಮೀಪ ಬಂದು ರೈಲು ನಿಂತಿದೆ.ನಂತರ ಹತ್ತು ನಿಮಿಷಗಳಲ್ಲಿ ಗೇಟ್ ಓಪನ್ ಮಾಡಲಾಯಿತು ಮತ್ತು ಶಾಲಾ ಬಸ್ ಸುರಕ್ಷಿತವಾಗಿ ಇನ್ನೊಂದು ಬದಿಗೆ ದಾಟಿತು ಎಂದು ಅಧಿಕಾರಿ ತಿಳಿಸಿದ್ದಾರೆ.ಖಪೇರ್‌ಖೇಡಾ ಪೊಲೀಸ್ ಠಾಣೆ ಪ್ರಭಾರಿ ಧನಾಜಿ ಝಲಕ್ ಮಾತನಾಡಿ, ರೆಡ್ ಸಿಗ್ನಲ್ ಕಂಡರೂ ಮತ್ತು ಗೇಟ್‌ಗಳು ಆಟೋಮ್ಯಾಟಿಕ್ ಬಂದ್ ಆಗುತ್ತವೆ ಎಂದು ತಿಳಿದಿದ್ದರೂ ಶಾಲಾ ಬಸ್ ಚಾಲಕ ಬಸ್ ನಿಲ್ಲಿಸದೇ ಮುಂದೆ ಸಾಗಿದ್ದು ತಪ್ಪು ಎಂದಿದ್ದಾರೆ.