- : ಸಾಮಾಜಿಕ ಮಾಧ್ಯಮ ಅಂಶಗಳನ್ನು ವಾದಮಂಡನೆಗೆ ಬಳಸಬೇಡಿ: ವಕೀಲರ ಕಿವಿಹಿಂಡಿದ ಚಂದ್ರಚೂಡ್! ನಾವು ಸಾಮಾಜಿಕ ಮಾಧ್ಯಮದಲ್ಲಿ ಏನು ಓದುತ್ತೇವೆಯೋ ಅದರ ಆಧಾರದ ಮೇಲೆ ಕಾನೂನು ವಾದಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು. ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿನ ಅಂಶಗಳನ್ನು ವಾದ ಮಂಡನೆಗೆ ಬಳಸಿಕೊಳ್ಳಬೇಡಿ ಎಂದು ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಿವಿಮಾತು ಹೇಳಿದ್ದಾರೆ.ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ವರದಿಯಲ್ಲಿ ಸಂತ್ರಸ್ತೆಯ ದೇಹದಲ್ಲಿ "151 ಮಿಗ್ರಾಂ ವೀರ್ಯ" ಇತ್ತು ಎಂಬ ವಾದವನ್ನು ತಳ್ಳಿ ಹಾಕಿದ ಸಿಜೆಐ ಚಂದ್ರಚೂಡ್ ನ್ಯಾಯಾಲಯದಲ್ಲಿ ವಾದಗಳಿಗೆ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಬೇಡಿ ಎಂದು ಕಿಡಿಕಾರಿದ್ದಾರೆ.ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ವಕೀಲರ ಲಾದಮಂಡನೆಗೆ ಖಂಡನೆ ವ್ಯಕ್ತಪಡಿಸಿದರು. ವಿಚಾರಣೆಯ ಸಂದರ್ಭದಲ್ಲಿ, ಪಿಎಂಆರ್ (ಮರಣೋತ್ತರ ವರದಿ) 151 ಮಿಗ್ರಾಂ (ಮಿಲಿಗ್ರಾಂ) ವೀರ್ಯದ ಬಗ್ಗೆ ಮಾತನಾಡುತ್ತದೆ, ಅದು ಎಂಎಲ್ (ಮಿಲಿಲೀಟರ್) ನಲ್ಲಿದೆ ಎಂದು ವಕೀಲರೊಬ್ಬರು ಹೇಳಿದರು.ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, "ಇದನ್ನು ಗೊಂದಲಗೊಳಿಸಬೇಡಿ. ನ್ಯಾಯಾಲಯದಲ್ಲಿ ವಾದ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಡಿ. ನಾವು ನಿರ್ದಿಷ್ಟವಾಗಿ ಈಗ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿಮ್ಮ ಮುಂದಿಟ್ಟಿದ್ದೇವೆ ಮತ್ತು ಆ 151 ಗ್ರಾಂ ಏನನ್ನು ಉಲ್ಲೇಖಿಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಏನು ಓದುತ್ತೇವೆಯೋ ಅದರ ಆಧಾರದ ಮೇಲೆ ಕಾನೂನು ವಾದಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.ಸಂತ್ರಸ್ಥೆಯ ದೇಹದಲ್ಲಿ 150 ಮಿಗ್ರಾಂ ವೀರ್ಯ ಕಂಡುಬಂದಿದೆ ಎಂದು ಈ ಹಿಂದೆ ವರದಿಗಳು ಬಂದವು, ಇದರಿಂದಾಗಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಆಕೆಯ ಕುಟುಂಬ ಕೂಡ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲೂ ಇದೇ ರೀತಿಯ ಅಂಶ ಉಲ್ಲೇಖಿಸಲಾಗಿತ್ತು ಎಂದು ಹೇಳಲಾಗಿದೆ.ಮಾಹಿತಿ ನಿರಾಕರಿಸಿದ ಕೋಲ್ಕತ್ತಾ ಪೊಲೀಸ್ ಕಮಿಷನರ್ಈ ಮಾಹಿತಿಯನ್ನು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಇಂತಹ ವರದಿಗಳನ್ನು ನಿರಾಕರಿಸಿದ್ದರು. 150 ಗ್ರಾಂ ವೀರ್ಯ ಸಿಕ್ಕಿದೆ ಎಂದು ಯಾರೋ ಹೇಳಿದರು. ಅವರಿಗೆ ಈ ರೀತಿಯ ಮಾಹಿತಿ ಎಲ್ಲಿಂದ ಸಿಕ್ಕಿದೆ ಎಂದು ನನಗೆ ತಿಳಿದಿಲ್ಲ ಮತ್ತು ಇದು ಎಲ್ಲಾ ರೀತಿಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಜನರು ಅದನ್ನು ನಂಬಲು ಪ್ರಚೋದಿಸುತ್ತಿದ್ದಾರೆ ಮತ್ತು ಜನರು ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.