ವಯನಾಡ್ ಭೂಕುಸಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ: ವೈಮಾನಿಕ ಸಮೀಕ್ಷೆ, ಪರಿಶೀಲನೆ ವೈಮಾನಿಕ ಸಮೀಕ್ಷೆಯ ನಂತರ ಅವರು ಇಲ್ಲಿನ ಕಲ್ಪೆಟ್ಟಾದಲ್ಲಿರುವ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿದ ಪ್ರಧಾನಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕೆಲವು ಭೂಕುಸಿತ ಪ್ರದೇಶಗಳಿಗೆ ತೆರಳಿದರು. ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು.ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಂಡ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳನ್ನು ವೀಕ್ಷಿಸಿದರು.ಪ್ರಧಾನಿಯವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಇದ್ದರು.ವೈಮಾನಿಕ ಸಮೀಕ್ಷೆಯ ನಂತರ ಅವರು ಇಲ್ಲಿನ ಕಲ್ಪೆಟ್ಟಾದಲ್ಲಿರುವ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿದ ಪ್ರಧಾನಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕೆಲವು ಭೂಕುಸಿತ ಪ್ರದೇಶಗಳಿಗೆ ತೆರಳಿದರು.ಅಲ್ಲಿ ದುರಂತದ ನಂತರ ಸೇನೆಯು 190 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿದೆ. ಪ್ರಧಾನಿ ಸೇತುವೆಯ ಮೇಲೆ ನಡೆದು, ಹಾನಿಯ ಸಮೀಕ್ಷೆ ನಡೆಸಿದರು.ಚೂರಲ್ಮಲಾ ತಲುಪಿದ ನಂತರ ಮೋದಿ ಅವರು ರಕ್ಷಣಾ ಸಿಬ್ಬಂದಿ, ರಾಜ್ಯ ಮುಖ್ಯ ಕಾರ್ಯದರ್ಶಿ ವಿ ವೇಣು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಬಂಡೆಗಳು ಮತ್ತು ಅವಶೇಷಗಳಿಂದ ಆವೃತವಾದ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಸಮೀಕ್ಷೆ ನಡೆಸಿದರು.ಸಂತ್ರಸ್ತರು ಮತ್ತು ಬದುಕುಳಿದವರನ್ನು ಭೇಟಿ ಮಾಡಲು ಮತ್ತು ಸಂವಾದ ನಡೆಸಲು ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಪ್ರಧಾನಿ ಅವರು ಪರಿಹಾರ ಶಿಬಿರಕ್ಕೆ ಭೇಟಿ ನೀಡಿದರು.ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರವು ಕೇಂದ್ರದಿಂದ 2,000 ಕೋಟಿ ರೂಪಾಯಿ ನೆರವನ್ನು ಕೋರಿದೆ. ಜುಲೈ 30 ರಂದು ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 500 ಜನರು ಮೃತಪಟ್ಟಿದ್ದಾರೆ.