ತಮಿಳುನಾಡು ರಾಜ್ಯಾಧ್ಯಕ್ಷನ ಹತ್ಯೆ: ಮೃತದೇಹವನ್ನು ಬಿಎಸ್ ಪಿ ಕಚೇರಿಯಲ್ಲಿ ಸಮಾಧಿ ಮಾಡುವಂತಿಲ್ಲ- ಕೋರ್ಟ್ ಆರ್ಮ್‌ಸ್ಟ್ರಾಂಗ್ ಅವರ ದೇಹವನ್ನು ಪಕ್ಕದ ತಿರುವಳ್ಳುವರ್ ಜಿಲ್ಲೆಯಲ್ಲಿ ಖಾಸಗಿ ಒಡೆತನದ ಒಂದು ಎಕರೆ ಜಾಗದಲ್ಲಿ ಸಮಾಧಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಚೆನ್ನೈ: ಶುಕ್ರವಾರದಂದು (ಜು.05) ರಂದು ಹತ್ಯೆಗೀಡಾದ ತಮಿಳುನಾಡು ಬಿಎಸ್ ಪಿ ರಾಜ್ಯಾಧ್ಯಕ್ಷನ ಮೃತದೇಹವನ್ನು ಬಿಎಸ್ ಪಿ ಕಚೇರಿಯಲ್ಲಿ ಸಮಾಧಿ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.ಆರ್ಮ್‌ಸ್ಟ್ರಾಂಗ್ ಅವರ ದೇಹವನ್ನು ಪಕ್ಕದ ತಿರುವಳ್ಳುವರ್ ಜಿಲ್ಲೆಯಲ್ಲಿ ಖಾಸಗಿ ಒಡೆತನದ ಒಂದು ಎಕರೆ ಜಾಗದಲ್ಲಿ ಸಮಾಧಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಬಿಎಸ್‌ಪಿ ಬೆಂಬಲಿಗರು ಶವಯಾತ್ರೆಯನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಕೋರ್ಟ್ ಹೇಳಿದೆ.ಇದಕ್ಕೂ ಮುನ್ನ, ಡಿಎಂ ಕೆ ನೇತೃತ್ವದ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಹತ್ಯೆಯಾದ ಬಿಎಸ್‌ಪಿ ನಾಯಕನ ಪತ್ನಿ ಕೆ ಪೊರ್ಕೋಡಿ ಅವರು ಚೆನ್ನೈನ ಪಕ್ಷದ ಕಚೇರಿಯಲ್ಲಿ ಶವ ಸಂಸ್ಕಾರ ಮಾಡಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2,600 ಚದರ ಅಡಿ ಬಿಎಸ್‌ಪಿ ಒಡೆತನದಲ್ಲಿದೆ ಎಂದು ಅರ್ಜಿದಾರರು ವಾದಿಸಿದರು.ನ್ಯಾಯಮೂರ್ತಿ ವಿ ಭವಾನಿ ಸುಬ್ಬರಾಯನ್ ಅವರು, ಮೊದಲೇ ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಸಮಾಧಿ ಮಾಡಲು ಅನುಮತಿಸಲಾಗಿದೆ ಮತ್ತು ಅರ್ಜಿದಾರರಿಗೆ ರಾಜ್ಯ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಹೇಳಿದ್ದಾರೆ.