ಜಾರ್ಖಂಡ್ ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು; ಎತ್ತಿ ಹೊರಹಾಕಿದ ಮಾರ್ಷಲ್‌ಗಳು ಅಮಾನತುಗೊಂಡ ನಂತರ ಸದನದಿಂದ ಹೊರಬರಲು ನಿರಾಕರಿಸಿದ ಕಾರಣ ಕೇಸರಿ ಪಕ್ಷದ 18 ಶಾಸಕರನ್ನು ಮಾರ್ಷಲ್‌ಗಳು ಇಂದು ಸಹ ಸದನದಿಂದ ಎತ್ತಿಕೊಂಡು ಹೋಗಿ ಹೊರ ಹಾಕಿದರು. ರಾಂಚಿ: ಹಿಂದಿನ ದಿನ ಮಾರ್ಷಲ್‌ಗಳಿಂದ ವಿರೋಧ ಪಕ್ಷದ ಶಾಸಕರನ್ನು ಹೊರಹಾಕಿದ್ದನ್ನು ವಿರೋಧಿಸಿ ಮತ್ತು ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಮ್ಮ ಪ್ರಶ್ನಿಗೆ ಉತ್ತರಿಸಲು ನಿರಾಕರಿಸಿದ್ದನ್ನು ಖಂಡಿಸಿ ಗುರುವಾರ ಸದನದಲ್ಲಿ ಗದ್ದಲ ಸೃಷ್ಟಿಸಿದ 18 ಬಿಜೆಪಿ ಶಾಸಕರನ್ನು ಆಗಸ್ಟ್ 2 ರ ಮಧ್ಯಾಹ್ನ 2 ಗಂಟೆಯವರೆಗೆ ಜಾರ್ಖಂಡ್ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.ಅಮಾನತುಗೊಂಡ ನಂತರ ಸದನದಿಂದ ಹೊರಬರಲು ನಿರಾಕರಿಸಿದ ಕಾರಣ ಕೇಸರಿ ಪಕ್ಷದ 18 ಶಾಸಕರನ್ನು ಮಾರ್ಷಲ್‌ಗಳು ಇಂದು ಸಹ ಸದನದಿಂದ ಎತ್ತಿಕೊಂಡು ಹೋಗಿ ಹೊರ ಹಾಕಿದರು.ಸದನ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕರು ಬಾವಿಗೆ ನುಗ್ಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸದನದ ಬಾವಿಯಲ್ಲಿದ್ದ ಕೆಲವು ದಾಖಲೆಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಲಾಪ ಆರಂಭಕ್ಕೂ ಮುನ್ನವೇ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತೀವ್ರ ವಾಗ್ವಾದಕ್ಕಿಳಿದಿದ್ದು ಕಂಡುಬಂತು.ಮಾರ್ಷಲ್‌ಗಳು ತಮ್ಮನ್ನು ಸದನದಿಂದ ಹೊರ ಹಾಕಿದ ನಂತರ ಜಾರ್ಖಂಡ್‌ನ ಹಲವಾರು ಬಿಜೆಪಿ ಶಾಸಕರು ಬುಧವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.