ಜಾರ್ಖಂಡ್ ಭೂ ಹಗರಣ: ಮಾಜಿ ಸಿಎಂ ಹೇಮಂತ್ ಸೊರೆನ್ ನ್ಯಾಯಾಂಗ ಬಂಧನ 14 ದಿನ ವಿಸ್ತರಣೆ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಇಡಿ ಬಂಧಿಸಿತ್ತು. ರಾಂಚಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನ್ಯಾಯಾಂಗ ಬಂಧನವನ್ನು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಹದಿನಾಲ್ಕು ದಿನಗಳವರೆಗೆ ವಿಸ್ತರಿಸಿದೆ.ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಇಡಿ ಬಂಧಿಸಿತ್ತು. ಜಾರ್ಖಂಡ್ ಮಾಜಿ ಸಿಎಂ ಪ್ರಸ್ತುತ ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿದ್ದಾರೆ.ಸೊರೆನ್ ಮತ್ತು ಇತರ 11 ಆರೋಪಿಗಳನ್ನು ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ.ಹೇಮಂತ್ ಸೊರೆನ್ ಹೊರತುಪಡಿಸಿ, ಅಮಾನತುಗೊಂಡ ಬರ್ಗೈ ವಲಯದ ಕಂದಾಯ ಉಪನಿರೀಕ್ಷಕ ಭಾನು ಪ್ರತಾಪ್, ಜೆಎಂಎಂ ನಾಯಕ ಅಂತು ಟಿರ್ಕಿ, ಎಂಡಿ ಸದ್ದಾಂ, ಎಂಡಿ ಅಫ್ಸರ್ ಅಲಿ, ವಿಪಿನ್ ಸಿಂಗ್, ಪ್ರಿಯರಂಜನ್ ಸಹಾಯ್, ಇರ್ಷಾದ್ ಅಖ್ತರ್, ಶೇಖರ್ ಕುಶ್ವಾಹಾ, ಎಂಡಿ ಇರ್ಷಾದ್, ಕೋಲ್ಕತ್ತಾದ ರಿಜಿಸ್ಟ್ರಾರ್ ಆಫ್ ಅಶ್ಯೂರೆನ್ಸ್‌ನ ಇಬ್ಬರು ಉದ್ಯೋಗಿಗಳಾದ ತಪಸ್ ಘೋಷ್ ಮತ್ತು ಸಂಜಿತ್ ಕುಮಾರ್ ಕೂಡ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.